ಎಂ. ಬಾಲಮುರಳಿ ಕೃಷ್ಣ

ಭಾರತೀಯ ಶಾಸ್ತ್ರೀಯ ಸಂಗೀತಗಾರ
(ಬಾಲಮುರಳಿ ಕೃಷ್ಣ ಇಂದ ಪುನರ್ನಿರ್ದೇಶಿತ)

ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ,[೧] ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ, ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಅವರು ನಡೆಸಿದ ಸಂಗೀತ ಕಛೇರಿಗಳು ಅಂದಾಜು ೧೮,೦೦೦. ೨೫೦ ಕ್ಕಿಂತಲೂ ಹೆಚ್ಚು ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಎಂ. ಬಾಲಮುರಳಿ ಕೃಷ್ಣ
ಡಾ. ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ
ಹಿನ್ನೆಲೆ ಮಾಹಿತಿ
ಜನ್ಮನಾಮಮಂಗಳಂಪಲ್ಲಿ ಬಾಲಮುರಳಿ ಕೃಷ್ಣ
ಜನನ (1930-07-06) ಜುಲೈ ೬, ೧೯೩೦ (ವಯಸ್ಸು ೯೩)
ಮೂಲಸ್ಥಳಶಂಕರಗುಪ್ತಮ್, ಪೂರ್ವ ಗೋದಾವರಿ ಜಿಲ್ಲೆ, ಆಂಧ್ರ ಪ್ರದೇಶ
ಮರಣನವೆಂಬರ್ ೨೨, ೨೦೧೬ (೮೬ರ ವಯಸ್ಸಿನಲ್ಲಿ )
ಸಂಗೀತ ಶೈಲಿಕರ್ನಾಟಕ ಸಂಗೀತ
ವೃತ್ತಿಶಾಸ್ತ್ರೀಯ ಗಾಯಕ
ಸಕ್ರಿಯ ವರ್ಷಗಳು೧೯೩೮ – ೨೦೧೬
ಭುವನೇಶ್ವರದಲ್ಲಿ ನಡೆದ 'ರಾಜರಾಣಿ ಸಂಗೀತ ಹಬ್ಬ – 2013'ರಲ್ಲಿ ಪಂಡಿತ್ ಬಾಲಮುರಳಿ ಕೃಷ್ಣ
Balamuralikrishna during a concert in Kuwait on 29 March 2006, accompanied by Mavelikkara Sathees Chandran (violin), Perunna G. Harikumar (mridangom), Manjoor Unnikrishnan (ghatam)
Mangalampalli Balamurali Krishna and Ravi Joshi, during a concert in San Francisco, California, April 2014

ಬಾಲ್ಯ ಹಾಗೂ ಸಂಗೀತದಲ್ಲಿ ಸಾಧನೆ

'ಡಾ.ಬಾಲಮುರಳಿ ಕೃಷ್ಣರಿಗೆ ಪ್ರಶಸ್ತಿದೊರೆತಾಗ'
  • 'ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ', ರವರು ಜನಿಸಿದ್ದು, ೬, ಜುಲೈ, ೧೯೩೦ ರಲ್ಲಿ. "ಸಂಕರ ಗುಪ್ತನ್," ಎಂಬ ಗ್ರಾಮದಲ್ಲಿ. ಇದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ, 'ರೋಜುಲು,' ತಾಲ್ಲೂಕಿನಲ್ಲಿದೆ. ತಂದೆ-ತಾಯಿಯರು ಅವರಿಗೆ ಪ್ರೀತಿಯಿಂದ ಇಟ್ಟ ಹೆಸರು 'ಮುರಳಿ ಕೃಷ್ಣ'. ಆದರೆ ಆ ಊರಿನ ಪ್ರಸಿದ್ಧ 'ಹರಿಕಥಾ ವಿದ್ವಾನ್ ಶ್ರೀ. ಸತ್ಯನಾರಾಯಣರು', ಅವನ ಹೆಸರಿನ ಮೊದಲಿಗೆ 'ಬಾಲ' ಎಂಬ ಪದವನ್ನು ಸೇರಿಸಿದರು.
  • ಮನೆಯಲ್ಲಿ ಸಂಗೀತಮಯ ವಾತಾವರಣ. ತಂದೆ ಪಟ್ಟಾಭಿರಾಮಯ್ಯ, ಕೊಳಲು, ವೀಣೆ, ಪಿಟೀಲು ವಾದಕ. ತಾಯಿ, 'ಸೂರ್ಯಕಾಂತಮ್ಮ' ನವರು, ಶ್ರೇಷ್ಠ ವೀಣಾವಾದಕಿ. ತಮ್ಮ ೧೫ನೆಯ ವಯಸ್ಸಿನಲ್ಲಿಯೇ, ಬಾಲಮುರಳಿಯವರ ತಾಯಿಯವರು ಮೃತಪಟ್ಟರು. ಬಾಲಮುರಳಿಯವರ ಸೋದರತ್ತೆಯವರು ಅವರನ್ನು ವಿಜಯವಾಡಕ್ಕೆ ಕರೆದುಕೊಂಡು ಹೋಗಿ, ತಮ್ಮ ಮನೆಯಲ್ಲಿ ಸಾಕಿ-ಸಲಹಿದರು.
  • ಬಾಲ್ಯದಿಂದ ತಂದೆಯೇ ಅವರಿಗೆ ಗುರುಗಳು. ತಂದೆಯವರ ಸಂಗೀತಾಸಕ್ತಿ, ಹಾಗೂ ಅದರ ಪ್ರಭಾವ ಸಹಜವಾಗಿ ಮಗನಮೇಲೂ ಆಗಿತ್ತು. ಸಂಗೀತಾಭಿರುಚಿಯ ಉತ್ತುಂಗದಲ್ಲಿದ್ದ ಮಗನನ್ನು ಅವರು 'ಸುಸರ್ಲ ದಕ್ಷಿಣಾಮೂರ್ತಿ' ಗಳ ಬಳಿ ಶಿಕ್ಷಣ ಕೊಡಿಸಲು ಕರೆದುಕೊಂಡು ಹೋದರು. ಕೆಲವೇ ವರ್ಷಗಳಲ್ಲಿ ಅವರು ೭೨ ಬಗೆಯ ರಾಗಗಳನ್ನು ಹೆಣೆದರು. ೧೯೬೦ ರಲ್ಲೇ, ವಿಜಯವಾಡ ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ 'ಭಕ್ತಿರಂಜಿನಿ,' ಎಂಬ 'ಗೀತಮಾಲೆ'ಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.

ಸಂಗೀತದಲ್ಲಿ ಪ್ರಯೋಗಶೀಲತೆ

  • ಸಂಗೀತ ವಿದ್ವಾನ್ ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, ಕರ್ನಾಟಕ ಸಂಗೀತ ಶೈಲಿಯ ಮೇರುಗಾಯಕ. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. ಭಾರತದೇಶ ಕಂಡ ಮಹಾನ್ ವಾಗ್ಗೇಯಕಾರ. ಬಾಲಮುರಳಿಯವರು, ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲೆಯಾಳಂ ಚಲನ-ಚಿತ್ರಗಳಲ್ಲಿ ಹಾಡಿ, ಕಂಠದಾನ ಮಾಡಿದ್ದಾರೆ.
  • ಕನ್ನಡ ಚಿತ್ರಗಳಾದ, ಸಂಧ್ಯಾರಾಗ, ಹಂಸಗೀತೆ, ಸುಬ್ಬಾಶಾಸ್ತ್ರಿ, ಗಾನಯೋಗಿ ರಾಮಣ್ಣ, ಶ್ರೀ ಪುರಂದರದಾಸರು, ಅಮ್ಮ, ಚಿನ್ನಾರಿ ಮುತ್ತಣ್ಣ, ಮುತ್ತಿನಹಾರ -ಹೀಗೆ ಹಲವಾರು ಹಾಡುಗಳು, ಕೀರ್ತನೆಗಳು, ದೇವರನಾಮಗಳನ್ನು ಹಾಡಿದ್ದಾರೆ. ಅವರು ೧೯೩೮ ರಲ್ಲಿ ನಡೆದ, "ಸದ್ಗುರು ಆರಾಧನಾ ಮಹೋತ್ಸವ," ದಲ್ಲಿ ತಮ್ಮ ಚೊಚ್ಚಲ ಸಂಗೀತ ಕಛೇರಿ ಕೊಟ್ಟರು. ಆಗ ಅವರಿಗೆ ಕೇವಲ ೮ ವರ್ಷ ವಯಸ್ಸು.

ಹವ್ಯಾಸಗಳು

  • ಹಾಡುಗಾರಿಕೆಯಲ್ಲದೆ, ಪಿಟೀಲು ನುಡಿಸುವ ಖಯಾಲಿದೆ. ಖಂಜಿರ, ಮೃದಂಗ, ಕೊಳಲು ಬಾರಿಸುವುದು ಇಷ್ಟ. ವಿಜಯವಾಡದಲ್ಲಿ, ಸರಕಾರಿ ಸಂಗೀತ ಕಾಲೇಜ್‍ನ,ಪ್ರಥಮ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯವಾಡ, ಹೈದರಾಬಾದು ಮತ್ತು ಮದರಾಸು ಆಕಾಶವಾಣಿ ಕೇಂದ್ರಗಳಲ್ಲಿ ಸಂಗೀತ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
  • ಅವರೊಬ್ಬ ವಾಗ್ಗೇಯಕಾರರು, ಕವಿ, ಹೊಸತನ್ನೇ ಅರಸುತ್ತಾ ಸಂಶೋಧನೆ ಮಾಡುವ ಆಸೆ. 'ಸ್ವಿಟ್ಜರ್ಲ್ಯಾಂಡ್' ನಲ್ಲಿ, 'ಪ್ರದರ್ಶನ ಕಲೆಗಳು ಮತ್ತು ಸಂಶೋಧನಾ ಅಕಾಡೆಮಿ', ಸಂಸ್ಥೆ ಸ್ಥಾಪಿಸಿದ್ದಾರೆ. ಕಲೆ ಸಂಸ್ಕೃತಿಯ ಅಬಿವೃದ್ಧಿಗಾಗಿ ಮದರಾಸಿನಲ್ಲಿ "MBK" ಟ್ರಸ್ಟ್ ನ, ನೃತ್ಯ ಮತ್ತು ಸಂಗೀತಶಾಲೆ "ವಿಪಂಚಿ" ಆರಂಭಿಸಿದರು. 'ಸಂಧ್ಯಾ ಕೆಂದಿನ ಸಿಂಧೂರಂ,' ಮಲೆಯಾಳಂ ಚಿತ್ರದ ಪ್ರಮುಖ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವರು ಭೋಜನ ಪ್ರಿಯರು. ಅನ್ನ, ಸಾರು ಊಟ, ಹೆಚ್ಚು ಪ್ರಿಯ. ಕರಿದ ಬಜ್ಜಿ, ಐಸ್ಕ್ರೀಂ, ನಿಧಾನವಾಗಿ ಗಂಟೆ ಕಾಲ, ಆರಾಮವಾಗಿ ಊಟ ಮಾಡುವುದು ಬಹಳ ಇಷ್ಟ.

ಟಿ.ವಿ. ಯಲ್ಲಿ ಆಕ್ಷನ್ ಚಲನಚಿತ್ರಗಳ ವೀಕ್ಷಣೆ ಮತ್ತು ಮನೆಯಲ್ಲಿದ್ದಾಗ ಮಕ್ಕಳು-ಮೊಕ್ಕಳಜೊತೆಗೆ ಬೆರೆಯುವುದು. ವಿದೇಶಗಳಿಗೆ ಹೋದಾಗ, ಕಾಯಿನ್ ಹಾಕಿ, ಹಣಗಳಿಸುವ ಆಟವಾಡುವುದು.

ಸಂಗೀತವೇ ಅವರ ಜೀವನದ ಪ್ರಮುಖ ಹವ್ಯಾಸಗಳಲ್ಲೊಂದು

ಬಾಲಮುರಳಿಕೃಷ್ಣ ಅವರು ಈ ಮೊದಲು ಪ್ರಚಲಿತವಿಲ್ಲದ ಹಲವು ಹೊಸ-ರಾಗಗಳ ಸಂಯೋಜನೆ ಮಾಡಿದ್ದಾರೆ; ಐದು ಸ್ವರಗಳಿಲ್ಲದೇ ರಾಗಗಳು ರಂಜಿಸುವುದಿಲ್ಲವೆಂಬ ಸಂಪ್ರದಾಯವಿತ್ತು. ಆದರೆ ಅದನ್ನೂ ಮೀರಿ, ನಾಲ್ಕು ಹಾಗೂ ಮೂರು ಸ್ವರಗಳ ರಾಗಗಳನ್ನು ಬಾಲಮುರಳಿ ಅವರು ಕಲ್ಪಿಸಿದ್ದಾರೆ.

ಬಾಲಮುರಳಿ ಅವರ ಹೊಸರಾಗ ಸಂಯೋಜನೆಗಳಲ್ಲಿ ಕೆಲವು ಇಲ್ಲಿವೆಮಹತಿ, ಸುಮುಖಂ, ತ್ರಿಶಕ್ತಿ, ಸರ್ವಶ್ರೀ, ಓಂಕಾರಿ, ಜನ ಸಮ್ಮೋದಿನಿ, ಮನೋರಮ, ರೋಹಿಣಿ,ವಲ್ಲಭಿ,ಲವಂಗಿ, ಸುಸಮ.

ಸಂಗೀತದಲ್ಲಿ ಹೊಸಕೃತಿ ರಚನೆಗಳು

ಸಂಗೀತಕ್ಕೆ ಹೊಸತನದ ಮೆರುಗು, ಚಿಕಿತ್ಸೆ, ನೀಡುತ್ತ ರಾಗಗಳ ನಿರಂತರ ಸಂಶೋಧನೆ ನಡೆಸಿದ್ದಾರೆ. 'ವರ್ಣಂ ತಿಲ್ಲಾನ' ಕುರಿತ ’ಸೂರ್ಯಕಾಂತಿ' (೪ ಭಾಷೆಗಳಲ್ಲಿ ), (೬ ಭಾಷೆಗಳಲ್ಲಿ) ಎಂಬ, ಸಂಶೋಧನಾತ್ಮಕ ಪುಸ್ತಕಗಳು, ಹೊರಬಂದಿವೆ.

'ಬೆಂಗಳೂರಿನ ಗಾಯನ ಸಮಾಜದಲ್ಲಿ'

'ಬೆಂಗಳೂರಿನ ಗಾಯನ ಸಮಾಜ'ದಲ್ಲಿ, 'ಭಕ್ತಿಭಾರತಿ ಪ್ರತಿಷ್ಠಾನ' ಏರ್ಪಡಿಸಿದ್ದ, 'ಪುರಂದರದಾಸೋತ್ಸವ ಭಕ್ತಿ ಮೇಳ'ದಲ್ಲಿ ಸಂಗೀತ ಕಛೇರಿ ನೀಡಿದರು. ಭಾರತವಲ್ಲದೆ, ಅಮೆರಿಕ, ಕೆನಡ, ಇಟಲಿ, ಫ್ರಾನ್ಸ್, ರಷ್ಯಾ, ಶ್ರೀಲಂಕಾ, ಮಲೇಷ್ಯಾ, ಸಿಂಗಪುರ ಮುಂತಾದ ದೇಶಗಳಲ್ಲಿ ಸುಮಾರು ೨೦,೦೦೦ ಸಂಗೀತ ಕಛೇರಿಗಳನ್ನು ನೀಡಿ, ತಮ್ಮ ಕ್ಷೇತ್ರವನ್ನು ವಿಶ್ವವ್ಯಾಪಿಯಾಗಿಸಿಕೊಂಡಿದ್ದಾರೆ. 'ನೂರಾರು ಕ್ಯಾಸೆಟ್ ಆಲ್ಬಂ'ಗಳು ಹೊರಬಂದಿವೆ. ಇವರು ಸಂಯೋಜಿಸಿದ ಮಹದೇವಸುತಂ, ಶ್ರೀ ಸಕಲ ಗಣಾದಿಪ, ಗಂಗಂ ಗಣಪತಿ, ಕೃತಿಗಳು ಅತ್ಯಂತ ಯಶಸ್ಸನ್ನು ಕಂಡಿವೆ.

ನಿಧನ

ಡಾ.ಬಾಲಮುರಳಿ ಕೃಷ್ಣ, ಚೆನ್ನೈ ನಗರದಲ್ಲಿ ೨೨, ನವೆಂಬರ್, ೨೦೧೬ ರಂದು ನಿಧನರಾದರು. ಸ್ವಲ್ಪಸಮಯದಿಂದ ಅವರು ಅಸ್ವಸ್ಥರಾಗಿದ್ದರು.[೨]

ಪ್ರಶಸ್ತಿಗಳು

  1. ಗೌರವ ಪಿ.ಎಚ್.ಡಿ; ಡಿ.ಎಸ್.ಸಿ; ಡಿ.ಲಿಟ್, ಆಂಧ್ರ ಪ್ರದೇಶ, ವಿಶ್ವವಿದ್ಯಾಲಯದಿಂದ.
  2. ೧೯೭೮ ರಲ್ಲಿ 'ಸಂಗೀತ ಕಲಾನಿಧಿ ಪ್ರಶಸ್ತಿ'
  3. ೧೯೯೨ ರಲ್ಲಿ 'ವಿಸ್ಡಮ್ ಮ್ಯಾನ್ ಆಫ್ ದ ಯಿಯರ್, ಪ್ರಶಸ್ತಿ'.
  4. ೧೯೯೬ ರಲ್ಲಿ 'ನಾದಬ್ರಹ್ಮ-ನೃತ್ಯಾಲಯ, ಹಾಗೂ ಈಸ್ತೆಟಿಕ್ ಸಂಘದ ಪ್ರಶಸ್ತಿ'.
  5. ಪದ್ಮಭೂಷಣ ಪ್ರಶಸ್ತಿ
  6. ಪದ್ಮವಿಭೂಷಣ ಪ್ರಶಸ್ತಿ
  7. ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ತಿ- "ಹಂಸಗೀತೆ," ಕನ್ನಡ ಚಲನ ಚಿತ್ರಕ್ಕೆ.
  8. "ಮಧ್ವಾಚಾರ್ಯ," ಚಿತ್ರಕ್ಕೆ 'ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ' ಸೇರಿವೆ.
  9. ತಿರುಪತಿ ತಿರುಮಲದೇವಸ್ಥಾನ, ಶೃಂಗೇರಿ ಪೀಠ ಮತ್ತು ನಂಜನಲ್ಲೂರಿನ ಆಂಜನೇಯಸ್ವಾಮಿ ದೇವಸ್ಥಾನದ ಆಸ್ಥಾನ ವಿದ್ವಾನ್ ಪಟ್ಟಕ್ಕೆ ಪಾತ್ರರಾಗಿದ್ದಾರೆ.
  10. ೨೦೦೦-೨೦೦೧ರ ಕಾಳಿದಾಸ ಸಮ್ಮಾನ್ ಪ್ರಶಸ್ತಿ.

ಉಲ್ಲೇಖಗಳು