ಅಮರನಾಥ್

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ

ಅಮರನಾಥ್ ಹಿಂದೂ ಧರ್ಮದ ದೇವ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ. ಸುಮಾರು ೫೦೦೦ ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು (stalagmite) ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ. ೩,೮೮೮ ಮೀಟರ್ ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು ೧೪೧ ಕಿ.ಮಿ. ದೂರದಲ್ಲಿದೆ. ಅಮರನಾಥ ಪದದ ಅರ್ಥ ಅಮರ ಅಂದರೆ ಚಿರಂಜೀವಿ ಹಾಗು ನಾಥ ಅಂದರೆ ದೇವರು ಎಂಬ ಎರಡು ಪದಗಳಿಂದ ಈ ಸ್ಥಳವು ಅಮರನಾಥ ಎಂಬ ಹೆಸರನ್ನು ಪಡೆದಿದೆ.[೧]

ಅಮರನಾಥ ಗುಹೆ ದೇವಾಲಯ

ಅಮರನಾಥ ದೇವಾಲಯ

ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ. ಹಿಂದೂ ನಂಬಿಕೆಯ ಪ್ರಕಾರ, ಅಮರನಾಥ ಅತಿ ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ ಶ್ರೀನಗರದ ಅತ್ಯಂತ ಪ್ರಮುಖ ಆಕರ್ಷಣೆಯಾದ ಅಮರ್ನಾಥ ಗುಹೆಯು ನಮ್ಮ ಶಿವನಿಗೆ ಮುಡಿಪಾಗಿದೆ. ಸಮುದ್ರಮಟ್ಟದಿಂದ 3888 ಮೀ. (12,756 ಅಡಿಗಳು) ಎತ್ತರದಲ್ಲಿ ನೆಲೆಸಿರುವ ಈ ಗುಹೆಗಳು ಸುಮಾರು 5,000 ವರ್ಷಗಳಷ್ಟು ಪುರಾತನವಾದುದು ಎಂದು ನಂಬಲಾಗಿದೆ. ಅಮರ್ನಾಥ್ ಗುಹೆಯ ಉದ್ದ, ಎತ್ತರ ಹಾಗು ಅಗಲವು ಕ್ರಮವಾಗಿ 60ಅಡಿ, 15ಅಡಿ ಮತ್ತು 30ಅಡಿ. ಈ ಗುಹೆಯಲ್ಲಿ ನೈಸರ್ಗಿಕವಾಗಿ ರೂಪಗೊಂಡಂತಹ ಹಿಮದ 'ಶಿವಲಿಂಗ' ವಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದು ಪುನಿತರಾಗಲು ಆಗಮಿಸುತ್ತಾರೆ.[೨]

ಅಮರನಾಥ ಗುಹೆಯಲ್ಲಿ ಹಿಮದ ಲಿಂಗ

ಹಿನ್ನಲೆ

ಪೌರಾಣಿಕ ಕಥೆಯ ಪ್ರಕಾರ, ಆದಿಕಾಲದಲ್ಲಿ ಬ್ರಹ್ಮಾ,ಪ್ರಕೃತಿ, ಪರ್ವತ ಕಾಡು ಮನುಷ್ಯ, ಸಂಸಾರಗಳ ಉತ್ಪತ್ತಿಯಾಗಿ ಆ ನಂತರ ಕ್ರಮಾನುಸಾರವಾಗಿ ದೇವತಾ, ಋಷಿ, ಪೂರ್ವಪಿತೃ, ಗಂಧರ್ವ, ರಾಕ್ಷಸ, ಸರ್ಪ,ಯಕ್ಷ,ಭೂತಗಣ,ಕೂಷ್ಮಾಂಡ,ಭೈರವ,ಹದ್ದು,ದಾನವಾದಿಗಳೂ ಉತ್ಪತ್ತಿಯಾದವು.ಹೀಗೆ ಹೊಸ ಪ್ರಕಾರದ ಭೂತಗಳ ಸೃಷ್ಟಿಯಾಯಿತು. ಆದರೆ ಇಂದ್ರಾದಿ ದೇವತೆಗಳ ಸಹಿತ ಎಲ್ಲರ ಜೀವಗಳು ಮೃತ್ಯುವಿನ ವಶದಲ್ಲಿತ್ತು. ದೇವತೆಗಳುಶ್ರೀ ಸದಾಶಿವನ ಬಳಿ ಹೋಗಿ, ಅವನನ್ನು ಸ್ತುತಿಸಿ,ನಮ್ಮನ್ನು ಮೃತ್ಯುಬಾಧಿಸುತ್ತದೆ,ಅದು ನಮ್ಮನ್ನು ಬಾಧಿಸದಂಥ ಉಪಾಯವನ್ನು ಹೇಳು ಎಂದಾಗ ಸದಾಶಿವನು ನಾನು ನಿಮ್ಮನ್ನು ಮೃತ್ಯುಭಯದಿಂದ ರಕ್ಷಿಸುತ್ತೇನೆ ಎಂದು ಅಭಯವಿತ್ತು ತನ್ನ ಶಿರದಿಂದ ಚಂದ್ರಮನನ್ನು ಕೆಳಗಿಳಿಸಿ ಅದರಿಂದ ಜೀವದೃವ್ಯವನ್ನು ಹಿಂಡಿ ಇದು ನಿಮ್ಮ ಮೃತ್ಯುರೋಗದ ಔಷಧಿ ಎಂದನು. “ಹೇ ದೇವಿ,ಈ ಚಂದ್ರಕಲೆಯನ್ನು ಹಿಂಡಿದ ಪರಿಣಾಮ ಪವಿತ್ರ ಅಮೃತದ ಧಾರೆಯೇ ಹರಿಯಿತು. ವಾಸ್ತವವಾಗಿ ಆ ಧಾರೆಯು ಅಮರಾವತಿ ನದಿಯಾಗಿದೆ”.…ಚಂದ್ರಕಲೆಯನ್ನು ಹಿಂಡುವ ಸಮಯದಲ್ಲಿ ಶಿವನ ಮೈಮೇಲೆ ಬಿದ್ದ ಹನಿಗಳು ಒಣಗಿ ಪೃಥ್ವಿಯ ಮೇಲೆ ಬಿದ್ದವು, ಆ ಅಮೃತ ಬಿಂದುಗಳ ಕಣಗಳೇ ಗುಹೆಯಲ್ಲಿರುವ ಭಸ್ಮವು. ದೇವತೆಗಳ ಕುರಿತು ಪ್ರೀತಿ ತೋರುತ್ತ ಸದಾಶಿವನು ದ್ರವೀಭೂತವಾದನು. ಜಲಸ್ವರೂಪಿಯಾದ ಸದಾಶಿವನನ್ನು ಕಂಡು ದೇವತೆಗಳು ನತಮಸ್ತಕರಾಗಿ ನಮಿಸಿದರು. ನಂತರ ಸದಾಶಿವನು ಭಾವವಿಭೋರನಾಗಿ ತನ್ನ ವಾಸ್ತವ ಸ್ವರೂಪವನ್ನು ಪುನ: ಅವರಿಗೆ ತೋರಿದನು. ಹೀಗಾಗಿ ಪ್ರತಿಯೊಂದು ಪಕ್ಷದಲ್ಲಿ (ಕೃಷ್ಣ-ಶುಕ್ಲ) ಅಮೃತ ದ್ರವವಾಗುತ್ತದೆ ಮತ್ತೆ ಘನೀಭೂತವಾಗುತ್ತದೆ. ಶಿವನು ಹೇಳಿದ: “ಹೇ ದೇವತೆಗಳೇ ನೀವು ಈ ಗುಹೆಯಲ್ಲಿ ನನ್ನ ಹಿಮಲಿಂಗ ಶರೀರವನ್ನು ನೋಡಿದ್ದೀರಿ.ಇಂದಿನಿಂದ ನನ್ನ ಈ ಅನಾದಿಲಿಂಗ ಶರೀರವು ತ್ರಿಲೋಕಗಳಲ್ಲಿ ಅಮರೇಶ ಎಂಬುದಾಗಿ ಖ್ಯಾತವಾಗುವದು.ನನ್ನ ಕೃಪೆಯಿಂದ ನಿಮಗಿನ್ನು ಮೃತ್ಯುವಿನ ಭಯವಿಲ್ಲ ನೀವಿಲ್ಲೇ ಇದ್ದು ಅಮರರಾಗಿ ಶಿವರೂಪವಾಗಿರಿ”.ಈ ವರವನ್ನು ಕೊಟ್ಟ ದಿನದಿಂದ ಸದಾಶಿವನು ಲೀನವಾಗಿ ಗುಹೆಯಲ್ಲೇ ಇರತೊಡಗಿದನು. ಈ ಕಥೆಯನ್ನು ಮುಂದುವರಿಸಿ ಶಿವನು ಹೇಳುತ್ತಾನೆ, “ಹೇ ಮಹೇಶ್ವರಿ,ಗರ್ಭಪಾತ ಮಾಡಿಸುವವನು, ಗುರುವಿನ ಶಯ್ಯೆಯನ್ನೇರುವವನು,ಮದಿರೆಯನ್ನು ಸೇವಿಸುವವನು,ಚಿನ್ನವನ್ನು ಕದಿಯುವವನು,ಗೋಹತ್ಯೆ ಮಾಡುವವನು,ಬ್ರಹ್ಮಹತ್ಯೆ ಇತ್ಯಾದಿ ಮಾಡುವವನೂ ಒಂದು ವೇಳೆ ಅಮರನಾಥನ ರಸಮಯಲಿಂಗ ಶರೀರದ ದರ್ಶನ ಮಾಡಿದ್ದೇ ಆದರೆ ಅವನು ಆ ಕ್ಷಣವೇ ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನೆ.[೩]""ಒಂದೆ ವಾಕ್ಯದಲ್ಲಿ ಹೇಳುವುದಾದರೆ ಒಮ್ಮೆ ಪಾರ್ವತಿಯು ತನ್ನ ಪತಿ ಶಿವನನ್ನು ಕುರಿತು, ತನಗೆ ಅಮರತ್ವದ ರಹಸ್ಯವನ್ನು ತಿಳಿಸಬೇಕೆಂದು ಬೇಡಿಕೊಳ್ಳುತ್ತಾಳೆ. ಇದರನ್ವಯ ಪರಶಿವನು, ಯಾರೂ ಕೇಳಿಸಿಕೊಳ್ಳಬಾರದೆಂಬ ಉದ್ದೇಶದಿಂದ ಈ ಗುಹೆಗೆ ಆಕೆಯನ್ನು ಕರೆತಂದು ರಹಸ್ಯವನ್ನು ಉಪದೇಶಿಸುತ್ತಾನೆ ಎಂದು ಹೇಳಲಾಗಿದೆ. ""

ಪ್ರವಾಸದ ಮತ್ತು ದರ್ಶನದ ಸಮಯ

ಜುಲೈ ಹಾಗು ಅಗಸ್ಟ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದುದೆಂದು ಪರಿಗಣಿಸಲಾಗಿದೆ. ಆದರೂ ಮೇ ಯಿಂದ ಸೆಪ್ಟಂಬರ್ ಮಧ್ಯದಲ್ಲಿನ ಅವಧಿಯಲ್ಲೂ ಇಲ್ಲಿಗೆ ಭೇಟಿ ನೀಡಬಹುದು.

ಭದ್ರತೆ

ಭಾರತೀಯ ಪ್ಯಾರಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಕಟ್ಟುಬದ್ಧಾದ ರಕ್ಷಣೆಯು ಈ ಸ್ಥಳಕ್ಕಿದ್ದು, ಪ್ರವಾಸಿಗರು ನಿಶ್ಚಿಂತೆಯಿಂದ ದರ್ಶನ ಪಡೆಯಬಹುದು. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ, ಈ ಎರಡೂ ಇಲಾಖೆಗಳಿಂದ ಪೂರ್ವಾನುಮತಿಯಿಲ್ಲದೆ ಈ ತಾಣಕ್ಕೆ ಪ್ರವೇಶಿಸುವಂತಿಲ್ಲ.

ತಲುಪುವ ಬಗೆ

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸ್ಥಿತವಿರುವ ಅಮರನಾಥವು ರಾಜಧಾನಿ ಶ್ರೀನಗರದಿಂದಸುಮಾರು 141 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ. ಈ ಪ್ರವಾಸ ಮಾಡಲು ಮೊದಲಿಗೆ ಪಹಲ್ಗಾಮ್ ಪಟ್ಟಣವನ್ನು ತಲುಪಬೇಕು. ಜಮ್ಮು ಹಾಗೂ ಶ್ರೀನಗರಗಳಿಂದ ಪಹಲ್ಗಾಮ್ ಪಟ್ಟಣವನ್ನು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು.ಜಮ್ಮುವಿನಿಂದ ಬೆಳಿಗೆ ಸಮಯದಲ್ಲಿ ಮಾತ್ರ ಪಹಲ್ಗಾಮ್ ತೆರಳಲು ಬಸ್ಸು ದೊರೆಯುತ್ತದೆ. ಪಹಲ್ಗಾಮ್ ಜಮ್ಮುವಿನಿಂದ 315 ಕಿ.ಮೀ ದೂರದಲ್ಲಿದೆ. ಇನ್ನೂ ಶ್ರೀನಗರದಿಂದ ಪಹಲ್ಗಾಮ್96 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಪಹಲ್ಗಾಮ್ ನಿಂದ ಯಾತ್ರೆ ಆರಂಭಗೊಳ್ಳುತ್ತದೆ. ಮೊದಲಿಗೆ ಪಹಲ್ಗಾಮ್ ನಿಂದ ಚಂದನ್ವಾರಿಗೆ ತೆರಳಬೇಕು. ಇದು 16 ಕಿ.ಮೀ ಗಳಷ್ಟು ದೂರವಿದೆ. ಮಿನಿ ಬಸ್ಸುಗಳು ದೊರೆಯುತ್ತವೆ. ಇಲ್ಲಿ ಸರ್ಕಾರೇತರ ಸಂಸ್ಥೆಗಳಿಂದ ಸೇವೆಯ ರೂಪದಲ್ಲಿ ಉಚಿತವಾಗಿ ಫಲಾಹಾರಗಳು ದೊರೆಯುತ್ತವೆ. ವಾತಾವರಣದಲ್ಲಿ ವಿಪರೀತವಾಗಿ ಚಳಿ ಹಾಗೂ ಮುಂದೆ ಸಾಗುತ್ತ ಆಮ್ಲಜನಕದ ಕೊಂಚ ಅಭಾವವಿರುವುದರಿಂದಸಾಕಷ್ಟು ಜಾಗರೂಕತೆವಹಿಸಬೇಕು.ಅಗತ್ಯ ವಸ್ತುಗಳನ್ನು ತೆಗೆದುಕೊಂಡು ತೆರಳಿದರೆ ಅವಶ್ಯಕ.

ನಿಯಮಗಳು

ಅಮರನಾಥ ಯಾತ್ರೆ ಮಾಡುವ ಯಾತ್ರಾರ್ಥಿಗಳು ಮೊದಲಿಗೆ ತಮ್ಮ ಆರೋಗ್ಯದ ಬಗ್ಗೆಗಿನ ದಾಖಲೆಗಳನ್ನು ಅಮರನಾಥ ಯಾತ್ರೆಯ ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ ಮತ್ತು ಭಾರತೀಯ ಪ್ಯಾರಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಪೂರ್ವಾನುಮತಿ ಪಡೆಯಬೇಕಾಗಿರುತ್ತದೆ.ಅಮರನಾಥಕ್ಕೆ ತೆರಳುವ ಪ್ರತಿ ಯಾತ್ರಿಯೂ ಪೂರ್ವಭಾವಿಯಾವಿ ನೋಂದಾಯಿಸಿಕೊಂಡಿರಬೇಕಾಗಿರುತ್ತದೆ. ಅದಕ್ಕೆ ಅಗತ್ಯವಿರುವ ಕಾಗದಪತ್ರಗಳನ್ನು ಅಮರನಾಥ್ ಯಾತ್ರಾ ಶ್ರೈನ್ ಬೋರ್ಡ್ ನಿಂದ ಪಡೆದು ವಿವರಗಳನ್ನು ತುಂಬಿ ಮರಳಿ ಜಮ್ಮು ಮತ್ತು ಕಶ್ಮೀರ್ ಬ್ಯಾಂಕ್ ನ ಶಾಖೆಯೊಂದರಲ್ಲಿ ಸಲ್ಲಿಸಬೇಕಾಗುತ್ತದೆವಯಸ್ಸು ೧೩ ರಿಂದ ೭೫ ರ ಮಿತಿಯಲ್ಲಿರಬೇಕು ಮತ್ತು 6ತಿಂಗಳು ತುಂಬಿದ ಗರ್ಭಿಣಿಯರಿಗೆ ಅವಕಾಶವಿರುವುದಿಲ್ಲಾ.ಜೋತೆಗೆ ಅರ್ಜಿಶುಲ್ಕ ಸೇವವೆಚ್ಚ ಅಂಚೆವೆಚ್ಚಗಳನ್ನುಬರಿಸಬೇಕಿರುತ್ತದೆ..ಅಮರನಾಥ ಯಾತ್ರೆಗಾಗೆ ಹಲವು ಟ್ರಾವೆಲ್ಸ್ ಎಜೆನ್ಸಿಯವರು ಸೇವೆ ನೀಡುತ್ತಿದ್ದಾರೆ ಅವರನ್ನು ಸಹ ನೀವು ಸಂಪರ್ಕಿಸಬಹುದು ಆದರೆ ಎಚ್ಚರ ಹಲವಾರು ಯಾತ್ರಿಗಳು ಮೋಸವಾಗಿರು ಘಟನೆಗಳು ಹೆಚ್ಚಾಗಿವೆ.

ಹೆಚ್ಚಿನ ವಿವರಕ್ಕೆ

ಚಿತ್ರ-ನಕ್ಷೆ::Amarnath Yatra begins; here's all you want .. Updated: Jul 1, 2019,

ಉಲ್ಲೇಖಗಳು