ಅಂಬರೀಷ
ಅಂಬರೀಷ: ಹಿಂದೂ ಪುರಾಣಗಳಲ್ಲಿ ಅವತರಿಸುವ ರಾಜರುಗಳಲ್ಲಿ ಮುಖ್ಯನಾದವ. ತನ್ನ ಸತ್ಯ, ದಾನಗುಣದಿಂದ ಕೀರ್ತಿ ಪಡೆದ ರಾಜ.
ಹುಟ್ಟುವಳಿ
ಇಕ್ಷ್ವಾಕು ವಂಶದ ನಭಗ ರಾಜನ ಮಗನಾಗಿ ಜನಿಸಿದ ಅಂಬರೀಷ, ಬಾಲ್ಯದಿಂದಲೇ ಸತ್ಯ ನಿಷ್ಠೆಯನ್ನು ಅಳವಡಿಸಿಕೊಂಡಿರುತ್ತಾನೆ. ಅಂಬರೀಷನಿಗೆ ರಮಾಕಾಂತ, ಮುಚುಕುಂದರೆಂಬ ತಮ್ಮಂದಿರೂ , ಶುನಃಶೇಪನೆಂಬ ಮಗನೂ ಇರುತ್ತಾನೆ..[೧]ಅಂಬರೀಷನು ಏಳು ದಿನಗಳಲ್ಲಿ ಭೂಮಿಯನ್ನು ಗೆಲ್ಲುತ್ತಾನೆ ಎಂಬುದು ಐತಿಹ್ಯ.[೨]
ಆಳ್ವಿಕೆ
ಮಹಾವಿಷ್ಣುವಿನ ಭಕ್ತನಾಗಿ ವೃತ-ವಿಧಿಗಳನ್ನೂ, ತನ್ನ ರಾಜಧಾನಿ ಅಯೋಧ್ಯೆಯನ್ನೂ ಅಂಬರೀಷನು ಯುಕ್ತ ರೀತಿಯಿಂದ ಪಾಲಿಸುತ್ತಾ ಇರುತ್ತಾನೆ.
ಭಗವತ ಪುರಾಣದಲ್ಲಿ ಅಂಬರೀಷ
ಭಗವತ ಪುರಾಣದ ಉಲ್ಲೇಖದಂತೆ, ವಿಷ್ಣು ಭಕ್ತನಾದ ಅಂಬರೀಷ, ಸದಾ ಸತ್ಯವನ್ನು ನುಡಿಯುವ ಗುಣ ಹೊಂದಿರುತ್ತಾನೆ. ಮಹಾವಿಷ್ಣುವನ್ನು ಸಂಪ್ರೀತಗೊಳಿಸಲು ದೊಡ್ಡ ಯಾಗವನ್ನು ನಡೆಸುತ್ತಾನೆ. ಮಹಾವಿಷ್ಣು ಈ ಯಾಗದಿಂದ ಆನಂದಹೊಂದಿ, ಸುದರ್ಶನ ಚಕ್ರವನ್ನು ಅಂಬರೀಷನಿಗೆ ದಯಪಾಲಿಸುತ್ತಾನೆ.ಆ ಚಕ್ರ ಅಂಬರೀಷನ ರಾಜ್ಯಕ್ಕೆ ಸುಭಿಕ್ಷ ನೀಡುತ್ತದೆ. ಏಕಾದಶಿಯ ದಿನ ಅಂಬರೀಷ ಉಪವಾಸ ಮಾಡಿ, ದ್ವಾದಶಿಯ ದಿನ ಅನ್ನದಾನ ಮಾಡುವ ವೃತ ನಡೆಸಿರುತ್ತಾನೆ.ಇಂಥ ಒಂದು ಏಕಾದಶಿಯ ದಿನ, ಉಪವಾಸ ಮುಗಿವ ಸಮಯದಲ್ಲಿ ದೂರ್ವಾಸ ಮುನಿ,ಅಂಬರೀಷನ ಬಳಿ ಆಗಮಿಸುತ್ತಾನೆ. ಮುನಿಯನ್ನು ಬರಮಾಡಿಕೊಂಡು, ಊಟಕ್ಕೆ ಮುನ್ನ ತಾನು ಸ್ನಾನ ಮುಗಿಸಿ ಬರುವುದಾಗಿ, ಅಲ್ಲಿಯವರೆಗೆ ತಡೆಯಬೇಕೆಂದು ದೂರ್ವಾಸ ಮುನಿಗೆ ಬೇಡಿಕೊಳ್ಳುತ್ತಾನೆ. ಸ್ನಾನ ಮುಗಿಸಿ ಉಪವಾಸ ಮುರಿವ ಸಮಯದಲ್ಲಿ ದೂರ್ವಾಸ ಮುನಿಯು ಕಾಣುವುದಿಲ್ಲ್ಲ. ಕುಲಗುರು ವಸಿಸ್ಠರ ಬಳಿ ಸಲಹೆ ಕೇಳಿದಾಗ, ವಸಿಶ್ಠರು ಒಂದು ಹನಿ ನೀರು ಮತ್ತು ತುಳಸಿ ದಳವನ್ನು ಭುಂಜಿಸಿ ಉಪವಾಸ ಮುರಿದು, ತದ್ನಂತರ ದೂರ್ವಾಸ ಮುನಿಯ ದಾರಿ ಕಾಯುವಂತೆ ಸಲಹೆ ನೀಡುತ್ತಾರೆ.
ತಾನು ಬರುವವರೆಗೆ ಕಾಯದೆ, ಅಂಬರೀಷನು ಉಪವಾಸ ಮುರಿದ್ದದ್ದನ್ನು ತಿಳಿದು ಕೋಪಗೊಳ್ಳುವ ದೂರ್ವಾಸ ಮುನಿಯು ತನ್ನ ಕೂದಲಿನಿಂದ ರಾಕ್ಷಸನೊಬ್ಬನನ್ನು ಸೃಷ್ಟಿಸುತ್ತಾರೆ. ಮಹಾವಿಷ್ಣು ನೀಡಿದ ಸುದರ್ಶನ ಚಕ್ರವು ಆ ರಾಕ್ಷಸನನ್ನು ಕೊಂದು ದೂರ್ವಾಸ ಮುನಿಯನ್ನು ಬೆಂಬತ್ತುತ್ತದೆ. ದಾರಿಗಾಣದ ದೂರ್ವಾಸ ಮುನಿಯು ಬೃಹ್ಮನ ಬಳಿ ಮತ್ತು ಶಿವನ ಬಳಿ ಕಾಪಾಡಲು ಮೊರೆ ಹೋಗುತ್ತಾನೆ. ಮಹಾವಿಷ್ಣುವಿನ ಸುದರ್ಶನ ಚಕ್ರವನ್ನು ತಾವು ಎದುರಿಸಲಾರೆವೆಂದೂ, ದೂರ್ವಾಸನು ಮಹಾವಿಷ್ಣುವಿನ ಬಳಿ ತೆರಳಲು ಅವರಿಬ್ಬರೂ ತಿಳಿಹೇಳುತ್ತಾರೆ.
ತನ್ನ ಭಕ್ತ ಅಂಬರೀಷನ ಬಳಿ ಕ್ಷಮೆ ಕೋರಿದರೆ,ಸುದರ್ಶನ ಚಕ್ರವು ಹಾನಿ ಮಾಡುವುದಿಲ್ಲವೆಂದು ಮಹಾವಿಷ್ಣು ದೂರ್ವಾಸನಿಗೆ ತಿಳಿಸುತ್ತಾನೆ. ಅದರಂತೆ ದೂರ್ವಾಸನು, ಅಂಬರೀಷನ ಬಳಿ ಕ್ಷಮೆ ಯಾಚಿಸುತ್ತಾನೆ. ಅಂಬರೀಷನು ಸುದರ್ಶನ ಚಕ್ರಕ್ಕೆ ದೂರ್ವಾಸನನ್ನು ಬಿಟ್ಟುಬಿಡುವಂತೆ ಪ್ರಾರ್ಥಿಸಿದಾಗ, ಅದು ದೂರ್ವಾಸನಿಗೆ ಅಭಯ ನೀಡುತ್ತದೆ.
ರಾಮಾಯಣದಲ್ಲಿ ಅಂಬರೀಷ
ರಾಮಾಯಣದಲ್ಲಿ ಅಂಬರೀಷನ ಬಗ್ಗೆ ಐತ್ತ್ರೇಯ ಬ್ರಾಹ್ಮಣದ ಒಂದು ಉಲ್ಲೇಖವಿದ್ದು, ರಾಜಾ ಹರಿಶ್ಚಂದ್ರನ ಕಥೆಯಿದೆ.ಆ ಉಲ್ಲೇಖದಲ್ಲಿ ರಾಜನ ಹೆಸರು ಹರಿಶ್ಚಂದ್ರನ ಬದಲು ಅಂಬರೀಷ ಎಂದಿದೆ. ಐತಿಹ್ಯದ ಪ್ರಕಾರ, ಅಂಬರೀಷ ತನ್ನ ರಾಜಧಾನಿ ಅಯೋಧ್ಯೆಯಲ್ಲಿ ಅಶ್ವಮೇಧ ಯಾಗ ನಡೆಸಿರುತ್ತಾನೆ. ಯಾಗದ ಫಲವನ್ನು ದೇವರುಗಳ ರಾಜ ಇಂದ್ರನು ಕದ್ದು ಒಯ್ಯುತ್ತಾನೆ. ಯಾಗದ ಫಲಕ್ಕಾಗಿ ಬೇರೊಂದು ಪ್ರಾಣಿಯನ್ನೋ ಅಥವಾ ನರಬಲಿಯನ್ನು ನೀಡಬೇಕೆಂದೂ, ಇಲ್ಲದಿದ್ದಲ್ಲಿ ಪಾಪ ತಟ್ಟುವುದು ಎಂದು ಯಾಗ ಪುರೋಹಿತರು ಅಂಬರೀಷನಿಗೆ ತಿಳಿಸುತ್ತಾರೆ. ಎಷ್ಟು ಹುಡುಕಿದರೂ ಕೂಡಾ, ಯಾವ ಪ್ರಾಣಿಯೂ ಸಿಗದಾದಾಗೆ ತನ್ನ ಮಗ ಶುನಃಶೇಪನನ್ನೇ ಯಾಗಕ್ಕೆ ಬಲಿ ನೀಡಲು ಅಂಬರೀಷ ಮುಂದಾಗುತ್ತಾನೆ. ವಿಶ್ವಾಮಿತ್ರರಿಂದ ಕಲಿತ ಎರಡು ಮಂತ್ರಗಳನ್ನು ಪಠಿಸುತ್ತಾ ಶುನಃಶೇಪ ಆನಂದದಿಂದ ಯಾಗಕುಂಡಕ್ಕೆ ಧುಮುಕುತ್ತಾನೆ. ಮಂತ್ರದ ಪ್ರಭಾವದಿಂದಲೂ, ದೈವದ ಅನುಗ್ರಹದಿಂದಲೂ ಶುನಃಶೇಪನಿಗೆ ಯಾವ ಕುತ್ತೂ ಆಗುವುದಿಲ್ಲ. ಇದು ಐತ್ತ್ರೇಯ ಬ್ರಾಹ್ಮಣದಲ್ಲಿ ಅಂಬರೀಷನ ಕಥೆ.[೩][೪]
ಅದ್ಭುತರಾಮಾಯಣದಲ್ಲಿ ಅಂಬರೀಷ
ಅದ್ಭುತರಾಮಾಯಣದ ಪ್ರಕಾರ ಇವನ ಮಗಳಾದ ಶ್ರೀಮತಿಯನ್ನು ಮೋಹಿಸಿ ಬಂದ ಪರ್ವತ ನಾರದರು ವಿಷ್ಣುವಿನ ಮಾಯೆಯಿಂದ ಕಪಿಕೋಡಗಗಳಾಗಿ ಕಾಣಿಸಿದುದರಿಂದ ಅವಳು ಇವರಿಗೆ ಮಾಲೆ ಹಾಕದೆ ಇವರ ಮಧ್ಯೆ ಕಾಣಿಸಿಕೊಂಡ ವಿಷ್ಣುವಿಗೆ ಮಾಲೆ ಹಾಕಿದಳು. ಕೋಪಗೊಂಡ ಪರ್ವತ ನಾರದರು ಅಂಬರೀಷನನ್ನು ಶಪಿಸಲು ಹೋಗಿ ವಿಷ್ಣುಚಕ್ರದಿಂದ ಪರಾಜಿತರಾದರು.
ಹೊರಗಿನ ಕೊಂಡಿಗಳು
- Bhagavata Purana, Skanda 9, Adhyaya 4
- Story of Ambarisa
- [www.vedicyagyacenter.com/articles/Bhakta-Ambarisha.html]
- [೧][ಶಾಶ್ವತವಾಗಿ ಮಡಿದ ಕೊಂಡಿ]
- [೨]
- [೩]