ಪಾಲ್ತಾಡಿ ರಾಮಕೃಷ್ಣ ಆಚಾರ್

(ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಇಂದ ಪುನರ್ನಿರ್ದೇಶಿತ)

ಪಾಲ್ತಾಡಿ ರಾಮಕೃಷ್ಣ ಆಚಾರ್(೧೯೪೫ - ೦೭.೦೫.೨೦೨೪) ತುಳುನಾಡಿನ ಓರ್ವ ಸಾಹಿತಿ. ಹಿರಿಯ ಜಾನಪದ ವಿದ್ವಾಂಸ. ಕಾವ್ಯ, ಸಣ್ಣಕತೆ, ನಾಟಕ, ಸಂಶೋಧನೆ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರು.

ಹುಟ್ಟು

ಪಾಲ್ತಾಡಿ ರಾಮಕೃಷ್ಣ ಆಚಾರ್ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ ಹುಟ್ಟಿದವರು.[೧] ಅಲ್ಲಿನ ಮನೆ ಸ್ವಂತದ್ದಾಗಿರಲಿಲ್ಲ. ಆಗ ಅವಿಭಕ್ತ ಕುಟುಂಬದಲ್ಲಿದ್ದು ಬೆಟ್ಟಂಪಾಡಿ ಬೀಡಿನ ಬಲ್ಲಾಳರ ಒಕ್ಕಲಾಗಿದ್ದರು. ಪಾಲ್ತಾಡಿ ಅವರ ಅಜ್ಜನ (ತಾಯಿಯ ತಂದೆ) ಸ್ವಂತ ಮನೆಯಾಗಿದೆ. ಅಜ್ಜನ ಏಕೈಕ ಪುತ್ರಿ ಅವರ ತಾಯಿ ತೀರಿಕೋದ ಬಳಿಕ ಪಾಲ್ತಾಡಿಯ ಮನೆ ಇವರ ಹೆಸರಿಗಾಯಿತು. ಹಾಗಾಗಿ ಅವರ ಹೆಸರಿನಲ್ಲಿ ‘ಪಿ’ ಎಂದು ಬಳಸಿಕೊಂಡಿದ್ದ ಸಂಕೇತಾಕ್ಷರವನ್ನು ಪೆಲತ್ತಾಜೆಯ ಬದಲು ಪಾಲ್ತಾಡಿ ಎಂದು ಮಾಡಿಕೊಂಡರು.

ವಿದ್ಯಾಭ್ಯಾಸ

ಬೆಟ್ಟಂಪಾಡಿ ಹಾಗೂ ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಏಳನೇ ತರಗತಿಯಿಂದ ಹನ್ನೊಂದನೇ ತರಗತಿಯವರೆಗೆ ಅಂದರೆ ಆಗಿನ ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣವನ್ನು ಬೆಳ್ಳಾರೆ ಬೋರ್ಡ್ ಹೈಸ್ಕೂಲ್‍ನಲ್ಲಿ ಪಡೆದರು. ಮೆಟ್ರಿಕ್ಯುಲೇಷನ್ ಮುಗಿಸಿದ ಮೇಲೆ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಪೂರೈಸಿದರು. ನಂತರ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಡಿಪ್ಲೋಮಾ ಮಾಡಿದರು. ಉದ್ಯೋಗವಾಗಿ 1963ರಲ್ಲಿ ಪುತ್ತೂರು ತಾಲೂಕಿನ ಕುಂತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕನಾಗಿ ಸೇರಿದರು. ನಂತರ ಕುಂತೂರು, ಕೆಯ್ಯೂರು, ಕಾವು ಮಾಡ್ನೂರು, ಸಾಮೆತ್ತಡ್ಕ ಮೊದಲಾದ ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ಮಧ್ಯೆ ಬಿ.ಎ ಮುಗಿಸಿ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದರು. ನಂತರ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಸ್ನಾತಕೋತ್ತರ ಪದವಿ ಪಡೆದರು. ಹಿಂದಿಯಲ್ಲಿ ರಾಷ್ಟ್ರ ಭಾಷಾ ವಿಶಾರದಾ ಪದವಿಯನ್ನು ಮೊದಲೇ ಮುಗಿಸಿದ್ದರು. ಹೀಗೆ ಉಪ್ಪಿನಂಗಡಿ, ಬೊಕ್ಕಪಟ್ಟಣ, ಬೆಟ್ಟಂಪಾಡಿ ಮತ್ತು ಕಾಣಿಯೂರಿನ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಳಿಕ ಸವಣೂರಿನ ವಿದ್ಯಾರಶ್ಮಿ ಶಿಕ್ಷಕ ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು.

ಅಲಂಕರಿಸಿದ ಹುದ್ದೆಗಳು

  1. ಪ್ರಾಥಮಿಕ ಶಾಲೆ ಶಿಕ್ಷಕ
  2. ಹೈಸ್ಕೂಲ್ ಶಿಕ್ಷಕ
  3. ಕಾಲೇಜ್ ಶಿಕ್ಷಕ
  4. ಬಿ.ಎಡ್. ಕಾಲೇಜ್ ಶಿಕ್ಷಕ
  5. ಪ್ರಾಂಶುಪಾಲರು, ಕಾಲೇಜ್
  6. ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
  7. ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಸಾಹಿತ್ಯ ಸೇವೆ

1979ರಲ್ಲಿ ಬಾಂಗ್ಲಾ ವಿಜಯ ಎಂಬ ಯಕ್ಷಗಾನ ಪ್ರಸಂಗಕೃತಿ ಪ್ರಕಟವಾಗುವುದರೊಂದಿಗೆ ಪಾಲ್ತಾಡಿಯವರು ಲೇಖನ ವ್ಯವಸಾಯವನ್ನು ತೊಡಗಿದರು. 1975ರಿಂದ 1985ರ ಅವಧಿಯಲ್ಲಿ ವಿವಿಧ ಪತ್ರಿಕೆ- ನಿಯತಕಾಲಿಕೆಗಳಲ್ಲಿ ಕತೆ ಕವಿತೆಗಳು ನಿರಂತರವಾಗಿ ಪ್ರಕಟವಾಗುತ್ತಿದ್ದವು. ಕನ್ನಡ- ತುಳುವಿನ ಸೃಜನಾತ್ಮಕ ಬರಹಗಾರ. ಕನ್ನಡ ಸಂಘ, ತುಳು ಸಂಘ, ಯಕ್ಷಗಾನ ಸಂಘ, ಸಮುದಾಯ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗಾಗಿ ಶ್ರಮಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಪಾಲ್ತಾಡಿಯವರು ತುಳುನಾಡಿನ ಸಂಸ್ಕøತಿ ಮತ್ತು ಕಲೆಯ ಬಗ್ಗೆ ವಿಶೇಷ ಒಲವುಳ್ಳವರು. ಅವರ ಡಾಕ್ಟರೇಟ್ ಅಧ್ಯಯನ ಪ್ರಬಂಧ ನಲಿಕೆ ಜನಾಂಗದ ಕುಣಿತಗಳು ಎಂಬ ಕೃತಿಯಲ್ಲಿ. ಮಕ್ಕಳ ಕವನ ಸಂಕಲನ, ಕಥಾ ಸಂಕಲನ, ಸಂವಹನ ಮಾಧ್ಯಮವಾಗಿ ಜಾನಪದ, ಜಾನಪದ ಪರಿಸರ, ಜಾನಪದ ವೈದ್ಯ, ಜಾನಪದ ಕುಣಿತ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆ ಮತ್ತು ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರದ್ದು.

ಪಾಲ್ತಾಡಿಯವರು ಬರೆದ ಕೃತಿಗಳು

ಮಕ್ಕಳ ಕವನ ಸಂಕಲನ

  1. ಕಿರಣ
  2. ಕವನ ಸಂಕಲನ
  3. ಮೆಲುಕಾಡಿದಾಗ
  4. ಅಜಕೆ (ತುಳು)
  5. ದುನಿಪು (ತುಳು)
  6. ಪಚ್ಚೆಕುರಲ್ (ತುಳು)

ಕೃತಿ

  1. ತುಳು ಸಂಸ್ಕತಿದ ಪೊಲಬು
  2. ನಾಗ ಬೆರ್ಮೆರ್
  3. ತುಳು ಕಲ್ಪುಗ
  4. ಕೆದಂಬಾಡಿ ರಾಮ ಗೌಡೆರ್
  5. ಅತ್ತಾವರ ಅನಂತಾಚಾರ್ಯೆ
  6. ನಾಗ ಬೆರ್ಮೆ
  7. ಕೆನರಾ ರೈತ ಬಂಡಾಯ
  8. ತುಳುನಾಡಿನ ಪಾಣಾರರು
  9. ತುಳುನಾಡಿನ ಜನಪದ ಕಥೆಗಳು
  10. ವಿಶಿಷ್ಟ ತುಳುನಾಡು

ಧ್ವನಿ ಸುರುಳಿ

  1. ತುಳುವ ಸಿರಿ
  2. ತುಳುವ ಮಲ್ಲಿಗೆ
  3. ಅರ್ತಿದ ಪೂ
  4. ಶ್ರೀ ಕ್ಷೇತ್ರ ದರ್ಶನ
  5. ಪ್ರಣಾಮ

ಉಲ್ಲೇಖಗಳು