ಕರ್ನೂಲು ಆಂಧ್ರಪ್ರದೇಶದ ಒಂದು ಜಿಲ್ಲೆ ಹಾಗೂ ಜಿಲ್ಲಾಡಳಿತ ಕೇಂದ್ರ ನಗರ. ತುಂಗಭದ್ರಾ ಮತ್ತು ಹಿಂದ್ರಿ ನದಿಗಳು ಇದರ ಬಳಿ ಸಂಗಮಿಸುತ್ತವೆ. ಹೈದರಾಬಾದಿನ ನಿಜಾಮನ ಆಶ್ರಿತನೊಬ್ಬನ ಜಹಗೀರಿಯಾಗಿದ್ದ ಬಂಗನಪಲ್ಲಿಯನ್ನು ೧೮೦೦ರಲ್ಲಿ ಆಗಿನ ಮದರಾಸಿಗೆ ಸೇರಿಸಲಾಗಿತ್ತು. ಇದನ್ನು ಕರ್ನೂಲು ಜಿಲ್ಲೆಗೆ ವರ್ಗಾಯಿಸಿದ್ದು ೧೯೪೮ರಲ್ಲಿ.
ಭೌಗೋಳಿಕ ಮತ್ತು ಹವಾಮಾನ
ಕರ್ನೂಲು ೧೫ಲಿ ೫೦' ಉ.ಅ. ಮತ್ತು ೭೮ಲಿ ೪' ಪೂ. ರೇ.ದಲ್ಲಿದೆ. ಚೆನ್ನೈಗೆ ವಾಯುವ್ಯದಲ್ಲಿ ೪೫೦ ಕಿಮೀ ದೂರದಲ್ಲಿ ಸಮುದ್ರಮಟ್ಟದಿಂದ ೨೭೩ಮೀ ಎತ್ತರದಲ್ಲಿ ಈ ನಗರವಿದೆ. ಜನಸಂಖ್ಯೆ ೨೦೧೧ರ ಜನಗಣತಿಯಂತೆ ೪,೮೪,೩೨೭. ಇಲ್ಲಿಯ ಹವಾಮಾನ ಬೇಸಗೆಯಲ್ಲಿ ೨೬ ಡಿಗ್ರಿ ಸೆಲ್ಸಿಯಸ್ನಿಂದ ೪೬ ಡಿಗ್ರಿ ಸೆಲ್ಸಿಯಸ್ನವರೆಗಿದ್ದರೆ, ಚಳಿಗಾಲದಲ್ಲಿ ೧೨ ಡಿಗ್ರಿ ಸೆಲ್ಸಿಯಸ್ನಿಂದ ೩೧ ಡಿಗ್ರಿ ಸೆಲ್ಸಿಯಸ್ನವರೆಗಿರುತ್ತದೆ. ಕರ್ನೂಲು ಜಿಲ್ಲೆಯ ವಿಸ್ತೀರ್ಣ ೨೪,೦೨೭ ಚ.ಕಿಮೀ. ಜನಸಂಖ್ಯೆ ೩,೫೨೯,೪೯೪ (೨೦೦೧).
ಜಿಲ್ಲೆಯ ನಡುವೆ ಉತ್ತರ-ದಕ್ಷಿಣವಾಗಿ ಹಾದುಹೋಗುವ ಎರಡು ಪರ್ವತ ಶ್ರೇಣಿಗಳು ನಲ್ಲಮಲೈ (ಅತ್ಯುನ್ನತ ಶಿಖರ ೯೧೨ಮೀ) ಮತ್ತು ಎಲ್ಲಮಲೈ (ಅತ್ಯುನ್ನತ ಶಿಖರ ೬೦೬ ಮೀ) ಜಿಲ್ಲೆಯ ಮುಖ್ಯ ನದಿಗಳು ತುಂಗಭದ್ರಾ ಮತ್ತು ಕೃಷ್ಣಾ ಭವನಾಸಿ ನದಿ ನಲ್ಲಮಲೈಯಲ್ಲಿ ಹುಟ್ಟಿ ಸಂಗಮೇಶ್ವರಂನಲ್ಲಿ ಕೃಷ್ಣಾನದಿಯನ್ನು ಸೇರುತ್ತದೆ.
ಕರ್ನೂಲು ಜಿಲ್ಲೆಯಲ್ಲಿ ಮಳೆ ಕಡಿಮೆ. ಅನಾವೃಷ್ಟಿ ಆಗಿಂದಾಗ್ಗೆ ಜಿಲ್ಲೆಯನ್ನು ಕಾಡಿಸುವುದುಂಟು. ಬೆಟ್ಟದಲ್ಲಿ ಹುಟ್ಟುವ ಅನೇಕ ಝರಿಗಳಿಗೆ ಅಡ್ಡಲಾಗಿ ಅನೇಕ ಕಟ್ಟೆಗಳನ್ನು ಕಟ್ಟಿ ನೀರಾವರಿ ಏರ್ಪಡಿಸಿಕೊಳ್ಳಲಾಗಿದೆ. ಕರ್ನೂಲು ನಗರದ ಬಳಿ ತುಂಗಭದ್ರಾ ನದಿಯಿಂದ ನಿರ್ಮಿಸಲಾಗಿರುವ ನಾಲೆಯ ಉದ್ದ ೪೦ ಮೀ.
ಕರ್ನೂಲ್ ಪುರಸಭೆಯನ್ನು ಸ್ಥಾಪಿಸಿದ್ದು ೧೮೬೬ರಲ್ಲಿ, ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯಾದದು ೧೮೯೭ರಲ್ಲಿ, ಆಂಧ್ರರಾಜ್ಯ ರಚನೆಯಾದಾಗಿನಿಂದ (೧೯೫೩) ಇದು ೧೯೫೬ರವರೆಗೂ ಆಂಧ್ರದ ರಾಜಧಾನಿಯಾಗಿತ್ತು. ಆ ವರ್ಷ ಹೈದರಾಬಾದು ಆಂಧ್ರಪ್ರದೇಶದ ರಾಜಧಾನಿಯಾ ಯಿತು. ವಿಜಯನಗರದ ದೊರೆ ಅಚ್ಯುತರಾಯ ಕಟ್ಟಿಸಿದನೆಂದು ಹೇಳಲಾದ ಕೋಟೆಯ ಒಂದು ಭಾಗ ಈಗಲೂ ಇಲ್ಲಿ ಉಳಿದಿದೆ.
ಬಿಜಾಪುರ ಸುಲ್ತಾನನ ಮೊದಲ ಮುಸ್ಲಿಂ ರಾಜ್ಯಪಾಲನಾಗಿ ಇಲ್ಲಿ ಆಳಿದ ಅಬ್ದುಲ್ ವಹಾಬನ ಗೋರಿ ಹಿಂದ್ರಿ ನದಿಯ ದಂಡೆಯ ಮೇಲಿದೆ. ಇದನ್ನು ಕಟ್ಟಿದ್ದು ೧೬೧೮ರಲ್ಲಿ. ಎರಡು ಗುಮ್ಮಟಗಳಿರುವ, ಬಿಜಾಪುರ ಶೈಲಿಯ ಈ ಕಟ್ಟಡವೇ ಕರ್ನೂಲಿನ ಮುಖ್ಯ ಸ್ಮಾರಕ. ಕರ್ನೂಲಿನಲ್ಲಿ ಆಳಿದ ಕೊನೆಯ ಹಿಂದೂ ದೊರೆ ಗೋಪಾಲರಾಜನದೆಂದು ಹೇಳಲಾದ ಅರಮನೆಯ ಅವಶೇಷಗಳೂ ಸಮೀಪದಲ್ಲೇ ಇವೆ.
ವ್ಯಾಪಾರ
ಆಂಧ್ರ ವಿಶ್ವವಿದ್ಯಾಲಯಕ್ಕೆ ಸಂಬಂಧವಾದ ಕಲಾ, ವಿಜ್ಞಾನ ಮತ್ತು ವೈದ್ಯಕೀಯ ಕಾಲೇಜುಗಳೂ ಪ್ರೌಢ ಮತ್ತು ತರಬೇತಿ ಶಾಲೆಗಳೂ ಇರುವ ಕರ್ನೂಲು ಒಂದು ಮುಖ್ಯ ವ್ಯಾಪಾರ ಕೇಂದ್ರ. ಎಣ್ಣೆ, ಹತ್ತಿ, ಜವಳಿ ಮತ್ತು ಚಾಪೆ ಇಲ್ಲಿಯ ಮುಖ್ಯ ಉತ್ಪನ್ನಗಳು. ಗುಂತಕಲ್-ಹೈದರಾಬಾ ದ್ ಗಳಿಗೆ ರೈಲ್ವೆ ಸಂಪರ್ಕವಿದೆ. ರಾಗಿ, ಹತ್ತಿ, ಬೇಳೆಕಾಳು, ಎಣ್ಣೆಬೀಜ ಮತ್ತು ಬತ್ತ ಮುಖ್ಯ ಬೆಳೆಗಳು. ಹೊಗೆಸೊಪ್ಪು ಬೆಳೆಯುತ್ತದೆ.
ಬ್ಯಾರೈಟ್, ಸ್ಟಿಯಾಟೈಟ್ ಮತ್ತು ಕಬ್ಬಿಣ ಮುಖ್ಯ ಖನಿಜಗಳು, ಹತ್ತಿ ಒತ್ತಣೆ, ನೇಯ್ಗೆ, ಎಣ್ಣೆ, ಸಾಲ್ಟ್ಪೀಟರ್ ಪರಿಷ್ಕರಣೆ ಮುಖ್ಯ ಉದ್ಯಮಗಳು. ಬಂಗನಪಲ್ಲಿಯಲ್ಲಿ ವಜ್ರದ ಗಣಿಯಿದೆ. ಮದರಾಸ್-ಮುಂಬಯಿ ಮತ್ತು ಗುಂತಕಲ್-ಹೈದರಾಬಾದ್ ರೈಲುಮಾರ್ಗಗಳು ಈ ಜಿಲ್ಲೆಯ ಮೂಲಕ ಹಾದು ಹೋಗುತ್ತವೆ. ೧೮ನೆಯ ಶತಮಾನದಲ್ಲಿ ಕರ್ನೂಲು ನವಾಬನೊಬ್ಬನ ಜಹಗೀರಿಯಾಗಿತ್ತು. ೧೮೩೮ರಲ್ಲಿ ಬ್ರಿಟಿಷರು ಈ ವಂಶದ ಹಕ್ಕನ್ನು ತಪ್ಪಿಸಿದರು.