ಶಕುಂತಲಾ ದೇವಿ

Human Computer, Astrologer, Writer

ಶಕುಂತಲಾ ದೇವಿ[೧] (ನವೆಂಬರ್ ೪, ೧೯೨೯ - ಏಪ್ರಿಲ್ ೨೧, ೨೦೧೩) ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿದ್ದ ವಿಶ್ವವಿಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞೆ. ಬಾಲಪ್ರತಿಭೆಯಾಗಿ ಬೆಳಕಿಗೆ ಬಂದ ಇವರು ಜ್ಯೋತಿಷ್ಯಶಾಸ್ತ್ರದಲ್ಲೂ ವಿದ್ವಾಂಸರಾಗಿದ್ದರು.

ಶಕುಂತಲಾ ದೇವಿ
ಜನನನವೆಂಬರ್ 4, 1929
ಮರಣಏಪ್ರಿಲ್ 21, 2013 (ವಯಸ್ಸು - 89)
Cause of deathಹೃದಯಾಘಾತ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಮಾನವ ಕಂಪ್ಯೂಟರ್
ವೃತ್ತಿ(ಗಳು)ಗಣಿತ ಶಾಸ್ತ್ರಜ್ಞೆ, ಜ್ಯೋತಿಷ ಶಾಸ್ತ್ರಜ್ಞೆ, ವ್ಯಕ್ತಿತ್ವ ವಿಕಸನ ತಜ್ಞೆ
Awardsಗಿನ್ನಿಸ್ ವಿಶ್ವದಾಖಲೆಗಳಲ್ಲಿ ವಿಶ್ವದ ಅತ್ಯಂತ ವೇಗದ ಮಾನವ ಕಂಪ್ಯೂಟರ್

ಜೀವನ

ಶಕುಂತಲಾ ದೇವಿ,[೨] ಕ್ರಿ.ಶ.೧೯೨೯ರ ನವೆಂಬರ್, ೪ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ, 'ಸಿ.ವಿ.ಎಸ್.ರಾಜಾರಾವ್', ಹಾಗೂ ತಾಯಿ,'ಸುಂದರಮ್ಮ'. (ಶಕುಂತಲಾ ದೇವಿಯವರ ಜನನದ ತಾರೀಖು ವಿವಾದಾಸ್ಪದವಾಗಿದೆ. ಕೆಲವು ಪತ್ರಿಕೆಗಳು ೧೯೨೯ ಮತ್ತು ೧೯೩೯ ಎಂದು ದಾಖಲಿಸಿರುತ್ತಾರೆ) ಅವರ ತಂದೆ ಪುರೋಹಿತರಾಗಿದ್ದರು. ಕೆಲವು ಸಮಯ ಅವರು, ಸರ್ಕಸ್ ನಲ್ಲೂ ಕೆಲಸದಲ್ಲಿದ್ದರು. ಶಕುಂತಲಾದೇವಿಯವರು, ಚಿಕ್ಕ ಪ್ರಾಯದಲ್ಲೇ ಗಣಿತದಲ್ಲಿ ಅತ್ಯಾಸಕ್ತರಾಗಿದ್ದರು.ಅತ್ಯಂತ ಪ್ರತಿಭಾನ್ವಿತರಾಗಿದ್ದರು. ಹಲವಾರು ಗಣಿತದ ಸಮಸ್ಯೆಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು.[೩] ಬಾಲ್ಯದಿಂದಲೇ ಶಕುಂತಲಾದೇವಿಯವರ ಪ್ರತಿಭೆ,ಸಾಮಾನ್ಯ ಜನರಿಗೂ ಅರ್ಥವಾಗುವಷ್ಟು ಜನಜನಿತವಾಗಿತ್ತು.

ಪೌರೋಹಿತ್ಯ ಬೇಡವಾಗಿತ್ತು

  • ಮನೆತನದ ಪೌರೋಹಿತ್ಯ ವೃತ್ತಿಯನ್ನು ಮಾಡಲು ಒಪ್ಪದೆ, ಇವರ ತಂದೆ ದೇವಸ್ಥಾನದಲ್ಲಿ ಪೂಜಾರಿಯಾಗುವುದನ್ನು ವಿರೋಧಿಸಿ,ಸರ್ಕಸ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಮಗಳಿಗೆ 'ಇಸ್ಪೀಟ್ ಎಲೆ'ಗಳಲ್ಲಿ ಮಾಡುವ ಕೆಲವು ಕೈಚಳಕಗಳ ಬಗ್ಗೆ ತರಬೇತು ನೀಡಿದರು. ತಂದೆಯ ಈ ಪ್ರತಿಭೆ, ಪುಟ್ಟ ಬಾಲಕಿ ಶಕುಂತಲಾರ ಮೇಲೆ ಅದ್ಭುತ ಪರಿಣಾಮ ಬೀರಿತು.
  • ಇದಾದ ತರುವಾಯ, ಆ ಚಿಕ್ಕ ವಯಸ್ಸಿನಲ್ಲಿಯೇ ಮಗಳ ಪ್ರತಿಭೆಯೆನೂ ಮನಗಂಡ ತಂದೆ, ತಮ್ಮ ಹೆಚ್ಚು ಸಮಯವನ್ನು ಮಗಳ ಇಷ್ಟದ ವಿಷಯಗಳ ಬಗ್ಗೆ ತರಬೇತಿ ಕೊಡುವುದರಲ್ಲೇ ಕಳೆದರು. ಐದು ವರ್ಷ ತುಂಬುವ ವೇಳೆಗೆ ಅಂಕೆಗಳ ಜೊತೆ ಆಟವಾಡುವ ಮಗಳ ಸಾಮರ್ಥ್ಯ ಅರಿತ ತಂದೆ ಸರ್ಕಸ್ ಕಂಪೆನಿ ತೊರೆದು ಮಗಳ ಗಣಿತದ ಜ್ಞಾನ ಪ್ರದರ್ಶನದ ಮೇಳ ಏರ್ಪಡಿಸಲು ಆರಂಭಿಸಿದರು.
  • ಮೈಸೂರು ವಿಶ್ವವಿದ್ಯಾಲಯದಲ್ಲಿ ಬಹುದೊಡ್ಡ ಪ್ರದರ್ಶನ ನಡೆಸಿದಾಗ ಈ `ಮಾನವ ಕಂಪ್ಯೂಟರ್'ಗೆ ಕೇವಲ ಆರರ ಹರೆಯ. ಅಂಕೆಗಳೊಂದಿಗೆ ಸರಸ ಆಡುವುದೆಂದರೆ ಅವರಿಗೆ ನೀರು ಕುಡಿದಷ್ಟು ಸುಲಭವಾಗಿತ್ತು.

ಅಂಕೆಗಳೆಂದರೆ ಬಲು ಆಸಕ್ತಿ

  • ಅಂಕೆಗಳು ಶಕುಂತಲರಿಗೆ ಬಹಳ ಮುದಕೊಡುತ್ತಿತ್ತು. ಲೀಲಾ ಜಾಲವಾಗಿ ಅಂಕೆ-ಸಂಖ್ಯೆಗಳ ಒಡನೆ ಆಟವಾಡುತ್ತಿದ್ದ ಅವರು, ತಮ್ಮ ೬ ನೆಯ ವಯಸ್ಸಿನಲ್ಲೇ 'ಮೈಸೂರ್ ವಿಶ್ವವಿದ್ಯಾಲಯದ ಸಭಾಂಗಣ'ದಲ್ಲಿ ಒಂದು ಚಿಕ್ಕ ಪ್ರದರ್ಶನ ನೀಡಿದರು. ೧೩ ರಿಂದ ೨೦೦ ರ ವರೆಗಿನ ಸಂಖ್ಯೆಗಳನ್ನಿಟ್ಟುಕೊಂಡು ಗುಣಾಕಾರ, ಭಾಗಾಕಾರ, ವರ್ಗಮೂಲ,ಘನಮೂಲ ಮೊದಲಾದ ಯಾವುದೇ ಗಣಿತದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಬಿಡಿಸುತ್ತಿದ್ದದ್ದು ಅವರ ವಿಶೇಷಗುಣವಾಗಿತ್ತು.
  • ಇಷ್ಟು ಚಿಕ್ಕವಯಸ್ಸಿನ ಬಾಲಕಿಯ ಪಾಂಡಿತ್ಯವನ್ನು ಕಂಡ ಜನ ಬೆರಗಾದರು. ಹೀಗೆ ಕಾಲಕ್ರಮದಲ್ಲಿ ಬೆಳೆಯುತ್ತಾ ಹೋದ ಬಾಲಕಿಯ ಗಣಿತ ಶಾಸ್ತ್ರದ ಕ್ಷಮತೆ ಮುಗಿಲೆತ್ತರಕ್ಕೆ ಏರಿತು. ಶಕುಂತಲಾರವರು ತಮ್ಮ ೧೫ ರ ವಯಸ್ಸಿನಲ್ಲಿ, ಲಂಡನ್ ನಗರದಲ್ಲಿ ಒಂದು 'ಷೋ' ಕೊಟ್ಟು ಅಲ್ಲಿನ ವಿದ್ವತ್ ಜನರಿಂದ 'ಸೈ' ಎನ್ನಿಸಿಕೊಂಡರು. ಈ ಪ್ರದರ್ಶನ ಅವರ ಜೀವನದಲ್ಲಿ ಅತಿ ಮಹತ್ವದ್ದಾಗಿತ್ತು. ತಕ್ಷಣವೇ ಅವರು ವಿಶ್ವವಿಖ್ಯಾತರಾದರು.

ಶಾಲೆಯ ಕಲಿಕೆ ಅವರಿಗೆ ಒಗ್ಗಲಿಲ್ಲ

  • ತಮ್ಮ ಮೂರನೆಯ ವಯಸ್ಸಿನಲ್ಲೇ ತಂದೆಯವರ ಜೊತೆ ಸರ್ಕಸ್ ಮೊದಲಾದ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಶಕುಂತಲಾರಿಗೆ ಶಾಲಾ ಕಾಲೇಜಿಗೆ ಹೋಗುವ ಬಗ್ಗೆ ತೀವ್ರತೆ ಇರಲಿಲ್ಲ. ಹಲವಾರು ಪದವಿಗಳನ್ನು ಗಳಿಸಿದ ಪಂಡಿತರೂ ಶಕುಂತಲಾರವರ ಮುಂದೆ ತಮ್ಮ ಕುಬ್ಜತೆಯನ್ನು ಒಪ್ಪಿಕೊಂಡರು.
  • ಸನ್.೧೯೭೭ ರಲ್ಲಿ ವಿಶ್ವದ ದೊಡ್ಡ ವೇದಿಕೆಯೊಂದರಲ್ಲಿ ಪ್ರತಿಷ್ಥಿತ ಗಣಿತಜ್ಞರ ಸಮ್ಮುಖದಲ್ಲಿ ಶಕುಂತಲಾದೇವಿಯವರು, ಒಂದು ಪ್ರದರ್ಶನ ನೀಡಿದಾಗ, ಅದು ಒಂದು 'ಐತಿಹಾಸಿಕ ಪ್ರದರ್ಶನ'ವಾಗಿ, ಅವರಿಗೆ ಬಹಳ ಮನ್ನಣೆ, ಗೌರವಗಳನ್ನು ತಂದುಕೊಟ್ಟಿತು. ೨೦೧ ಸಂಖ್ಯೆಗಳ ಅಂಕೆಯೊಂದರ ೨೩ ನೆ ವರ್ಗಮೂಲವನ್ನು ಚಿಟಿಕೆ ಹೊಡೆಯುವುದರಲ್ಲಿ ಕಂಡು ಹಿಡಿದು, ಕಪ್ಪು ಹಲಿಗೆಯ ಮೇಲೆ ಬರೆದರು.
  • ಅವರು ತೆಗೆದುಕೊಂದ ಸಮಯ ಕೇವಲ ೫೦ ಸೆಕೆಂಡುಗಳು. ಆ ಸಮಯದಲ್ಲಿ ಬಳಕೆಯಲ್ಲಿದ್ದ 'ಪ್ರಬಲ ಕಂಪ್ಯೂಟರ್' ಇದೇ ಕೆಲಸಕ್ಕೆ ೬೨ ಸೆಕೆಂಡ್ ಕಾಲ ತೆಗೆದುಕೊಂಡಿತ್ತು. ಕಂಪ್ಯೂಟರಿಗಿಂತಾ ವೇಗವಾಗಿ ಲೆಕ್ಕ ಮಾಡಬಲ್ಲ ವ್ಯಕ್ತಿಯೆಂಬ ಹೆಗ್ಗಳಿಕೆ ಅವರಿಗೆ ಒದಗಿ ಬಂತು.ಅಂದಿನಿಂದ ವಿಶ್ವದಲ್ಲಿ ಅವರನ್ನು 'ಮಾನವ ಕಂಪ್ಯೂಟರ್ ಎಂದೇ, ಇಂದಿಗೂ ಸಂಬೋಧಿಸಲಾಗುತ್ತಿದೆ.
  • ವರ್ಷಾನುಗಟ್ಟಲೆ ಈ ಹವ್ಯಾಸವನ್ನು ಜಾರಿಯಲ್ಲಿಟ್ಟುಕೊಂಡು ಇನ್ನು ಹೆಚ್ಚು ಪ್ರಬಲವಾಗಿ ತಮ್ಮ ಕೌಶಲವನ್ನು ವೃದ್ಧಿಸಿಕೊಂಡು, ತಮ್ಮ 'ಆತ್ಮ ವಿಶ್ವಾಸ'ವನ್ನು ಧೃಢಪಡಿಸಿಕೊಂಡು, ಅವರು ಮುನ್ನುಗ್ಗಿದರು. ವಿಶ್ವದ ಹಲವಾರು ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅವರು ಆಹ್ವಾನಿಸಲ್ಪಟ್ಟರು. ಹೀಗೆ ಶಕುಂತಲಾ, ತಮ್ಮ ಪ್ರದರ್ಶನಗಳನ್ನು ಕೊಡುತ್ತಾ ಸಾಗಿದರು.
  • 'ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್' ನಲ್ಲಿ ಅವರು ತಮ್ಮ ದಾಖಲೆಯೊಂದನ್ನು ಸಾಧಿಸಿ, ದಾಖಲಿಸಿದರು. ವಿಶ್ವದ ಹಲವಾರು ಹೆಸರಾದ ವಿಶ್ವವಿದ್ಯಾಲಯಗಳಲ್ಲಿ ಅವರ ಪ್ರದರ್ಶನಗಳು ಸತತವಾಗಿ ನಡೆದವು. ಬಾಲ್ಯದಲ್ಲಿ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರ ಬಡ ಪರಿವಾರ, ಹಲವಾರು ಕಷ್ಟ-ನಷ್ಟಗಳನ್ನು ಅನುಭವಿಸಿತು.
  • ಕೆಲವು ವರ್ಷಗಳ ಹಿಂದೆ ಟೈಮ್ಸ್ ಆಫ್ ಇಂಡಿಯ' ಪತ್ರಿಗೆ ಕೊಟ್ಟ ಸಂದರ್ಶನದಲ್ಲಿ ಶಕುಂತಲಾ ದೇವಿಯವರು, ಹೇಳಿದ ಮಾತುಗಳು : " ೧೦ ನೆಯ ವಯಸ್ಸಿನವರಾಗಿದ್ದಾಗ ಹೇಗೋ ತಂದೆಯವರು, ಶಕುಂತಲಾರನ್ನು, ಚಾಮರಾಜ ಪೇಟೆಯಲ್ಲಿದ್ದ 'ಸೇಂಟ್ ತೆರೇಸಾ ಕಾನ್ವೆಂಟ್ ಸ್ಕೂಲ್' ನಲ್ಲಿ ಒಂದನೆಯ ತರಗತಿಗೆ ಸೇರಿಸಿದರು.
  • ಪ್ರತಿ ತಿಂಗಳೂ ೨ ರೂಪಾಯಿ ಫೀಸ್ ಕೊಡಲು ಸಾಧ್ಯವಾಗದೆ, ೩ ತಿಂಗಳ ನಂತರ ಶಾಲೆಯಿಂದ ಹೊರಗೆ ಹಾಕಲ್ಪಟ್ಟರು"ಹಾಗಾಗಿ ಶಕುಂತಲಾದೇವಿಯವರಿಗೆ ಬಡ-ಮಕ್ಕಳ ಬಗ್ಗೆ ಅಪಾರ ಅನುಕಂಪವಿತ್ತು. ತಮ್ಮ ಕೈಲಾದ ಸಹಾಯ ಮಾಡಲು ಅವರು ಸದಾ ಸಿದ್ಧರಿದ್ದರು. ಹೀಗೆ ಬಡತನದ ಬೇಗೆಯನ್ನು ಬಾಲ್ಯದಲ್ಲಿ ಅನುಭವಿಸಿದ ಶಕುಂತಲಾದೇವಿ, ಹಾಗೂ ಪರಿವಾರ ಈಗ ಹಣಕಾಸಿನ ಬಗ್ಗೆ ಸಂತೃಪ್ತಿಯನ್ನು ಹೊಂದಿದೆ.

ಜ್ಯೋತಿಷದಲ್ಲಿ ಆಸಕ್ತಿ

ಜ್ಯೋತಿಷ ಶಾಸ್ತ್ರ ಅವರಿಗೆ ಬಹಳ ಪ್ರಿಯವಾದ ಮತ್ತೊಂದು ವಿಷಯವಾಗಿತ್ತು. ಗಣಿತ, ಜ್ಯೋತಿಷ ಶಾಸ್ತ್ರಗಳ ಒಡನಾಟದ ಜೊತೆ ಜೊತೆಗೆ, ಅಡುಗೆಯನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದರು. ಅಡುಗೆ ವಿಷಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.ಹಲವಾರು ಹೊಸ ಉಪಯುಕ್ತ ಮಾಹಿತಿಗಳನ್ನು ಅವರು ತಮ್ಮ ಅಡುಗೆ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇದಲ್ಲದೆ ಅವರು ಕೆಲವು ಉಪನ್ಯಾಸಗಳನ್ನೂ ಕೊಟ್ಟಿದ್ದಾರೆ.ಅವುಗಳಲ್ಲಿ ಪ್ರಮುಖವಾದವುಗಳು :

  • 'ವ್ಯಕ್ತಿತ್ವ ವಿಕಸನ',
  • 'ಮಕ್ಕಳ ಬುದ್ಧಿ ಬೆಳವಣಿಗೆ',ಮೊದಲಾದವುಗಳು.

ಸಾಧನೆಗಳು

  • ೧೯೭೭ ರಲ್ಲಿ ಡಲ್ಲಾಸ್‌‌ನಲ್ಲಿ 188132517 ವರ್ಗಮೂಲವನ್ನು ವೇಗವಾಗಿ ಕಂಡುಹಿಡಿಯುವ ಸ್ಪರ್ಧೆಯಲ್ಲಿ ಕಂಪ್ಯೂಟರ್‌ನೊಂದಿಗೆ ಸೆಣಸಿ ಗೆದ್ದರು.

ಮತ್ತೊಮ್ಮೆ, ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಅವರಿಗೆ *Find value of x (√x23 = ..) ‍x23 =

  • 91674867692003915809866092758538016248310668014430862240712651642793465704086709659 3279205767480806790022783016354924852380335745316935111903596577547340075681688305 620821016129132845564805780158806771 ದ 23ನೇ ವರ್ಗಮೂಲ ಕಂಡುಹಿಡಿಯುವಂತೆ ಹೇಳಲಾಯಿತು. ಇದಕ್ಕೆ ಅವರು ೫೦ ಸೆಕೆಂಡುಗಳಲ್ಲಿ ಉತ್ತರಿಸಿದರು. ಅವರ ಉತ್ತರ 546372891(x=546372891) ಅನ್ನು ಧೃಡಪಡಿಸಲು UNIVAC 1108 ಕಂಪ್ಯೂಟರ್ ಒಂದು ನಿಮಿಷ ಕಾಲಾವಕಾಶ ತೆಗೆದುಕೊಂಡಿತು(ಶಕುಂತಲಾ ದೇವಿಯವರಿಗಿಂತ ೧೦(10)ಸೆಕೆಂಡು ಹೆಚ್ಚು) ಅದೂ ೧೨೦೦೦ ಇನ್ಸ್ಟ್ರಷನ್ನುಗಳನ್ನು ಅದಕ್ಕೆ ಫೀಡ್ ಮಾಡಿದನಂತರ] [೪]
  • ೧೯೮೦ರ ಜೂನ್ ೧೮ರಂದು, ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ 7,686,369,774,870 ಸಂಖ್ಯೆಯಿಂದ 2,465,099,745, 779 ಸಂಖ್ಯೆಯನ್ನು ಗುಣಿಸುವಂತೆ ಸವಾಲು ಎಸೆಯಲಾಯಿತು. ಇದಕ್ಕೆ ೨೮ ಸೆಕೆಂಡುಗಳಲ್ಲಿ 18,947,668,177,995,426,462,773,730 ಎಂದು ಶಕುಂತಲಾದೇವಿ ಉತ್ತರಿಸಿದ್ದರು. ಈ ಸಂದರ್ಭವನ್ನು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ೧೯೯೫ರಲ್ಲಿ ನಮೂದಿಸಲಾಗಿದೆ.[೫]

ಖಾಸಗಿ ಬದುಕು

  • ಶಕುಂತಲಾ ದೇವಿಯವರು ಜ್ಯೋತಿಶಾಸ್ತ್ರಜ್ಞೆಯಾಗಿದ್ದರು, ಜನ್ಮದಿನ ಮತ್ತು ಹುಟ್ಟಿದ ಸಮಯ ಹಾಗೂ ಸ್ಥಳದ ಮಾಹಿತಿ ಪಡೆದು ಜ್ಯೋತಿಷದ ಸಲಹೆಗಳನ್ನು ನೀಡುತ್ತಿದ್ದರು. (ಕೆಳಗೆ ನೀಡಿರುವ Astrology for You ದ ಕೊಂಡಿಯನ್ನು ನೋಡಿ). ಖಗೋಳಶಾಸ್ತ್ರದಲ್ಲೂ ಅವರಲ್ಲಿ ಸಿದ್ಧಿ ಇತ್ತು. ಸ್ವಾದಿಷ್ಟವಾದ ಖಾದ್ಯ ತಯಾರಿಸುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು.
  • ಶಕುಂತಲಾ ದೇವಿಯವರು ೧೯೪೪ರಲ್ಲಿ ೧೫ ವರ್ಷದವರಾಗಿದ್ದಾಗ ಲಂಡನ್ ಗೆ ತಂದೆಯ ಜೊತೆಯಲ್ಲಿ ಹೋದರು . ೧೯೬೦ ರಲ್ಲಿ ಭಾರತಕ್ಕೆ ವಾಪಾಸಾದರು. ಅÀವರು ಕಲ್ಕತ್ತಾದ ಐ.ಎ.ಎಸ್. ಆಫೀಸರಾದ ಪರಿತೋಷ ಬ್ಯಾನರ್ಜಿಯವರನ್ನು ೧೯೬೦ ರಲ್ಲಿ ಮದುವೆಯಾದರು. ಆದರೆ ೧೯೭೯ ರಲ್ಲಿ ವಿವಾಹ ವಿಶ್ಛೇದನ ಪಡೆದು ಬೆಂಗಳೂರಿಗೆ ಮರಳಿದರು. ಬೆಂಗಳೂರಿನಲ್ಲಿ ಅವರು ಜನರಿಗೆ ಮತ್ತು ಗಣ್ಯರಿಗೆ ಜ್ಯೋತಿಷದ ಸಲೆಹೆಗಾರರಾಗಿ ಉದ್ಯೋಗ ಆರಂಬಿಸಿದರು.
  • ಅವರ ಅನುಪಮಾ ಎಂಬ ಮಗಳು ತಂದೆಯವರ ಸಂಸ್ಥೆಯಲ್ಲಿ (ನಿರ್ದೆಶಕರು) ಡೈರೆಕ್ಟರಾಗಿದ್ದಾರೆ. ಶಕುಂತಲಾ ಅವರ ಪತಿ ಪರಿತೋಷ ಬ್ಯಾನರ್ಜಿಯವರು ಕಲ್ಕತ್ತಾದಲ್ಲಿ ೨೦೧೦ ರಲ್ಲಿ ತೀರಿಕೊಂಡರು. ಶಕುಂತಲಾದೇವಿಯವರು ಖಗೋಲ ಶಾಸ್ತ್ರ, ಜ್ಯೋತಿಷ ಶಾಸ್ತ್ರ , ಗಣಿತ ಇವುಗಳವುಗಳ ಪ್ರಸಾರಕ್ಕಾಗಿ ವಿದ್ಯಾಫೌಂಡೇಶನ್ ಟ್ರಸ್ಟ್ ನ್ನು ಸ್ಥಾಪಿಸಿದ್ದಾರೆ. ಅವರಿಗೆ ಜೀವಮಾನದ ಸಾಧನೆಗಾಗಿ ಇದೇ೨೦೧೩ ರ ಮಾರ್ಚಿಯಲ್ಲಿ ಮುಂಬಯಿಯಲ್ಲಿ ಸನ್ಮಾ ಮಾಡಲಾಯಿತು.

ಸ್ಥಾಪಿಸಿದ ಸಂಸ್ಥೆಗಳು

  • ಎಸ್.ಐ.ಐ.ಎಮ್.ಎಸ್ ಅಂಡ್ ಪಿಯು ಕಾಲೇಜ್ ಸ್ಥಾಪನೆ: ಬೆಂಗಳೂರಿನ ಎಚ್.ಎಸ್.ಆರ್.ಲೇಔಟ್'ನಲ್ಲಿ, 'ಶಕುಂತಲಾ ದೇವಿ ಇಂಟರ್ನಾಷನಲ್ ಇನ್ ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಮತ್ತು ಪಿಯು ಕಾಲೇಜ್' ಎಂಬ ಪ್ರತಿಷ್ಠಿತ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ನಡೆಸುತ್ತಿದ್ದರು. ಈ ಸಂಸ್ಥೆ ಕೆಲವು ವಿಶೇಷ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರಲ್ಲಿ ಕೆಲಸಮಾಡುತ್ತಿದೆ. ಇಲ್ಲಿ 'ವೇದಿಕ್ ಮ್ಯಾಥೆಮ್ಯಾಟಿಕ್ಸ್' ಎನ್ನುವ ವಿಷಯದ ಬಗ್ಗೆ ಸಾಕಷ್ಟು ಉತ್ತಮ ಕೆಲಸ ನಡೆದಿದೆ.

ಪ್ರಶಸ್ತಿ ಪುರಸ್ಕಾರಗಳು

  • ಸನ್.೧೯೬೯ ರಲ್ಲಿ, 'ಆ ವರ್ಷದ ಅತಿ ಮಹತ್ವದ ಮಹಿಳೆ' ಎಂಬ ಪ್ರಶಸ್ತಿಯನ್ನು 'ಫಿಲಿಪೈನ್ಸ್ ವಿಶ್ವವಿದ್ಯಾಲಯ'ಪ್ರದಾನಮಾಡಿತು. ಇದರ ಜೊತೆಗೆ ಬಂಗಾರದ ಪದಕ ಸಹಿತ.
  • 'ರಾಮಾನುಜಮ್ ಮ್ಯಾಥೆಮೆಟಿಕಲ್ ಜೀನಿಯಸ್ ಪ್ರಶಸ್ತಿ'ಯನ್ನು ಅಮೆರಿಕದ ವಾಶಿಂಗ್ಟನ್ ಡಿ.ಸಿ.ಯಲ್ಲಿ ಪ್ರದಾನಮಾಡಲಾಯಿತು. ಈ ಪ್ರಶಸ್ತಿ ಹಾಗೂ ಸ್ವರ್ಣ ಪದಕಗಳನ್ನು ಸನ್. ೧೯೮೮ ರಲ್ಲಿ ಆಗ 'ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದವರ ಹಸ್ತದಿಂದ ವಿತರಿಸಲಾಯಿತು '.

ನಿಧನ

೮ ವರ್ಷಗಳ ಹಿಂದೆ (೨೦೦೫ರಲ್ಲಿ) ಎದೆನೋವು ಕಾಣಿಸಿಕೊಂಡು 'ಹೃದಯದ ಶಸ್ತ್ರಚಿಕಿತ್ಸೆ' ಮಾಡಿಸಿಕೊಂಡಿದ್ದರು.[೬] ಆಪರೇಶನ್ ಆದ ನಂತರ, ವೈದ್ಯರ ಸಲಹೆಯ ಮೇರೆಗೆ, ಪರ್ಯಟನೆ ಕಡಿಮೆ ಮಾಡಿದ್ದರು. 'ಮಾನವ ಕಂಪ್ಯೂಟರ್' ಎಂದೇ ವಿಶ್ವಪ್ರಸಿದ್ಧರಾಗಿದ್ದ ಶಕುಂತಲಾದೇವಿಯವರು, ಏಪ್ರಿಲ್ ೨೧, ೨೦೧೩ ರ ರವಿವಾರ ಬೆಳಿಗ್ಯೆ, ೮-೧೫ ಕ್ಕೆ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.ಅವರ ಪಾರ್ಥಿವ ಶರೀರವನ್ನು ಬಸವನಗುಡಿಯ ಅವರ ನಿವಾಸಕ್ಕೆ ತಂದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅದೇ ದಿನದ ಸಾಯಂಕಾಲ ೫-೩೦ ರ ಸುಮಾರಿಗೆ 'ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ' ಜರುಗಿತು.ಮೃತರಿಗೆ, ೮೩ (೭೩) ವರ್ಷ ವಯಸ್ಸಾಗಿತ್ತು. ಓರ್ವ ಪುತ್ರಿ, ಅಳಿಯ. ಇಬ್ಬರು ಮೊಮ್ಮಕ್ಕಳು(ಹೆಣ್ಣುಮಕ್ಕಳು) ಸೇರಿದಂತೆ, ಅಪಾರ ಬಂಧು-ಬಳಗ, ಹಾಗೂ ಶಿಷ್ಯ ವೃಂದವನ್ನು ಅವರು ಅಗಲಿ ತೆರಳಿದ್ದಾರೆ.[೭]

ಪುಸ್ತಕಗಳು

ಮತ್ತೊಂದಿಷ್ಟು ಪುಸ್ತಕಗಳ ಪಟ್ಟಿ:

  • Puzzles to Puzzle You (New Delhi: Orient, 2005). ISBN 978-81-222-0014-0
  • More Puzzles to Puzzle You (New Delhi: Orient, 2006). ISBN 978-81-222-0048-5
  • Book of Numbers (New Delhi: Orient, 2006). ISBN 978-81-222-0006-5
  • Perfect Murder (New Delhi: Orient, 1976), OCLC 3432320
  • Figuring: The Joy of Numbers (New York: Harper & Row, 1977), ISBN 978-0-06-011069-7, OCLC 4228589
  • The World of Homosexuals (New Delhi: Vikas Publications, 1977), ISBN 0706904788, ISBN 978-0706904789
  • In the Wonderland of Numbers (New Delhi: Orient, 2006). ISBN 978-81-222-0399-8
  • Super Memory: It Can Be Yours (New Delhi: Orient, 2011). ISBN 978-81-222-0507-7; (Sydney: New Holland, 2012). ISBN 978-1-74257-240-6, OCLC 781171515
  • Mathability : Awaken the Math Genius in Your Child[೮]
  • Astrology for You[೯] (New Delhi: Orient, 2005). ISBN 978-81-222-0067-6
  • 'ಮ್ಯಾಥೆಮೆಟಿಕಲ್ ಮೆರ್ರಿ ಗೋ ಅರೌಂಡ್'
  • 'ಸೋಷಿಯಲ್ ಪ್ಲಾನಿಂಗ್ ಇನ್ ಇಂಡಿಯ'
  • 'ಸಿಸ್ಟಮ್ಸ್ ಆಫ್ ಎಜುಕೇಷನ್'
  • 'ಟ್ರೆಡಿಷನ್ಸ್ ಅಂಡ್ ಮಾಡರ್ನಿಟಿ ಅಮಾಂಗ್ ಇಂಡಿಯನ್ ವಿಮೆನ್'
  • 'ಕ್ಯಾಸ್ಟ್ ಸಿಸ್ಟಮ್ ಇನ್ ಇಂಡಿಯ'
  • 'ಪರಿಸರ ಎನ್ವಿರಾನ್ಮೆಂಟ್ ರೂರಲ್ ಡೆವ್ಲಪ್ಮೆಂಟ್'
  • 'ಬ್ಲೆಸ್ಡ್ ಫಿಶರ್ ಮೆನ್ ಅಂಡ್ ಅದರ್ ಸ್ಟೋರೀಸ್-ಕಥಾ ಸಂಗ್ರಹ'

ಆಸ್ತಿಯ ಬಗ್ಗೆ ವಿವಾದಗಳು

  • ಶಕುಂತಲಾದೇವಿಯವರ ಚಿರ ಆಸ್ತಿಯ ಬಗ್ಗೆ ಬಹಳ ವಿವಾದಗಳು ಆಗಿವೆ. ಅವರ ಮಗಳಿಗೂ ಮತ್ತು ಟ್ರಸ್ಟ್ ಗೂ, ಒಮ್ಮತವಿಲ್ಲ. ೪೨ ವರ್ಷದ ಅನುಪಮ ಬ್ಯಾನರ್ಜಿ, ಶಕುಂತಲರವರ ಆಸ್ತಿಗೆ ದಿಕ್ಕಾಗಿರುವ ಒಬ್ಬ ಮಗಳು. ವಾಸ್ತವವಾಗಿ ತಾಯಿಯ ಎಲ್ಲಾ ಆಸ್ತಿಯೂ ಅವರಿಗೆ ಸಿಗಬೇಕೆಂದು ಅವರು ಬಯಸಿದ್ದಾರೆ. ಶಕುಂತಲಾ ದೇವಿಯವರು ನಿರ್ಮಿಮಿಸ, ಶಕುಂತಲಾದೇವಿ ಎಜುಕೇಶನ್ ಫೌಂಡೇಶನ್ ಒಂದು ಸಾರ್ವಜನಿಕ ಸಂಸ್ಥೆಯಾಗಿದೆ.
  • ಇದರ ಟ್ರಸ್ಟ್ ನ ಸೆಕ್ರೆಟರಿಯಾಗಿ ಡಿ. ಎನ್. ರಾಮಮೂರ್ತಿಯವರು ಬಹಳ ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ. ಅವರ ಹೇಳಿಕೆಯ ಮೇರೆಗೆ, ಶಕುಂತಲರವರು ರಾಮಮೂರ್ತಿಯವರ ಹೆಸರಿಗೆ, ಒಂದು ವಿಲ್ ಬರೆದಿಟ್ಟು, ಅದನ್ನು ಚಾಮರಾಜಪೇಟ್ ನ, ಸಬ್ ರೆಜಿಸ್ಟ್ರಾರ್ ಆಫೀಸಿನಲ್ಲಿ ೨೦೧೨ ರ ಮೇ ೯ ರಂದು ರೆಜಿಸ್ಟರ್ ಮಾಡಲಾಗಿತ್ತು ಎಂದು ವಾದಿಸುತ್ತಾರೆ.
  • ೬೫ ವರ್ಷ ಪ್ರಾಯದ ರಾಮಮೂರ್ತಿ, ಚಾಮರಾಜಪೇಟೆಯ ನಿವಾಸಿ. ಶಕುಂತಲಾದೇವಿಯವರ ೨೦೧೨ ರ ಮೇ ೮ ರಂದು ಬರೆದಿಟ್ಟ ವಿಲ್ ನಲ್ಲಿ ಹೆಸರನ್ನು ನೊಂದಾಯಿಸಲಾಗಿರುವ ಏಕೈಕ ವ್ಯಕ್ತಿಯಾಗಿದ್ದಾರೆ. (ಸಾಯುವ ೧೧ ತಿಂಗಳ ಮೊದಲು ಬರೆದಿಟ್ಟ ವಿಲ್) ವಕೀಲರು ಮೌಲ್ಯಮಾಪನ ಮಾಡಿರುವ ಪ್ರಕಾರ, ಸುಮಾರು, ೫೦ ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಬೆಂಗಳೂರು, ನ್ಯುಯಾರ್ಕ್, ಮತ್ತು ಲಂಡನ್ ನಲ್ಲಿ ದೇವಿಯವರು ಬಿಟ್ಟುಹೋಗಿದ್ದಾರೆ.
  • ಅನುಪಮ, ತಿರುಪತಿ ರಸ್ತೆಯಲ್ಲಿ ರುವ ವ್ಹೈಟ್ ಫಿಲ್ಡ್ ನ, ವೈಟ್ ಎಕರ್ಸ್ ನ ನಿವಾಸಿಯಾಗಿದ್ದಾರೆ. ಅನುಪಮ, ತಮ್ಮ ತಾಯಿ ಸಾಯುವ ಮುನ್ನ ವಿಲ್ ಬರೆದಿರಲಿಲ್ಲ. ಮಗಳಲ್ಲದೆ ಬೇರೆಯಾರು ಆಸ್ತಿಗೆ ದಿಕ್ಕು ಆಗಲು ಸಾದ್ಯವಿಲ್ಲ. ಎಸ್ಟೇಟ್, ಮತ್ತಿತರ ಎಲ್ಲ ಆಸ್ತಿಗಳೂ ಕಾನೂನು ರೀತಿಯಾಗಿ ಮಗಳಿಗೇ ಸೇರಬೇಕು. ಹಾಗೆ ಅದನ್ನು ತಮ್ಮ ಹೆಸರಿಗೆ ಮಾಡಲು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಹಾಕಿ, 'ಲೆಟರ್ ಆಫ್ ಅಮಿನಿಸ್ಟ್ರೇಶನ್ ತಮಗೆ ಸಿಗಬೇಕೆಂದು ಕೋರಿಕೆ ಸಲ್ಲಿಸಿದ್ದಾರೆ.
  • ಅವರು, ಪಾರಿತೊಷ್ ಬ್ಯಾನರ್ಜಿಯವರನ್ನು ವಿವಾಹವಾಗಿದ್ದರು. ೧೯೭೯ ರಲ್ಲಿ ಅವರು ಪತಿಯಿಂದ ಬೇರೆಯಾದರು. ಅನುಪಮ ಬ್ಯಾನರ್ಜಿ, ಹಾಗೂ ರಾಮಮೂರ್ತಿಗಳ ವ್ಯಾಜ್ಯ ಪರಿಹಾರವಾಗಿಲ್ಲ. ಅನುಪಮ ಅದನ್ನು ಬೇಗ ಬಗೆಹರಿಸಲು ಕೋರ್ಟ್ ಗೆ, ಅಪಿಲ್ ಮಾಡಿದ್ದಾರೆ. ಆದರೆ ರಾಮಮೂರ್ತಿ ಅದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.[೧೦]

ಉಲ್ಲೇಖಗಳು

ಬಾಹ್ಯಕೊಂಡಿಗಳು

ಸಂವಾದಗಳು