ಕ್ಷರಣ/ಸವೆತ

ಸವೆತ ವು ನೈಸರ್ಗಿಕ ಪರಿಸರದಲ್ಲಿ ಅಥವಾ ಅವುಗಳ ಮೂಲದಲ್ಲಿ ಘನವಸ್ತುಗಳ ಸೆಡಿಮೆಂಟ್(ಕಣ),ಮಣ್ಣು,ಕಲ್ಲು ಮತ್ತಿತರ ಕಣಗಳುಹವೆಯ ಪ್ರಭಾವದಿಂದ ವಿಘಟನೆ ಮತ್ತು ಸಾಗಣೆಯಾಗಿ ಬೇರೆ ಕಡೆ ಶೇಖರಣೆಯಾಗುವ ಪ್ರಕ್ರಿಯೆ. ಇದು ಸಾಮಾನ್ಯವಾಗಿ ಗಾಳಿ,ನೀರು ಅಥವಾ ಹಿಮದ ಸಾಗಣೆಯಿಂದ ಸಂಭವಿಸುತ್ತದೆ; ಇಳಿಜಾರಿನಲ್ಲಿ ಮಣ್ಣು ಅಥವಾ ಇತರ ವಸ್ತುಗಳು ಗುರುತ್ವ ಬಲದಿಂದ ಜಾರುವ ಮೂಲಕ,ಅಥವಾ ಜೈವಿಕಸವೆತದಲ್ಲಿ ನೆಲದಡಿ ವಾಸಿಸುವ ಜೀವಿಗಳಿಂದ ಉಂಟಾಗುತ್ತದೆ.

ಕ್ಯಾಲಿಫೋರ್ನಿಯದ ಪೆಸಿಫಿಕದಲ್ಲಿ ಕ್ಲಿಫ್ ಎರೋಷನ್

ಭೂಸವೆತವು ನೈಸರ್ಗಿಕ ಕ್ರಿಯೆಯಾಗಿದ್ದು, ಮಾನವ ಭೂಬಳಕೆಯಿಂದ ಇದು ಗಮನಾರ್ಹವಾಗಿ ಹೆಚ್ಚಿದೆ. ವಿಶೇಷವಾಗಿ ಕೈಗಾರಿಕೆ ಕೃಷಿ,ಕಾಡು ಕಡಿಯುವಿಕೆ ಮತ್ತು ಪಟ್ಟಣದ ಯದ್ವಾತದ್ವಾ ಬೆಳವಣಿಗೆ.[೧][೨] ನೈಸರ್ಗಿಕ ಸಸ್ಯವರ್ಗದ ಭೂಮಿ ಅಥವಾ ಸುಸ್ಥಿರ ಕೃಷಿಪದ್ದತಿಗಳಲ್ಲಿ ಬಳಸುವ ಭೂಮಿಗಿಂತ, ಕೈಗಾರಿಕೆ ಕೃಷಿಗೆ ಬಳಸಲಾದ ಭೂಮಿ ಸಾಮಾನ್ಯವಾಗಿ ಗಮನಾರ್ಹ ಹೆಚ್ಚಿನ ಪ್ರಮಾಣದ ಸವೆತಕ್ಕೆ ಗುರಿಯಾಗುತ್ತದೆ. ವಿಶೇಷವಾಗಿ ಭೂಮಿಯನ್ನು ಉಳುಮೆಗೆ ಬಳಸುವ ವಿಚಾರದಲ್ಲಿ ಇದು ನಿಜ, ಇದು ನೆಲದ ಮೇಲ್ಭಾಗದಲ್ಲಿ ಸಸ್ಯಗಳ ಹೊದಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಮಣ್ಣಿನ ರಚನೆ ಮತ್ತು ಸಸ್ಯದ ಬೇರುಗಳು ಎರಡಕ್ಕೂ ಹಾನಿವುಂಟುಮಾಡುತ್ತದೆ. ಉಳುಮೆ ಮಾಡಿಲ್ಲದಿದ್ದರೆ ಅವು ಮಣ್ಣನ್ನು ಇರುವ ಸ್ಥಳದಲ್ಲೇ ಭದ್ರವಾಗಿ ಹಿಡಿದಿಡುತ್ತಿತ್ತು. ಆದಾಗ್ಯೂ,ಸುಧಾರಿತ ಭೂಬಳಕೆ ಪದ್ಧತಿಗಳಿಂದ ಸವೆತವನ್ನು ತಪ್ಪಿಸಬಹುದು.ಎತ್ತರದ ಪ್ರದೇಶದ ಕೃಷಿ,ಸಾಂಪ್ರದಾಯಿಕ ಉಳುಮೆ ಪದ್ಧತಿಗಳು ಮತ್ತು ಗಿಡ ನೆಡುವಿಕೆ.

ಸ್ವಲ್ಪ ಪ್ರಮಾಣದ ಸವೆತವು ನೈಸರ್ಗಿಕವಾಗಿದ್ದು,ವಾಸ್ತವವಾಗಿ ಪರಿಸರವ್ಯವಸ್ಥೆಗೆ ಆರೋಗ್ಯಕರವಾಗಿದೆ. ಉದಾಹರಣೆಗೆ,ನೀರಿನ ತೊರೆಗಳಲ್ಲಿ ನರುಜುಕಲ್ಲುಗಳು ಸತತವಾಗಿ ನೀರುಹರಿಯುವ ದಿಕ್ಕಿನಲ್ಲಿ ಸಾಗುತ್ತದೆ. ವಿಪರೀತ ಸವೆತವು ಆದಾಗ್ಯೂ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನೀರಿನ ರಾಡಿ,ಪರಿಸರವ್ಯವಸ್ಥೆ ನಾಶ ಮತ್ತು ಒಟ್ಟಾರೆ ಮಣ್ಣಿನ ನಷ್ಟ.

ಸವೆತವು ವೆದರಿಂಗ್(ಹವೆಯ ಪ್ರಭಾವಕ್ಕೆ ವಿಘಟನಗೊಳ್ಳುವ ಪ್ರಕ್ರಿಯೆ)ನಿಂದ ವ್ಯತ್ಯಾಸವನ್ನು ಹೊಂದಿದೆ. ವೆದರಿಂಗ್ ಕಲ್ಲಿನಲ್ಲಿರುವ ಖನಿಜಗಳ ರಾಸಾಯನಿಕ ಅಥವಾ ನೈಸರ್ಗಿಕ ವಿಘಟನೆ.ಇವೆರಡೂ ಪ್ರಕ್ರಿಯೆಗಳು ಜತೆಜತೆಯಾಗಿ ಉಂಟಾಗಬಹುದು.

ಕಾರಣಗಳು

ಬೇರುಗಳನ್ನು ತೆರೆದಿಟ್ಟಿರುವ ಮಣ್ಣಿನ ಸವೆತ

ಸವೆತದ ಪ್ರಮಾಣವು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಹವಾಮಾನದ ಅಂಶಗಳಲ್ಲಿ ಮಳೆ ಪ್ರಮಾಣ ಮತ್ತು ತೀವ್ರತೆ,ಸರಸಾರಿ ಉಷ್ಣಾಂಶ ಹಾಗೂ ಒಂದು ಮಾದರಿಯ ಉಷ್ಣಾಂಶ ಶ್ರೇಣಿ,ಆಯಾ ಋತುಗಳು,ಗಾಳಿಯ ವೇಗ ಮತ್ತು ಬಿರುಗಾಳಿಯ ಆವರ್ತನ ಸೇರಿವೆ. ಬೌಗೋಳಿಕ ಅಂಶಗಳಲ್ಲಿ ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನವಸ್ತು ಕಣ) ಅಥವಾ ಕಲ್ಲಿನ ವಿಧ,ಅದರ ಸರಂಧ್ರತೆ ಮತ್ತು ಒಳವ್ಯಾಪ್ತಿ, ನೆಲದ ಇಳಿಜಾರು(ಇಳುಕಲು),ಕಲ್ಲುಗಳಲ್ಲಿ ಬಾಗಿದ,ದೋಷಪೂರಿತ,ಪದರಗಳು ಅಥವಾ ವಿಘಟನೆ ಸೇರಿವೆ. ಜೈವಿಕ ಅಂಶಗಳಲ್ಲಿ ಸಸ್ಯವರ್ಗದಿಂದ ಮುಚ್ಚಿದ ಭೂಮಿ,ಅಥವಾ ಅದರ ಕೊರತೆ, ಆ ಪ್ರದೇಶದಲ್ಲಿ ವಾಸವಿರುವ ಜೀವಿಗಳ ವಿಧ ಮತ್ತು ಭೂಮಿಯ ಬಳಕೆ ಸೇರಿದೆ.

ಸಾಮಾನ್ಯವಾಗಿ ಇದೇರೀತಿಯ ಸಸ್ಯವರ್ಗ ಮತ್ತು ಪರಿಸರ ವ್ಯವಸ್ಥೆಗಳಲ್ಲಿ, ತೀವ್ರ ಪ್ರಮಾಣದ ಮಳೆ,ಆಗಾಗ್ಗೆ ಮಳೆಬೀಳುವುದು, ಹೆಚ್ಚಿನ ಗಾಳಿ ಅಥವಾ ಬಿರುಗಾಳಿಗಳಿಂದ ಹೆಚ್ಚಿನ ಸವೆತವನ್ನು ನಿರೀಕ್ಷಿಸಬಹುದು. ಮರಳು ಅಥವಾ ಕೆಸರಿನ ಅಂಶಗಳಿರುವ ಘನಕಣಗಳು ಮತ್ತು ತೀವ್ರ ಇಳಿಜಾರುಗಳ ಪ್ರದೇಶಗಳು ಸುಲಭವಾಗಿ ಸವೆಯುತ್ತವೆ, ಅತಿಯಾಗಿ ಸೀಳುವ ಅಥವಾ ಚೂರಾದ ಕಲ್ಲುಗಳಿರುವ ಪ್ರದೇಶ ಕೂಡ ಸವೆತಕ್ಕೆ ಈಡಾಗುತ್ತವೆ.ಘನ ಕಣ ಅಥವಾ ಕಲ್ಲಿನ ಸರಂಧ್ರತೆ ಅಥವಾ ಒಳವ್ಯಾಪ್ತಿಯು ನೀರು ನೆಲದಲ್ಲಿ ಇಂಗುವ ವೇಗದ ಮೇಲೆ ಪ್ರಭಾವ ಬೀರುತ್ತದೆ. ನೀರು ಭೂಗರ್ಭದೊಳಗೆ ಪ್ರವೇಶಿಸಿದರೆ, ನೀರು ಹರಿಯುವ ಪ್ರಮಾಣ ಕಡಿಮೆಯಾಗಿ,ಭೂಮೇಲ್ಮೈ ಸವೆತದ ಪ್ರಮಾಣವನ್ನು ತಗ್ಗಿಸುತ್ತದೆ. ಹೆಚ್ಚು ಜೇಡಿಮಣ್ಣನ್ನು ಹೊಂದಿರುವ ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳು ಮರಳು ಅಥವಾ ಕೆಸರಿಗಿಂತ ಕಡಿಮೆ ಸವೆತಕ್ಕೆ ಗುರಿಯಾಗುತ್ತದೆ. ಆದಾಗ್ಯೂ,ಜೇಡಿಮಣ್ಣಿನ ಸವೆತದಲ್ಲಿ ವಾತಾವರಣದ ಸೋಡಿಯಂ ಪ್ರಭಾವವನ್ನು ಪರಿಗಣಿಸಬೇಕು.[೩]

ಬದಲಾವಣೆಗೆ ಹೆಚ್ಚು ಒಳಗಾಗುವ ಅಂಶ ನೆಲವನ್ನು ಮುಚ್ಚಿರುವ ಪ್ರಮಾಣ ಮತ್ತು ವಿಧ. ತೊಂದರೆಗೊಳಗಾದ ಅರಣ್ಯದಲ್ಲಿ, ಖನಿಜಯುಕ್ತ ಮಣ್ಣು ಕಸಕಡ್ಡಿಯ ಪದರ ಮತ್ತು ಜೈವಿಕ ಪದರದಿಂದ ರಕ್ಷಿಸಲ್ಪಟ್ಟಿದೆ.ಇವೆರಡು ಪದರಗಳು ನೀರಿನ ಹನಿಗಳ ಘರ್ಷಣೆಯನ್ನು ಹೀರಿಕೊಂಡು ಮಣ್ಣನ್ನು ರಕ್ಷಿಸುತ್ತವೆ. ಅರಣ್ಯದಲ್ಲಿ ಈ ಪದರಗಳು ಮತ್ತು ಅಡಿಯ ಮಣ್ಣು ರಂಧ್ರಯುಕ್ತವಾಗಿದ್ದು, ಮಳೆನೀರನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ. ವಿಶೇಷವಾಗಿ,ತೀವ್ರಸ್ವರೂಪದ ಮಳೆ ಮತ್ತು ದೊಡ್ಡ ಬಿರುಗಾಳಿಮಳೆಯ ಘಟನೆಗಳು ಅರಣ್ಯದ ಮೇಲ್ಮೈನೆಲದಲ್ಲಿ ನೀರು ಹರಿಯಲು ಕಾರಣವಾಗಬಹುದು. ಕಾಡ್ಗಿಚ್ಚು ಅಥವಾ ಮರಕಡಿಯುವ ಮೂಲಕ ಮರಗಳನ್ನು ತೆಗೆದರೆ,ನೀರು ಒಳವ್ಯಾಪಿಸುವ ಪ್ರಮಾಣ ಹೆಚ್ಚಾಗುತ್ತದೆ,ಅರಣ್ಯದ ಮೇಲ್ಮೈ ಪ್ರದೇಶ ಶಿಥಿಲವಾಗದಿರುವ ಪ್ರಮಾಣದಲ್ಲಿ ಭೂಸವೆತವು ಕಡಿಮೆಯಾಗುತ್ತದೆ. ತೀವ್ರ ಕಾಡ್ಗಿಚ್ಚನ್ನು ಅನುಸರಿಸಿ ಭಾರೀ ಮಳೆಬೀಳುವುದು ಗಮನಾರ್ಹವಾಗಿ ಭೂಸವೆತವನ್ನು ಹೆಚ್ಚಿಸುತ್ತದೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ,ಕಸಕಡ್ಡಿಯ ಪದರವನ್ನು ತೆಗೆದರೆ ಅಥವಾ ಒಟ್ಟುಮಾಡಿದರೆ,ಮಣ್ಣು ಸವೆತಕ್ಕೆ ಒಳಗಾಗುವುದು ಅತ್ಯಂತ ಹೆಚ್ಚಾಗುತ್ತದೆ.

ರಸ್ತೆಗಳು ವಿಶೇಷವಾಗಿ ಹೆಚ್ಚು ಸವೆತದ ಪ್ರಮಾಣವನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ. ನೆಲದರಕ್ಷಣೆಯನ್ನು ತೆಗೆಯುವುದರ ಜತೆಗೆ,ವಿಶೇಷವಾಗಿ ರಸ್ತೆಗೆ ಬೆಂಬಲವಾಗಿ ಕಟ್ಟೆಯನ್ನು ಕಟ್ಟಿದ್ದರೆ, ಒಳಚರಂಡಿ ನಮೂನೆಗಳನ್ನು ರಸ್ತೆಗಳು ಗಮನಾರ್ಹವಾಗಿ ಬದಲಿಸಬಹುದು. ಅತೀ ಹೆಚ್ಚು ಕಲ್ಲುಗಳಿಂದ ಕೂಡಿದ ಮತ್ತು "ಜೈಲವೈಜ್ಞಾನಿಕವಾಗಿ ಅದೃಶ್ಯವಾಗುವ" (ರಸ್ತೆಯಿಂದ ಸಾದ್ಯವಾದಷ್ಟು ಬೇಗ ನೀರನ್ನು ತೆಗೆಯುವುದು,ನೈಸರ್ಗಿಕ ಒಳಚರಂಡಿ ಮಾದರಿಯನ್ನು ಅನುಕರಿಸುವುದು)ರಸ್ತೆಗೆ ಹೆಚ್ಚು ಸವೆತ ಉಂಟಾಗದಿರುವ ಉತ್ತಮ ಅವಕಾಶವಿರುತ್ತದೆ.

ಅನೇಕ ಮಾನವ ಚಟುವಟಿಕೆಗಳು ಒಂದು ಪ್ರದೇಶದಿಂದ ಸಸ್ಯವರ್ಗವನ್ನು ತೆಗೆಯುತ್ತದೆ,ಇದರಿಂದ ಮಣ್ಣು ಸುಲಭವಾಗಿ ಸವೆತಕ್ಕೆ ಗುರಿಯಾಗುತ್ತದೆ. ಮಣ್ಣಿನ ಮೇಲೆ ಒತ್ತಡದಿಂದ, ಖನಿಜ ಮಣ್ಣಿನ ಒಡ್ಡುವಿಕೆ ಕಾರಣದಿಂದ ಮರಕಡಿಯುವಿಕೆಯು ಹೆಚ್ಚು ಸವೆತದ ಪ್ರಮಾಣಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ ರಸ್ತೆಗಳು ಮತ್ತು ಇಳಿದಾಣಗಳು. ಅರಣ್ಯದ ನೆಲವನ್ನು ಅಗೆಯುವುದು ಅಥವಾ ಅರಣ್ಯದ ನೆಲದ ಜತೆ ರಾಜಿ ಮಾಡಿಕೊಳ್ಳುವುದರಿಂದ ಸವೆತಕ್ಕೆ ಕಾರಣವಾಗುತ್ತದೆಯೇ ಹೊರತು ಅರಣ್ಯದ ಮೇಲಾವರಣವನ್ನು ತೆಗೆಯುವುದರಿಂದಲ್ಲ. ಏಕೆಂದರೆ ಮರದ ಎಲೆಗಳಿಗೆ ಬಡಿಯುವ ಮಳೆಯ ಹನಿಗಳು ಇತರೆ ಮಳೆಹನಿಗಳ ಜತೆ ಕಲೆತು ದೊಡ್ಡ ಹನಿಗಳಾಗುತ್ತವೆ. ದೊಡ್ಡ ಹನಿಗಳು ಕೆಳಗೆ ಬಿದ್ದಾಗ(ಥ್ರೂಫಾಲ್ ಎನ್ನಲಾಗುತ್ತದೆ)ಅಂತಿಮ ವೇಗವನ್ನು ಅವು ಪುನಃ ಮುಟ್ಟಬಹುದು ಹಾಗೂ ಮುಕ್ತವಾಗಿ ಬೀಳುವುದಕ್ಕಿಂತ ಹೆಚ್ಚು ಶಕ್ತಿಯಿಂದ ನೆಲಕ್ಕೆ ಘರ್ಷಿಸುತ್ತದೆ. 8 ಮೀಟರುಗಳ ಅಂತರದಲ್ಲಿ ಮಳೆಹನಿಗಳು ಅಂತಿಮ ವೇಗ ಮುಟ್ಟಬಹುದು. ಅರಣ್ಯದ ಮೇಲಾವರಣವು ಸಾಮಾನ್ಯವಾಗಿ ಇದಕ್ಕಿಂತ ಎತ್ತರವಿರುವುದರಿಂದ,ಎಲೆಯಿಂದ ಬೀಳುವ ಹನಿಗಳು ಅಂತಿಮ ವೇಗವನ್ನು ಪಡೆಯಲು ಸಾಧ್ಯವಾಗುತ್ತದೆ. ಆದಾಗ್ಯೂ,ಎಲೆಯ ಕಸಕಡ್ಡಿ ಮತ್ತು ಜೈವಿಕವಸ್ತುವಿನೊಂದಿಗೆ ಸುಸ್ಥಿರವಾದ ಅರಣ್ಯದ ನೆಲವು ಮಳೆಯ ನೀರನ್ನು ಹೀರಿಕೊಳ್ಳುತ್ತದೆ.[೪]

ಲೂಯಿಸ್ ಪ್ರಸ್ಥಭೂಮಿಯ ಅಂಚಿನ ಸವೆತದಿಂದ ಚೀನಾದ ಲಿಂಕ್ಸಿಯ ನಗರದ ರೈತ ಕ್ರಮೇಣ ತನ್ನ ಭೂಮಿ ಕಳೆದುಕೊಳ್ಳುತ್ತಿದ್ದಾನೆ.

ಅತಿಯಾದ ಪ್ರಾಣಿಗಳ ಮೇಯುವಿಕೆ ಸಹ ಸಾಕಷ್ಟು ಸಸ್ಯರಾಶಿಯನ್ನು ಕುಂಠಿತಗೊಳಿಸಿ,ಸವೆತವನ್ನು ಹೆಚ್ಚಿಸುತ್ತದೆ. ಒಂದು ಪ್ರದೇಶದ ಸಸ್ಯವರ್ಗದ ವಿಧದಲ್ಲಿ ಬದಲಾವಣೆ ಕೂಡ ಸವೆತದ ಪ್ರಮಾಣದ ಮೇಲೆ ಪರಿಣಾಮ ಉಂಟುಮಾಡುತ್ತದೆ. ವಿವಿಧ ರೀತಿಯ ಸಸ್ಯವರ್ಗದ ವಿಧಗಳು ಮಣ್ಣಿನಲ್ಲಿ ವಿವಿಧ ರೀತಿಯಲ್ಲಿ ಒಳವ್ಯಾಪಿಸುವಿಕೆ ಪ್ರಮಾಣವನ್ನು ಉಂಟುಮಾಡುತ್ತವೆ. ಅರಣ್ಯ ಪ್ರದೇಶಗಳಲ್ಲಿ ನೀರು ಹೆಚ್ಚು ಒಳವ್ಯಾಪಿಸುವಿಕೆಗೆ ಒಳಗಾಗುತ್ತದೆ. ಆದ್ದರಿಂದ ಮಳೆಯ ಪ್ರಮಾಣದಿಂದ ಭೂಸವೆತಕ್ಕೆ ಕಾರಣವಾಗುವ ಮೇಲ್ಮೈಪ್ರದೇಶದಲ್ಲಿ ಕಡಿಮೆ ನೀರು ಹರಿಯುವಿಕೆ ಉಂಟಾಗುತ್ತದೆ. ಬದಲಿಗೆ ಭೂಗರ್ಭದ ಹರಿವಿನಲ್ಲಿ ಬಹುತೇಕ ನೀರು ಸೇರಿಹೋಗಿ ಇವು ಸಾಮಾನ್ಯವಾಗಿ ಕಡಿಮೆ ಸವೆತ ಉಂಟುಮಾಡುತ್ತದೆ. ಅರಣ್ಯ ವ್ಯವಸ್ಥೆಯಲ್ಲಿ ಎಲೆಯ ಅವಶೇಷ ಮತ್ತು ಪೊದೆಗಳು ಅತೀ ವ್ಯಾಪಿಸುವಿಕೆಯ ಪ್ರಮಾಣದ ಮುಖ್ಯ ಭಾಗವಾಗಿದ್ದು,ಅದನ್ನು ತೆಗೆಯುವುದರಿಂದ ಸವೆತದ ಪ್ರಮಾಣಗಳು ಹೆಚ್ಚುತ್ತವೆ. ಎಲೆಯ ಅವಶೇಷಗಳು ಸವೆತದ ಗಮನಾರ್ಹ ಕಾರಕವಾದ, ನೆಲಕ್ಕೆ ಬೀಳುವ ಮಳೆಹನಿಗಳ ಹೊಡೆತದಿಂದ ಮಣ್ಣನ್ನು ರಕ್ಷಿಸುತ್ತದೆ. ಸಸ್ಯರಾಶಿ ಕೂಡ ಮೇಲ್ಮೈ ನೀರುಹರಿಯುವಿಕೆ ವೇಗವನ್ನು ಮಾರ್ಪಡಿಸುತ್ತದೆ. ಆದ್ದರಿಂದ ಹುಲ್ಲುಗಳು ಮತ್ತು ಪೊದೆಗಳು ಸಹ ಈ ಅಂಶದಲ್ಲಿ ಕಾರಣಕರ್ತವಾಗಿವೆ.

ವರ್ಷ ೨೦೦೬ರಲ್ಲಿ ಸವೆತದ ಮಣ್ಣಿನ ನಷ್ಟಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಉಷ್ಣವಲಯದ ಅರಣ್ಯಗಳಲ್ಲಿ ಮರಕಡಿಯುವಿಕೆ ಮತ್ತು ಸುಡುವುದು.ಸಂಪೂರ್ಣ ನೆಲದ ಮೇಲ್ಮೈಯನ್ನು ಸಸ್ಯರಾಶಿಯಿಂದ ತೆಗೆದಾಗ ನಂತರ ಎಲ್ಲ ಜೀವಿಗಳು ನಾಶವಾದಾಗ,ಮೇಲಿನ ಮಣ್ಣು ಗಾಳಿ ಮತ್ತು ನೀರಿನ ಸವೆತಕ್ಕೆ ಸುಲಭವಾಗಿ ತುತ್ತಾಗುತ್ತದೆ. ಭೂಮಿಯ ಅನೇಕ ಪ್ರದೇಶಗಳಲ್ಲಿ,ದೇಶದ ಇಡೀ ವಲಯಗಳನ್ನು ಅನುತ್ಪಾದಕವಾಗಿಸಲಾಗಿದೆ. ಉದಾಹರಣೆಗೆ, ಮಡಗಾಸ್ಕರ್ ಎತ್ತರದ ಮಧ್ಯ ಪ್ರಸ್ಥಭೂಮಿಯು,ಆ ದೇಶದ ಭೂಪ್ರದೇಶದ ಶೇಕಡ 10 ಭಾಗ ಒಳಗೊಂಡಿದ್ದು,ಅಕ್ಷರಶಃ ಇಡೀ ಭೂಪ್ರದೇಶವು ಸಸ್ಯರಾಶಿಗೆ ಬಂಜರಾಗಿದ್ದು, ಆಳವಾದ ಸವೆಯುವ 50 ಮೀಟರ್ ಆಳ ಮತ್ತು ಒಂದು ಕಿಲೋಮೀಟರ್ ಅಗಲದ ಹೊಂಡಗಳೊಂದಿಗಿವೆ. ಸ್ಥಳಾಂತರಿಸುವ ಕೃಷಿಯು ಒಂದು ಕೃಷಿ ವ್ಯವಸ್ಥೆಯಾಗಿದ್ದು, ವಿಶ್ವದ ಕೆಲವು ಪ್ರದೇಶಗಳಲ್ಲಿ ಕೆಲವುಬಾರಿ ಮರಕಡಿಯುವ ಮತ್ತು ಸುಡುವ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತವೆ. ಇದು ಮಣ್ಣಿನ ಗುಣಮಟ್ಟವನ್ನು ಕುಂಠಿತಗೊಳಿಸಿ,ಮಣ್ಣಿನ ಕಡಿಮೆ ಫಲವತ್ತತೆಗೆ ಕಾರಣವಾಗುತ್ತದೆ.

ಪರಿಣಾಮಗಳು

ಅಂದಾಜು ವಿಶ್ವದ ಕೃಷಿ ಭೂಮಿಯ 40% ಭಾಗದಲ್ಲಿ ಗಂಭೀರವಾದ ಮಣ್ಣಿನ ಗುಣಮಟ್ಟ ಕುಂಠಿತಗೊಂಡಿದೆ.[೫] UN ಪ್ರಕಾರ,ಉಕ್ರೇನ್ ಗಾತ್ರದ ಫಲವತ್ತತೆಯ ಪ್ರದೇಶವು ಬರ,ಅರಣ್ಯನಾಶ ಮತ್ತು ಹವಾಮಾನ ಪರಿವರ್ತನೆಯಿಂದ ಪ್ರತಿವರ್ಷ ಕಳೆದುಹೋಗುತ್ತಿದೆ.[೬]

ಆಫ್ರಿಕಾದಲ್ಲಿ ಇದೇ ರೀತಿಯ ಮಣ್ಣಿನ ಗುಣಮಟ್ಟ ಕುಂಠಿತವಾದರೆ,ಆಫ್ರಿಕಾದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಘಾನಾ ಮೂಲದ ಸಂಸ್ಥೆ UNU ಪ್ರಕಾರ, ಈ ಖಂಡವು 2025ರಲ್ಲಿ ಕೇವಲ ಜನಸಂಖ್ಯೆಯ 25% ಜನರಿಗೆ ಆಹಾರ ಒದಗಿಸಲು ಸಾಧ್ಯವಾಗಬಹುದು.[೭]
ದಕ್ಷಿಣ ಕ್ಯಾರೊಲಿನದ ಯವಹಾನದಲ್ಲಿ ಎಲ್ಲ ಭೂಪ್ರದೇಶಗಳಲ್ಲಿ ಸಂಚರಿಸುವ ನಾಲ್ಕು ಚಕ್ರಗಳ ವಾಹನಗಳಿಂದ ದಡದ ಸವೆತ ಆರಂಭವಾಯಿತು.

ಪ್ರಾಣಿಗಳು ತಮ್ಮ ಚಟುವಟಿಕೆಗಳಿಗೆ ನೆಲವನ್ನು ಮಿತಿಮೀರಿ ಬಳಸಿದರೆ(ಮಾನವರು ಸೇರಿ)ಯಾಂತ್ರಿಕ ಸವೆತ ಉಂಟಾಗಬಹುದು ಮತ್ತು ಸಸ್ಯರಾಶಿ ನಾಶದಿಂದ ಕೂಡ ಭೂಸವೆತ ಉಂಟಾಗುತ್ತದೆ. ಪ್ರಾಣಿಪ್ರಪಂಚಕ್ಕೆ ಸಂಬಂಧಿಸಿದಂತೆ,ಸರೆಂಗೆಟಿ ಬಯಲುಪ್ರದೇಶದಲ್ಲಿ,ಅಲೆದಾಡುವ ಬ್ಲೂ ವೈಲ್ಡ್‌ಬೀಸ್ಟ್‌ನ ದೊಡ್ಡ ಪ್ರಮಾಣದ ಹಿಂಡಿನಿಂದ ಈ ಫಲಿತಾಂಶ ಉಂಟಾಗಬಹುದು. ಈ ಪ್ರಕರಣದಲ್ಲಿ ಕೂಡ,ಪರಿಸರವ್ಯವಸ್ಥೆಗೆ ಬೌತಿಕ ಅನುಕೂಲಗಳೂ ಇವೆ. ಉದಾಹರಣೆಗೆ ಈ ಪ್ರದೇಶಕ್ಕೆ ಸ್ಥಳೀಯವಾದ ಹುಲ್ಲುಗಾವಲುಗಳ ರಕ್ಷಣೆ ಮುಂದುವರಿಯುತ್ತದೆ. ಒಂದು ಪ್ರಬೇಧಗಳ ಗಮನಾರ್ಹ ಅಸಮತೋಲನ ಅಥವಾ ಸಂಖ್ಯೆಯಲ್ಲಿ ಹೆಚ್ಚಳ ಉಂಟಾದಾಗ ಮಾತ್ರ ಈ ಪರಿಣಾಮವನ್ನು ಅಸಹಜ ಅಥವಾ ಸಮಸ್ಯೆ ಎಂದು ಕಾಣಬಹುದು.

ಮಾನವನಿಂದ ಭೂಮಿ ಬಳಕೆಯ ಪ್ರಕರಣದಲ್ಲಿ,ಪರಿಣಾಮಗಳನ್ನು ಅಧಿಕ ಜನಸಂಖ್ಯೆಯೊಂದಿಗೆ ಸಾಮಾನ್ಯವಾಗಿ ನಂಟು ಕಲ್ಪಿಸಲಾಗಿದೆ. ಅನೇಕ ಮಂದಿ ಪಾದಯಾತ್ರಿಗಳು ಕಾಲುದಾರಿಗಳನ್ನು ಬಳಸಿಕೊಂಡರೆ ಅಥವಾ ರಸ್ತೆಯಿಂದ ಆಚೆ ವಾಹನಗಳ ಬಳಕೆ ವಿಸ್ತರಣೆಯಾದರೆ,ಸವೆತ ಪರಿಣಾಮಗಳು ಉಂಟಾಗುತ್ತದೆ. ಇದು ಸಸ್ಯರಾಶಿಯ ನಾಶದಿಂದ ಮತ್ತು ಕಾಲ್ನಡಿಗೆ ಪ್ರಯಾಣ ಮತ್ತು ರಸ್ತೆಯಿಂದ ಆಚೆ ವಾಹನಗಳ ಟೈರುಗಳು ಪ್ರಭಾವದಿಂದ ಉಂಟಾಗುತ್ತದೆ. ಅನೇಕ ಹೊರಾಂಗಣ ಮಾನವ ಚಟುವಟಿಕೆಗಳಿಂದ ಕೂಡ ಈ ಪರಿಣಾಮಗಳು ಒಟ್ಟುಗೂಡಬಹುದು.ಇದು ಅನೇಕ ಜನರು ಸೀಮಿತ ಭೂಸಂಪನ್ಮೂಲವನ್ನು ಬಳಸುವುದರಿಂದ ಉದ್ಭವಿಸುತ್ತದೆ.

ವಿಶ್ವಾದ್ಯಂತ ಅತ್ಯಂತ ಗಂಭೀರ ಮತ್ತು ಸುದೀರ್ಘ ನೀರಿನಿಂದ ಉಂಟಾಗುವ ಸವೆತದ ಸಮಸ್ಯೆಗಳಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಮಸ್ಯೆ. ಯೆಲ್ಲೊ ನದಿಯ ಮಧ್ಯದ ಹರವು ಮತ್ತು ಯಾಂಗ್ಟ‌ಜೆ ನದಿಯ ಮೇಲಿನ ಹರವಿನಲ್ಲಿ ಈ ಸಮಸ್ಯೆ ಉದ್ಭವಿಸಿದೆ. ಯೆಲ್ಲೊ ನದಿಯಿಂದ 1.6ಶತಕೋಟಿ ಟನ್ ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳು ಪ್ರತಿವರ್ಷ ಸಾಗರಕ್ಕೆ ಸೇರುತ್ತದೆ. ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ವು ವಾಯವ್ಯ ಪ್ರದೇಶದ ಲೋಯೆಸ್ ಪ್ರಸ್ಥಭೂಮಿಯಲ್ಲಿ ಮುಖ್ಯವಾಗಿ ನೀರಿನಿಂದ ಉಂಟಾಗುವ ಸವೆತದಿಂದ ಹುಟ್ಟುತ್ತದೆ.

ಪ್ರಕ್ರಿಯೆಗಳು

ಗುರುತ್ವ

ಇಸ್ರೇಲ್‌ನ ಮಾಕ್ತೇಶ್ ರಾಮಾನ್‌ನ ಕಲ್ಲಿನ ನಾಲೆಯು ತನ್ನ ದಡಗಳಲ್ಲಿ ಗುರುತ್ವ ಕುಸಿತದ ಸವೆತಗಳನ್ನು ತೋರಿಸಿದೆ.

ಮಾಸ್ ವೇಸ್ಟಿಂಗ್ (ಇಳಿಜಾರು ಚಲನೆ) ಕಲ್ಲು ಮತ್ತು ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳ ಇಳಿಜಾರು ಚಲನೆಯಾಗಿದ್ದು, ಮುಖ್ಯವಾಗಿ ಗುರುತ್ವ ಬಲದಿಂದ ಉಂಟಾಗುತ್ತದೆ. ಸವೆತದ ಪ್ರಕ್ರಿಯೆಯಲ್ಲಿ, ಇಳಿಜಾರು ಚಲನೆಯು ಮುಖ್ಯಭಾಗವಾಗಿದ್ದು,ಇದು ಎತ್ತರದ ಪ್ರದೇಶದಿಂದ ತಗ್ಗುಪ್ರದೇಶಕ್ಕೆ ವಸ್ತುಗಳನ್ನು ಸಾಗಿಸುತ್ತದೆ.ಅಲ್ಲಿ ಇತರೆ ಸವೆತದ ಕಾರಕಗಳಾದ ತೊರೆಗಳು ಮತ್ತು ಹಿಮನದಿಗಳು ಈ ವಸ್ತುಗಳನ್ನು ಇನ್ನಷ್ಟು ತಗ್ಗುಪ್ರದೇಶಗಳಿಗೆ ಸಾಗಿಸುತ್ತದೆ. ಇಳಿಜಾರು ಚಲನೆ ಪ್ರಕ್ರಿಯೆಗಳು ಸದಾ ಎಲ್ಲ ಇಳಿಜಾರುಗಳಲ್ಲಿ ಸತತವಾಗಿ ಸಂಭವಿಸುತ್ತವೆ;ಕೆಲವು ಇಳಿಜಾರು ಚಲನೆ ಪ್ರಕ್ರಿಯೆಗಳು ತುಂಬ ನಿಧಾನವಾಗಿ ಕಾರ್ಯನಿರ್ವಹಿಸುತ್ತವೆ.ಇನ್ನುಳಿದವು ದಿಢೀರನೇ ಸಾಮಾನ್ಯವಾಗಿ ವಿನಾಶಕಾರಿ ಪರಿಣಾಮಗಳೊಂದಿಗೆ ಸಂಭವಿಸುತ್ತದೆ. ಯಾವುದೇ ಗ್ರಹಿಸಬಹುದಾದ ಕಲ್ಲು ಅಥವಾ ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ) ಇಳಿಜಾರು ಚಲನೆಯನ್ನು ಸಾಮಾನ್ಯ ಪದಗಳಲ್ಲಿ ಭೂಕುಸಿತ ಎಂದು ಉಲ್ಲೇಖಿಸಲಾಗುತ್ತದೆ. ಆದಾಗ್ಯೂ,ಭೂಕುಸಿತಗಳನ್ನು ಇನ್ನಷ್ಟು ವಿಸ್ತೃತ ಶೈಲಿಯಲ್ಲಿ ವರ್ಗೀಕರಿಸಬಹುದು. ಅವು ಚಲನೆಗೆ ಕಾರಣವಾದ ಯಾಂತ್ರಿಕವ್ಯವಸ್ಥೆಗಳನ್ನು ಮತ್ತು ಚಲನೆಯ ವೇಗವನ್ನು ಬಿಂಬಿಸುತ್ತವೆ. ಇಂತಹ ನಿಧಾನ ಸ್ವರೂಪದ ಚಟುವಟಿಕೆಯ ಮೇಲ್ಮೈಲಕ್ಷಣದ ಕುರುಹು ಸ್ಕ್ರೀ ಇಳಿಜಾರಿನಲ್ಲಿ ಕಂಡುಬರುತ್ತದೆ.

ಕುಸಿಯುವಿಕೆ ಯು ಕಡಿದಾದ ಬೆಟ್ಟಪ್ರದೇಶಗಳಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ. ಭಿನ್ನವಾದ ಫ್ರಾಕ್ಚರ್ ಜೋನ್(ಬಿರಿತದ ವಲಯಗಳು)ಉದ್ದಕ್ಕೂ ಇದು ಸಂಭವಿಸುತ್ತದೆ. ಸಾಮಾನ್ಯವಾಗಿ ಅದರಲ್ಲಿರುವ ಜೇಡಿಮಣ್ಣು ಒಂದೊಮ್ಮೆ ಬಿಡುಗಡೆಯಾದ ಕೂಡಲೇ ಬೆಟ್ಟದ ಇಳಿಜಾರಿನಲ್ಲಿ ವೇಗವಾಗಿ ಕುಸಿಯುತ್ತವೆ. ಇದು ಸಾಮಾನ್ಯವಾಗಿ ಚಮಚದ- ಆಕಾರದ ಭೂಪದರದ ಕುಸಿತವನ್ನು ತೋರಿಸಿದ್ದು, ಬಿಡುಗಡೆಯಾದ ವಸ್ತು ಬೆಟ್ಟದ ಇಳಿಜಾರಿನಲ್ಲಿ ಜಾರಲು ಆರಂಭಿಸುತ್ತದೆ. ಕೆಲವು ಸಂದರ್ಭಗಳಲ್ಲಿ,ಇಳಿಜಾರಿನ ಕೆಳಗಿರುವ ನೀರು ಅದನ್ನು ದುರ್ಬಲಗೊಳಿಸುವುದರಿಂದ ಉಂಟಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಹೆದ್ದಾರಿಗಳಲ್ಲಿ ಕಳಪೆ ತಂತ್ರಜ್ಞಾನದ ಫಲವಾಗಿದ್ದು,ಅಲ್ಲಿ ಕಾಯಂ ಸಂಭವಿಸುತ್ತವೆ.

ಸರ್ಫೇಸ್ ಕ್ರೀಪ್ ಗುರುತ್ವಬಲದಿಂದ ಮಣ್ಣು ಮತ್ತು ಕಲ್ಲಿನ ಅವಶೇಷಗಳ ನಿಧಾನ ಚಲನೆಯಾಗಿದ್ದು,ವಿಸ್ತರಿತ ಅವಲೋಕನದ ಹೊರತು ಅದು ಸಾಮಾನ್ಯವಾಗಿ ಗ್ರಹಿಸಬಹುದಾದ ಸಂಗತಿಯಲ್ಲ. ಆದಾಗ್ಯೂ, ಮಣ್ಣಿನ ಮೇಲ್ಮೈನಲ್ಲಿ ೦.5 ರಿಂದ 1.0ಮಿಮೀ ಕದಲಿದ ಮಣ್ಣಿನ ಕಣಗಳನ್ನು ಗಾಳಿಯಿಂದ ಉರುಳಿಸುವ ಕ್ರಿಯೆಯೆಂದು ಕೂಡ ಆ ಪದಕ್ಕೆ ವಿವರಣೆ ನೀಡಬಹುದು.

ನೀರು

ಬ್ರಿಟಾನಿಯ ಟ್ರೆಗಾಸ್ಟಲ್‌ನಲ್ಲಿ ಹೆಚ್ಚುಕಡಿಮೆ ಸಂಪೂರ್ಣ ಗುಂಡಗಿನ ಗ್ರಾನೈಟ್ ಕಲ್ಲು

ಸ್ಪ್ಲಾಷ್ ಎರೋಷನ್ ಸಣ್ಣ ಮಣ್ಣಿನ ಕಣಗಳು ಮಣ್ಣಿನ ಮೇಲೆ ನೀರಿನ ಹನಿಗಳು ಬೀಳುವುದರಿಂದ ಪ್ರತ್ಯೇಕಗೊಂಡು ಗಾಳಿಯಲ್ಲಿ ಚಲಿಸುವ ಕ್ರಿಯೆ.

ಶೀಟ್ ಎರೋಶನ್ ಮಳೆಹನಿಗಳ ಪ್ರಭಾವದಿಂದ ಮಣ್ಣಿನ ಕಣಗಳ ಬೇರ್ಪಡುವಿಕೆ ಮತ್ತು ನಿರ್ದಿಷ್ಟ ಕಾಲುವೆಗಳು ಅಥವಾ ತೊರೆಗಳಲ್ಲಿ ಹರಿಯುವ ಬದಲಿಗೆ ಭೂಮಾರ್ಗದಲ್ಲಿ ಹಾಳೆಗಳ ರೀತಿ ಹರಿಯುವ ನೀರಿನಿಂದ ಇಳಿಜಾರಿನಲ್ಲಿ ಪ್ರತ್ಯೇಕಗೊಳ್ಳುತ್ತವೆ. ಮಳೆನೀರಿನ ಪರಿಣಾಮದಿಂದ ಒಟ್ಟುಗೂಡಿದ ಮಣ್ಣನ್ನು ಒಡೆಯುತ್ತದೆ. ಜೇಡಿಮಣ್ಣಿನ ಕಣಗಳು,ಹೂಳು ಮತ್ತು ಮರಳು ಮಣ್ಣಿನ ರಂಧ್ರಗಳಲ್ಲಿ ತುಂಬಿಕೊಂಡು ಒಳವ್ಯಾಪಿಸುವಿಕೆಯನ್ನು ತಗ್ಗಿಸುತ್ತದೆ. ಮೇಲ್ಮೈ ರಂಧ್ರಗಳು ಮರಳು,ಹೂಳು ಅಥವಾ ಜೇಡಿಮಣ್ಣಿನಿಂದ ತುಂಬಿಕೊಂಡು, ಒಳವ್ಯಾಪಿಸುವಿಕೆ ಪ್ರಮಾಣ ಕಡಿಮೆಯಾದ ನಂತರ ಮೇಲ್ಮೈ ನೀರು ಹರಿಯಲಾರಂಭಿಸುತ್ತದೆ. ಮಳೆ ಬೀಳುವ ಪ್ರಮಾಣ ಒಂದೊಮ್ಮೆ ಒಳವ್ಯಾಪಿಸುವಿಕೆಗಿಂತ ವೇಗವಾಗಿದ್ದರೆ, ನೀರು ಹರಿಯುವಿಕೆ ಉಂಟಾಗುತ್ತದೆ. ಶೀಟ್ ಎರೋಷನ್‌ನಲ್ಲಿ ಎರಡು ಹಂತಗಳಿವೆ. ಮೊದಲಿಗೆ ಮಳೆ ಬೀಳುವುದು,ಇದರಲ್ಲಿ ಮಣ್ಣಿನ ಕಣಗಳು ಮಳೆಹನಿಯ ಪರಿಣಾಮದಿಂದ ಗಾಳಿಗೆ ನೂಕಲ್ಪಡುತ್ತವೆ. ಎರಡನೇ ಹಂತದಲ್ಲಿ ಶೀಟ್‌ಫ್ಲಡ್ಸ್ ಎಂದು ಕರೆಯಲಾಗುವ ವೇಗವಾಗಿ ಹರಿಯುವ, ನೀರಿನ ಅಗಲ ಹಾಳೆಗಳು ಸೆಡಿಮೆಂಟ್‌(ನೀರಿನಡಿ ಶೇಖರವಾಗುವ ಕಣ)ಗಳಿಂದ ತುಂಬಿ ಸಡಿಲ ಕಣಗಳನ್ನು ಇಳಿಜಾರಿನಲ್ಲಿ ಚಲಿಸುವಂತೆ ಮಾಡುತ್ತವೆ. ಶೀಟ್ ಎರೋಷನ್‌ನ ಈ ಹಂತವು ಸಾಮಾನ್ಯವಾಗಿ ಮೇಘಸ್ಫೋಟದಿಂದ ಸಂಭವಿಸುತ್ತದೆ.ಶೀಟ್‌ಫ್ಲಡ್‌ಗಳು ಸಾಮಾನ್ಯವಾಗಿ ಕಡಿಮೆ ದೂರಗಳನ್ನು ಸಾಗುತ್ತದೆ ಮತ್ತು ಕೇವಲ ಅಲ್ಪಾವಧಿಗೆ ಉಳಿಯುತ್ತದೆ.

ರಿಲ್ ಎರೋಷನ್ ಸಣ್ಣ,ಅಲ್ಪಾವಧಿಯ,ಕೇಂದ್ರೀಕೃತ ಹರಿಯುವ ಮಾರ್ಗಗಳ ಬೆಳವಣಿಗೆಯನ್ನು ಉಲ್ಲೇಖಿಸುತ್ತವೆ.ಇವು ಬೆಟ್ಟದ ಇಳಿಜಾರುಗಳಲ್ಲಿ ಸವೆತಕ್ಕೆ ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನವಸ್ತು ಕಣ)ಗಳ ಮೂಲ ಮತ್ತು ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳ ರವಾನೆ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ. ಸಾಮಾನ್ಯವಾಗಿ,ಕದಡಿದ ಒಳನಾಡಿನ ಪ್ರದೇಶಗಳಲ್ಲಿ ನೀರಿನಿಂದ ಉಂಟಾಗುವ ಸವೆತ ಅತೀಹೆಚ್ಚಾಗಿರುವ ಕಡೆ ಸಣ್ಣ ರಿಲ್‌ಗಳು(ಝರಿಗಳು) ಸಕ್ರಿಯವಾಗಿರುತ್ತವೆ. ಝರಿಗಳಲ್ಲಿ ಹರಿಯುವ ನೀರಿನ ಆಳವು ಸಾಮಾನ್ಯವಾಗಿ ಕೆಲವೇ ಸೆಂಟಿಮೀಟರುಗಳು ಅಥವಾ ಅದಕ್ಕಿಂತ ಕಡಿಮೆಯಾಗಿರುತ್ತದೆ ಮತ್ತು ಇಳಿಜಾರು ತೀವ್ರ ಕಡಿದಾಗಿರುತ್ತದೆ. ತೊರೆಗಳು ಮತ್ತು ನದಿಗಳ ಮಾರ್ಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹೈಡ್ರಾಲಿಕ್(ಜಲಚಾಲನಶಾಸ್ತ್ರ) ಪರಿಸರಕ್ಕಿಂತ ಈ ಸ್ಥಿತಿಗಳು ತೀರಾ ಭಿನ್ನ ಪರಿಸ್ಥಿತಿಗಳನ್ನು ನಿರ್ಮಿಸುತ್ತದೆ. ಸವೆತಕ್ಕೆ ಕಾರಣವಾಗುವ ರಿಲ್‌ಗಳು (‌‌ಝರಿ) ಭೂವೈಜ್ಞಾನಿಕವಾಗಿ ಕಾಲ ಮತ್ತು ಸ್ಥಳದಲ್ಲಿ ರೂಪುಗೊಳ್ಳುತ್ತವೆ. ಮಣ್ಣು ಸವೆತಕ್ಕೀಡಾಗುತ್ತಿದ್ದಂತೆ,ರಿಲ್ ಮೇಲ್ಮೈ ಬದಲಾವಣೆಗೊಂಡು ಹರಿಯುವ ನೀರಿನ ಜಲಚಾಲನಶಾಸ್ತ್ರವನ್ನು ಬದಲಿಸುತ್ತದೆ. ಸವೆತದ ಪ್ರಕ್ರಿಯೆಗೆ ಜಲಚಾಲನಶಾಸ್ತ್ರವು ಚಲನಶೀಲ ವ್ಯವಸ್ಥೆಯಾಗಿದ್ದು,ಜಲಚಲನಶಾಸ್ತ್ರದ ನಮೂನೆಗಳಲ್ಲಿ ಬದಲಾವಣೆಯಾದರೆ, ರಿಲ್‌ನಲ್ಲಿ ಸವೆತದ ನಮೂನೆಗಳು ಸತತವಾಗಿ ಬದಲಾಗುತ್ತವೆ. ಆದ್ದರಿಂದ ರಿಲ್ ವಿಕಾಸದ ಪ್ರಕ್ರಿಯೆಯು ಹರಿವಿನ ಬೇರ್ಪಡುವಿಕೆ, ಜಲಚಾಲನಶಾಸ್ತ್ರ ಮತ್ತು ತಳಮಟ್ಟದ ಸ್ವರೂಪದ ನಡುವೆ ಹಿನ್ನುಣಿಕೆ(ಮರುಮಾಹಿತಿ)ಸುತ್ತನ್ನು ಒಳಗೊಂಡಿರುತ್ತದೆ.ಹರಿಯುವ ವೇಗ,ಆಳ,ಅಗಲ,ಹೈಡ್ರಾಲಿಕ್ ಬಿರುಸು,ಸ್ಥಳೀಯ ತಳದ ಇಳಿಜಾರು,ಘರ್ಷಣೆ ಇಳಿಜಾರು ಮತ್ತು ಬೇರ್ಪಡುವ ಪ್ರಮಾಣವು ರಿಲ್ ವಿಕಾಸ ಪ್ರಕ್ರಿಯೆಯ ಕಾಲ ಮತ್ತು ಸ್ಥಳದ ಮಾರ್ಪಡಬಲ್ಲ ಕ್ರಿಯೆಗಳು. ಈ ಪರಸ್ಪರ ಕ್ರಿಯೆಗಳಿಂದ ಸಂಯೋಜಿತವಾದ ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳ ಹೊರೆ,ಅಥವಾ ಹರಿವಿನಲ್ಲಿ ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳ ಮೊತ್ತವು ರಿಲ್‌ಗಳಲ್ಲಿ ಮಣ್ಣು ಬೇರ್ಪಡುವ ಪ್ರಮಾಣದ ಮೇಲೆ ದೊಡ್ಡ ರೀತಿಯಲ್ಲಿ ಪ್ರಭಾವ ಬೀರುತ್ತದೆ.ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳ ಹೊರೆ ಹೆಚ್ಚುತ್ತಿದ್ದಂತೆ,ಹರಿಯುವ ನೀರಿನಲ್ಲಿ ಸೆಡಿಮೆಂಟ್‌ಗಳನ್ನು ಬೇರ್ಪಡಿಸುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.

ಮಣ್ಣಿನಲ್ಲಿ ಒಳವ್ಯಾಪಿಸುವ ಪ್ರಮಾಣಗಳಿಗಿಂತ ಮಳೆಯ ಪ್ರಮಾಣ ಹೆಚ್ಚಾದಾಗ,ನೀರಿನ ಹರಿವು ಉಂಟಾಗುತ್ತದೆ. ಮೇಲ್ಮೈ ಹರಿವಿನ ಪ್ರಕ್ಷುಬ್ಧತೆಯು ಆರಂಭದ ಮಳೆಹನಿಯ ಪರಿಣಾಮಕ್ಕಿಂತ ಹೆಚ್ಚು ಸವೆತವನ್ನು ಉಂಟುಮಾಡುತ್ತದೆ.

ಗಲ್ಲಿ ಎರೋಷನ್‌ ನನ್ನು ಅಲ್ಪಕಾಲೀನ ಗಲ್ಲಿ ಸವೆತ ಎಂದೂ ಕರೆಯಲಾಗುತ್ತದೆ.ಭಾರಿ ಮಳೆಗಳ ನಂತರ ಅಥವಾ ಕರಗುವ ಹಿಮದ ಸಂದರ್ಭದಲ್ಲಿ ಅಥವಾ ತಕ್ಷಣ ನೀರು ಇಕ್ಕಟ್ಟಾದ ಕಾಲುವೆಗಳಲ್ಲಿ ಹರಿದಾಗ ಇದು ಸಂಭವಿಸುತ್ತದೆ. ಇದನ್ನು ಹಾಲೋವೇ ರಚನೆಯಲ್ಲಿ ವಿಶೇಷವಾಗಿ ಗಮನಿಸಬಹುದು.ಟಾರು ಹಾಕುವ ಮುಂಚೆ,ಹಳೆಯ ಗ್ರಾಮೀಣ ರಸ್ತೆ ಅನೇಕ ವರ್ಷಗಳ ತನಕ ಸುತ್ತಮುತ್ತಲಿನ ಜಮೀನುಗಳಿಗಿಂತ ಗಮನಾರ್ಹವಾಗಿ ಕೆಳಮಟ್ಟದಲ್ಲಿರುತ್ತದೆ.

ಗಲ್ಲಿಯು ಸಾಕಷ್ಟು ಆಳವಾಗಿದ್ದು,ಉಳುಮೆ ಚಟುವಟಿಕೆಗಳಿಂದ ಸಾಮಾನ್ಯವಾಗಿ ನಾಶವಾಗುವುದಿಲ್ಲ, ಆದರೆ ರಿಲ್ ಎರೋಷನ್‌ನಲ್ಲಿ ಸಾಮಾನ್ಯ ಕೃಷಿ ಉಳುಮೆಯಿಂದ ಸಮತಟ್ಟಾಗುತ್ತದೆ. ಇಕ್ಕಟ್ಟಾದ ಕಾಲುವೆಗಳು ಅಥವಾ ಗಲ್ಲಿಗಳು ಗಣನೀಯ ಆಳವಿದ್ದು,1ರಿಂದ 2 ಅಡಿಯಿಂದ ಹಿಡಿದು 75ರಿಂದ 100 ಅಡಿಗಳ ತನಕ ಇರುತ್ತದೆ. ಗಲ್ಲಿ ಸವೆತವನ್ನು ಪರಿಷ್ಕೃತ ಸಾರ್ವತ್ರಿಕ ಮಣ್ಣು ನಷ್ಟ ಸಮೀಕರಣದಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಕಣಿವೆ ಅಥವಾ ಸ್ಟ್ರೀಮ್ ಎರೋಷನ್ ,ರೇಖೀಯ ಲಕ್ಷಣದೊಂದಿಗೆ ಸತತವಾಗಿ ನೀರಿನ ಹರಿವಿನಿಂದ ಉಂಟಾಗುತ್ತದೆ. ಸವೆತವು ಕೆಳಮುಖವಾಗಿ, ಕಣಿವೆಯನ್ನು ಆಳವಾಗಿಸುತ್ತದೆ ಮತ್ತು ಮೇಲ್ಮುಖವಾಗಿ, ಕಣಿವೆಯನ್ನು ಬೆಟ್ಟಪ್ರದೇಶಕ್ಕೆ ವಿಸ್ತರಿಸುತ್ತದೆ. ಸ್ಟ್ರೀಮ್ ಎರೋಷನ್‌ನ ಆರಂಭಿಕ ಹಂತದಲ್ಲಿ ಸವೆತದ ಪ್ರಕ್ರಿಯೆ ಹೆಚ್ಚು ಲಂಬವಾಗಿದ್ದು, ಕಣಿವೆಗಳು ಒಂದು ಮಾದರಿಯ V ಅಡ್ಡಛೇದವಿರುತ್ತದೆ ಮತ್ತು ತೊರೆಯ ಪ್ರಮಾಣಕ್ಕೆ ಸಂಬಂಧಪಟ್ಟಂತೆ ಕಡಿದಾಗಿರುತ್ತದೆ. ಒಂದು ತಳ ಮಟ್ಟವನ್ನು ಮುಟ್ಟಿದಾಗ,ಸವೆತದ ಚಟುವಟಿಕೆಯು ಪಾರ್ಶ್ವದ ಸವೆತಕ್ಕೆ ತಿರುಗುತ್ತದೆ,ಇದು ಕಣಿವೆಯ ನೆಲವನ್ನು ಅಗಲಗೊಳಿಸುತ್ತದೆ ಮತ್ತು ಇಕ್ಕಟ್ಟಾದ ಫ್ಲಡ್‌ಪ್ಲೇನ್ ನಿರ್ಮಿಸುತ್ತದೆ.ತೊರೆಯ ಇಳಿಜಾರಿನ ಪ್ರಮಾಣವು ಹೆಚ್ಚುಕಡಿಮೆ ಸಮತಟ್ಟಾಗಿರುತ್ತದೆ ಹಾಗೂ ತೊರೆಯು ಡೊಂಕುಡೊಂಕಾಗಿ ಹರಿಯಲು ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ಗಳ ಪಾರ್ಶ್ವಹರಿವಿನ ಸಂಚಯವು ಮುಖ್ಯವಾಗುತ್ತದೆ. ತೊರೆಯ ಸವೆತದ ಎಲ್ಲ ಹಂತಗಳಲ್ಲಿ,ಪ್ರವಾಹದ ಸಂದರ್ಭಗಳಲ್ಲಿ ಬಹುತೇಕ ಸವೆತ ಉಂಟಾಗುತ್ತದೆ.ಹೆಚ್ಚು ವೇಗವಾಗಿ ಚಲಿಸುವ ನೀರು ದೊಡ್ಡ ಪ್ರಮಾಣದ ಸೆಡಿಮೆಂಟ್ ಹೊರೆಯನ್ನು ಸಾಗಿಸುತ್ತದೆ. ಇಂತಹ ಪ್ರಕ್ರಿಯೆಗಳಲ್ಲಿ,ಕೇವಲ ನೀರು ಮಾತ್ರ ಸವೆತ ಉಂಟುಮಾಡುವುದಿಲ್ಲ: ಬಂಧಿತ ಅಪಘರ್ಷಕ ಕಣಗಳಾದ ಉರುಟುಕಲ್ಲುಗಳು,ಬಂಡೆಕಲ್ಲುಗಳು ಕೂಡ ಮೇಲ್ಮೈಯಲ್ಲಿ ಚಲಿಸುವಾಗ ಸವೆತ ಉಂಟುಮಾಡುತ್ತದೆ.

ಅತ್ಯಂತ ವೇಗವಾದ ಹರಿವುಗಳಲ್ಲಿ,ವೇಗದ ಗತಿಯಲ್ಲಿ ಧಾವಿಸುವ ನೀರಿನ ಪ್ರಮಾಣಗಳಿಂದ ವೃತ್ತಾಕಾರದಲ್ಲಿ ಸುತ್ತುವ ಕೋಲ್ಕ್ ಗಳು ಅಥವಾ ವೋರ್ಟಸೈಸ್ ನಿರ್ಮಾಣವಾಗುತ್ತದೆ. ಕೋಲ್ಕ್‌ಗಳು ತೀವ್ರ ಸ್ಥಳೀಯ ಸವೆತವನ್ನು ಉಂಟುಮಾಡುತ್ತವೆ.ನೆಲದಡಿಯನ್ನು ಕೊರೆದು, ರಾಕ್ ಕಟ್ ಬೇಸಿನ್ ಎಂದು ಹೆಸರಾದ ಕುಳಿಯ ರೀತಿಯ ಬೌಗೋಳಿಕ ಲಕ್ಷಣಗಳನ್ನು ಸೃಷ್ಟಿಸುತ್ತದೆ. ಹಿಮಗಡ್ಡೆಗಳ ಸರೋವರ ಮಿಸ್ಸೌಲಾದ ಪ್ರವಾಹ ಪ್ರದೇಶಗಳ ಫಲಿತಾಂಶಗಳಲ್ಲಿ ಉದಾಹರಣೆಗಳನ್ನು ಕಾಣಬಹುದು. ಇದು ಪೂರ್ವ ವಾಷಿಂಗ್ಟನ್‌ನ ಕೊಲಂಬಿಯ ಜಲಾನಯನ ಪ್ರದೇಶದಲ್ಲಿ ಚ್ಯಾನಲ್ಡ್ ಸ್ಕಾಬ್‌ಲ್ಯಾಂಡ್ಸ್ ಸೃಷ್ಟಿಸಿದೆ.[೮]

ದಡದ ಸವೆತ ವು ತೊರೆ ಅಥವಾ ನದಿಯ ದಂಡೆಗಳ ಸವೆತ. ನೀರಿನಮೂಲದ ತಳಬಾಗದಲ್ಲಿ ಬದಲಾವಣೆಗಳಿಂದ ಇದನ್ನು ಗುರುತಿಸಲಾಗಿದ್ದು,ಅದನ್ನು ಸ್ಕೌರ್ ಎನ್ನಲಾಗುತ್ತದೆ. ದಡದಲ್ಲಿ ಲೋಹದ ಕಂಬಿಗಳನ್ನು ಇಳಿಬಿಟ್ಟು ದಂಡೆಯ ಎತ್ತರವನ್ನು ವಿವಿಧ ಕಾಲಗಳಲ್ಲಿ ಗುರುತುಮಾಡಿಕೊಳ್ಳುವ ಮೂಲಕ ಸವೆತ ಮತ್ತು ನದಿಯ ದಡಗಳ ಸ್ವರೂಪದಲ್ಲಿ ಬದಲಾವಣೆಯನ್ನು ಅಳೆಯಬಹುದು.[೯]

ಸಮುದ್ರತೀರ ರೇಖೆ

ದಕ್ಷಿಣ ಆಸ್ಟ್ರೇಲಿಯದ ವೀನಸ್ ಬೇನಲ್ಲಿ ಅಲೆಗಳ ಬಡಿತದಿಂದ ಉಂಟಾದ ಸವೆತ.
ಸೌತ್‌ವೇಲ್ಸ್‌ನ ಸದರ್ನ್‌ಡೌನ್‌ನಲ್ಲಿ ಸಮುದ್ರದ ಅಲೆಗಳಿಂದ ಕಡಿದಾದ ಬಂಡೆಗಳ ಸವೆತದ ಕಾರಣದಿಂದ ಉಂಟಾದ ವೇದಿಕೆ.

ಸಮುದ್ರತೀರ ರೇಖೆಯ ಸವೆತವು ವಾತಾವರಣಕ್ಕೆ ಒಡ್ಡಿದ ಮತ್ತು ಆಶ್ರಿತ ತೀರಗಳೆರಡರಲ್ಲೂ ಉಂಟಾಗುತ್ತದೆ.ಮುಖ್ಯವಾಗಿ ಸಮುದ್ರದ ಸೆಳೆತಗಳು ಮತ್ತು ಅಲೆಗಳಿಂದ ಉಂಟಾಗುತ್ತದೆ.ಆದರೆ ಸಮುದ್ರಮಟ್ಟದ ಬದಲಾವಣೆ ಕೂಡ ಇದರಲ್ಲಿ ಪಾತ್ರವಹಿಸಬಹುದು.

ಸಂದುಗಳಲ್ಲಿರುವ ಗಾಳಿಯು ದಿಢೀರನೆ ಸಂದುಗಳನ್ನು ಮುಚ್ಚುವ ಅಲೆಯಿಂದ ಒತ್ತಡಕ್ಕೊಳಗಾದಾಗ, ಹೈಡ್ರಾಲಿಕ್ ಆಕ್ಷನ್ (ಜಲಸಂಪೀಡಿತ) ಸಂಭವಿಸುತ್ತದೆ. ಇದರಿಂದ ಸಂದುಗಳಲ್ಲಿ ಬಿರುಕುಮೂಡುತ್ತದೆ. ಅಲೆಯ ಹೊಡೆತ ವೆಂದರೆ ಅಲೆಯು ಅತೀವ ಶಕ್ತಿಯಿಂದ ಕಡಿದಾದ ಬಂಡೆ ಅಥವಾ ಕಲ್ಲಿಗೆ ಬಡಿಯುವುದು. ಅಪಘರ್ಷಕ ಅಥವಾ ಸವೆತ ವು ಅಲೆಗಳ ಪ್ರಭಾವದಿಂದ ಕಡಿದಾದ ಬಂಡೆಗಳಿಗೆ ನೀರು ಬಡಿದಾಗ ಉಂಟಾಗುತ್ತದೆ. ಇದು ಅತ್ಯಂತ ಪರಿಣಾಮಕಾರಿ ಮತ್ತು ಶೀಘ್ರಸ್ವರೂಪದ ಸಮುದ್ರತೀರದ ಸವೆತವಾಗಿದೆ(ಇದನ್ನು ಕೊರೋಷನ್ ಜತೆ ಗೊಂದಲಕ್ಕೆ ಈಡಾಗಬಾರದು). ಸಮುದ್ರದ ನೀರಿನಲ್ಲಿ ಕಾರ್ಬೋನಿಕ್ ಆಮ್ಲ ದಿಂದ ಕಲ್ಲು ಕರಗುವುದಕ್ಕೆ ಕೊರೋಷನ್ ಎನ್ನಲಾಗುತ್ತದೆ. ಸುಣ್ಣದ ಕಲ್ಲು ಬಂಡೆಗಳು ವಿಶೇಷವಾಗಿ ಈ ರೀತಿಯ ಸವೆತಕ್ಕೆ ಗುರಿಯಾಗುತ್ತವೆ. ಉಜ್ಜಾಟದ ಸವಕಳಿ ಯಲ್ಲಿ ಅಲೆಗಳು ಒಯ್ಯುವ ಕಣಗಳು ಮತ್ತು ಸೀಲೋಡ್ ಪರಸ್ಪರ ಘರ್ಷಿಸಿದಾಗ ಮತ್ತು ಇತರೆ ಕಡಿದಾದ ಬಂಡೆಗಳಿಗೆ ಢಿಕ್ಕಿ ಹೊಡೆದಾಗ ಸವೆಯುತ್ತವೆ.ಇದರಿಂದ ಈ ವಸ್ತು ಸುಲಭವಾಗಿ ಕೊಚ್ಚಿಕೊಂಡುಹೋಗುತ್ತದೆ. ವಸ್ತುವು ನಂತರ ಉರುಟುಕಲ್ಲುಗಳಾಗಿ ಅಥವಾ ಮರಳಾಗಿ ಅಂತ್ಯಗೊಳ್ಳುತ್ತದೆ. ಸವೆತದ ಇನ್ನೊಂದು ಗಮನಾರ್ಹ ಮೂಲವೆಂದರೆ,ವಿಶೇಷವಾಗಿ ಜಲಚರಗಳಿಂದ ಕಾರ್ಬೋನೇಟ್ ಸಮುದ್ರತೀರಗಳಲ್ಲಿ,ಕೊರೆಯುವ, ಉಜ್ಜುವ,ಅರೆಯುವ ಪ್ರಕ್ರಿಯೆಯು ಜೈವಿಕಕೊರೆತ ಎಂದು ಹೆಸರಾಗಿದೆ.

ಸೆಡಿಮೆಂಟ್(ನೀರಿನಡಿ ಶೇಖರವಾಗುವ ಘನಕಣ)ವು ತೀರದಲ್ಲಿ ಸಾಮಾನ್ಯವಾಗಿ ಸೆಳೆವಿನ ದಿಕ್ಕಿನಲ್ಲಿ ಸಾಗಣೆಯಾಗುವುದು(ಸಮುದ್ರದಂಡೆಯ ದಿಕ್ಕಿನಲ್ಲಿ ಮರಳುಕಣಗಳ ಸಾಗಣೆ)ಸೆಡಿಮೆಂಟ್‌ ಸೆಳವಿನ ಮೊತ್ತವು ಒಯ್ಯುವ ಮೊತ್ತಕ್ಕಿಂತ ಕಡಿಮೆಯಾಗಿದ್ದರೆ,ಸವೆತವು ಉಂಟಾಗುತ್ತದೆ.

ಸೆಡಿಮೆಂಟ್‌ನ ಸೆಳವಿನ ಮೊತ್ತವು ಹೆಚ್ಚಾಗಿದ್ದರೆ,ಮರಳು ಅಥವಾ ನರುಜುಕಲ್ಲು ರಚನೆಯಾಗುತ್ತವೆ. ಈ ನರುಜುಕಲ್ಲು ಲಾಂಗ್‌ಶೋರ್ ಡ್ರಿಫ್ಟ್‌(ಸಮುದ್ರದಂಡೆಯ ದಿಕ್ಕಿನಲ್ಲಿ ಮರಳುಕಣ ಸಾಗಣೆ) ದಿಕ್ಕಿನಲ್ಲಿ ತೀರದಲ್ಲಿ ನಿಧಾನವಾಗಿ ಸಾಗುತ್ತವೆ ಹಾಗೂ ಪರ್ಯಾಯವಾಗಿ ಸಮುದ್ರತೀರವನ್ನು ರಕ್ಷಿಸುತ್ತಾ,ಅದರ ಒಂದು ಭಾಗವನ್ನು ಸವೆತಕ್ಕೆ ಒಡ್ಡುತ್ತದೆ. ಸಮುದ್ರತೀರದಲ್ಲಿ ತಿರುವು ಇದ್ದರೆ,ಸಾಮಾನ್ಯವಾಗಿ ಸವೆದ ವಸ್ತುಗಳು ಒಂದುಗೂಡಿ ಉದ್ದದ ಇಕ್ಕಟ್ಟಾದ ದಡ ಭೂಶಿರ ನಿರ್ಮಾಣವಾಗುತ್ತದೆ. ಆರ್ಮರ್ಡ್(ಉರುಟುಕಲ್ಲು, ಬಂಡೆಕಲ್ಲುಗಳು ಸಂಗ್ರಹ) ತೀರಗಳು ಮತ್ತು ಮುಳುಗಿರುವ ತೀರದ ಸ್ಯಾಂಡ್‌ಬ್ಯಾಂಕ್‌ಗಳು(ಮರಳದಂಡೆ)ಕೂಡ ಸವೆತದಿಂದ ಸಮುದ್ರತೀರವನ್ನು ರಕ್ಷಿಸಬಹುದು. ವರ್ಷಗಳು ಉರುಳಿದಂತೆ, ಮರಳದಂಡೆಗಳು ಕ್ರಮೇಣ ಸ್ಥಳಾಂತರವಾಗಿ,ತೀರದ ವಿವಿಧ ಭಾಗಗಳಲ್ಲಿ ಸವೆತವು ಉಂಟಾಗಬಹುದು.

ಹಿಮ

ಹಿಮದ ಸವೆತವು ಎರಡು ರೂಪಗಳಲ್ಲಿ ಒಂದು ರೂಪವನ್ನು ಪಡೆಯಬಹುದು. ಸಾಮಾನ್ಯವಾಗಿ ನೀರ್ಗಲ್ಲುಗಳ ರೀತಿಯಲ್ಲಿ ಹಿಮದ ಚಲನೆಯಿಂದ ನೀರ್ಗಲ್ಲು ಸವೆತ ಎಂಬ ಪ್ರಕ್ರಿಯೆ ಉಂಟಾಗುತ್ತದೆ. ನೀರು ಕಲ್ಲುಬಂಡೆಗಳಲ್ಲಿ ಹೆಪ್ಪುಗಟ್ಟುವ ಕ್ರಿಯೆಯಿಂದ ಸಂಭವಿಸಬಹುದು.ಈ ಪ್ರಕ್ರಿಯೆಯಲ್ಲಿ ಕಲ್ಲಿನ ರಂಧ್ರಗಳು ಮತ್ತು ಬಿರುಕುಗಳಲ್ಲಿ ಸೇರಿಕೊಂಡ ನೀರು ಹೆಪ್ಪುಗಟ್ಟಿ ಇನ್ನಷ್ಟು ಬಿರುಕಿಗೆ ಕಾರಣವಾಗಬಹುದು.

ನೀರ್ಗಲ್ಲುಗಳ ಸವೆತವು ಮುಖ್ಯವಾಗಿ ಮೂರು ಮುಖ್ಯ ಪ್ರಕ್ರಿಯೆಗಳಿಂದ ಉಂಟು ಮಾಡುತ್ತವೆ. ಘರ್ಷಣೆ/ಉಜ್ಜುವಿಕೆ ಪ್ಲಕಿಂಗ್ ಮತ್ತು ಐಸ್ ಥ್ರಸ್ಟಿಂಗ್‌ನಿಂದ ಸಂಭವಿಸುತ್ತವೆ. ಘರ್ಷಣೆ ಪ್ರಕ್ರಿಯೆಯಲ್ಲಿ,ತಳದಲ್ಲಿರುವ ಹಿಮದ ಸ್ಕ್ರೇಪ್‌ಗಳ ಅವಶೇಷಗಳು ಅಡಿಯಲ್ಲಿರುವ ಕಲ್ಲುಗಳನ್ನು ಮರಕ್ಕೆ ಸ್ಯಾಂಡ್‌ಪೇಪರ್ ಉಜ್ಜುವ ರೀತಿಯಲ್ಲಿ ನುಣುಪುಗೊಳಿಸುತ್ತವೆ ಮತ್ತು ಕೆತ್ತುತ್ತದೆ. ನೀರ್ಗಲ್ಲುಗಳು ಪ್ಲಕಿಂಗ್ ಪ್ರಕ್ರಿಯೆಯಲ್ಲಿ ತಳದಲ್ಲಿರುವ ಕಲ್ಲಿನ ಚೂರುಗಳು ಬಿರುಕುಬಿಡಲು ಕಾರಣವಾಗುತ್ತದೆ. ಐಸ್ ಥ್ರಸ್ಟಿಂಗ್‌ನಲ್ಲಿ,ನೀರ್ಗಲ್ಲುಗಳು ತಳದಲ್ಲಿ ಹೆಪ್ಪುಗಟ್ಟಿ,ನಂತರ ಅದು ಮುಂದೆ ಸಾಗಿದಾಗ ತಳದಲ್ಲಿ ಹೆಪ್ಪುಗಟ್ಟಿದ ಸೆಡಿಮೆಂಟ್‌ನ ದೊಡ್ಡ ಹಾಳೆಗಳನ್ನು ತನ್ನ ಜತೆ ಸಾಗಿಸುತ್ತದೆ. ಈ ವಿಧಾನವು ಕೆನಡಿಯನ್ ಶೀಲ್ಡ್‌ನ ತುದಿಯಲ್ಲಿ ಸಾವಿರಾರು ಲೇಕ್ ಬೇಸಿನ್‌ಗಳನ್ನು ನಿರ್ಮಾಣಮಾಡಿದೆ. ಈ ಪ್ರಕ್ರಿಯೆಗಳು ಸವೆತ ಮತ್ತು ನೀರ್ಗಲ್ಲಿನ ಕೆಳಗೆ ಜಲಜಾಲದ ಸಾಗಣೆಯ ಜತೆ ಸೇರಿಕೊಂಡುಮೊರೇನ್(ನೀರ್ಗಲ್ಲಿನ ಅವಶೇಷದ ಸಂಗ್ರಹ),ಡ್ರಮ್‌ಲಿನ್(ಹಿಮದ ಬೆಟ್ಟ),ಗ್ರೌಂಡ್ ಮೊರೇನ್(ಟಿಲ್),ಕೇಮ್ಸ್(ಹಿಮನದಿ ರಾಶಿಹಾಕಿದ ಮರಳಿನ ದಿಬ್ಬ)ಕೇಮ್ ಡೆಲ್ಟಾಸ್,ಮೂಲಾನ್(ನೀರ್ಗಲ್ಲುಗಂಬ)ಗ್ಲೇಸಿಯಲ್ ಎರಾಟಿಕ್(ನೀರ್ಗಲ್ಲುಗಳು ಒಯ್ದ ಬಂಡೆಕಲ್ಲು)ಸಾಮಾನ್ಯವಾಗಿ ಕೊನೆಯಲ್ಲಿ ಅಥವಾ ಹಿಮದ ಹಿಮ್ಮೆಟ್ಟುವಿಕೆಸಂದರ್ಭದಲ್ಲಿ ಉಂಟುಮಾಡಿವೆ.

ಶೀತಲ ಹವಾಮಾನವು ಸಣ್ಣಕಲ್ಲುಗಳಲ್ಲಿ ಸಿಕ್ಕಿಬಿದ್ದ ನೀರನ್ನು ಹೆಪ್ಪುಗಟ್ಟಿಸಿ, ಅದನ್ನು ಹಿಗ್ಗಿಸುವುದರಿಂದ ಕಲ್ಲು ಅನೇಕ ಚೂರುಗಳಾಗುತ್ತವೆ. ಇದು ಕಡಿದಾದ ಇಳಿಜಾರುಗಳಲ್ಲಿ ಗುರುತ್ವ ಸವೆತ ಉಂಟುಮಾಡುತ್ತದೆ. ಕಡಿದಾದ ಬೆಟ್ಟದ ಇಳಿಜಾರಿನಲ್ಲಿ ಶೇಖರವಾದ ಸಣ್ಣ ಕಲ್ಲುಗಳು ಈ ವಿಧಾನದಿಂದ ಒಡೆದ ಕಲ್ಲುಗಳ(ಮಣ್ಣು) ಚೂರುಗಳಿಂದ ರಚನೆಯಾಗಿದೆ. ರಸ್ತೆ ಬದಿಗಳಲ್ಲಿ ಕಡಿಬಂಡೆಗಳು ಇರುವುದು ಸಾಮಾನ್ಯ ತಾಂತ್ರಿಕ ಸಮಸ್ಯೆಯಾಗಿದೆ. ಏಕೆಂದರೆ ಬೆಳಗಿನ ಹಿಮಕರಗುವ ಕ್ರಿಯೆಯಿಂದ ಅಪಾಯಕಾರಿ ಬಂಡೆಕಲ್ಲು ಚೂರುಗಳನ್ನು ರಸ್ತೆಗೆ ಉರುಳಿಸುತ್ತದೆ.

ಕೆಲವು ಸ್ಥಳಗಳಲ್ಲಿ,ನೀರು ಹಗಲಿನಲ್ಲಿ ಕಲ್ಲುಗಳಲ್ಲಿ ಸೇರಿ ರಾತ್ರಿ ಹೆಪ್ಪುಗಟ್ಟುತ್ತದೆ. ಹಿಮವು ಹಿಗ್ಗಿ, ಕಲ್ಲಿನಲ್ಲಿ ಬಿರುಕನ್ನು ಉಂಟುಮಾಡುತ್ತದೆ. ಕಾಲಾಂತರದಲ್ಲಿ,ಹಿಮದ ರಚನೆ ಮತ್ತು ಕರಗುವಿಕೆಯ ಪುನರಾವರ್ತನೆಯಿಂದ,ತರುವಾಯ ಕಲ್ಲನ್ನು ಒಡೆದು ಉರುಳಿಸುತ್ತದೆ.

ಗಾಳಿ

ಗಾಳಿಯ ಸವೆತದಿಂದ ಕೆತ್ತಿದ ಬೊಲಿವಿಯದ ಆಲ್ಟಿಪ್ಲಾನೊದಲ್ಲಿ ಕಲ್ಲಿನ ರಚನೆ

ಶುಷ್ಕ ಹವಾಮಾನಗಳಲ್ಲಿ,ಸವೆತದ ಪ್ರಮುಖ ಮೂಲ ಗಾಳಿ.[೧೦] ಸಾಮಾನ್ಯವಾಗಿ ಗಾಳಿಯ ಬೀಸುವಿಕೆಯು ಧೂಳು ಮುಂತಾದ ಸಣ್ಣ ಕಣಗಳನ್ನು ಸಾವಿರಾರು ಕಿಲೋಮೀಟರು ವಿಸ್ತಾರದಲ್ಲಿ ಮೂಲ ಸ್ಥಳದಿಂದ ಗಾಳಿ ಬರುವ ದಿಕ್ಕಿನಲ್ಲಿ ಚಲಿಸುವಂತೆ ಮಾಡುತ್ತದೆ.ಇದನ್ನು ಡಿಫ್ಲೇಷನ್(ವಾಯುಹರಣ)ಎನ್ನಲಾಗುತ್ತದೆ.[೧೧] ಗಾಳಿಯಿಂದ ಕಣಗಳ ಚಲನೆಯ ಫಲವಾಗಿ ಸವೆತ ಉಂಟಾಗುತ್ತದೆ. ಎರಡು ಮುಖ್ಯ ಪರಿಣಾಮಗಳಿವೆ. ಮೊದಲಿಗೆ, ಗಾಳಿಯು ಸಣ್ಣ ಕಣಗಳನ್ನು ಮೇಲೆತ್ತಿ,ಇನ್ನೊಂದು ಪ್ರದೇಶಕ್ಕೆ ಸಾಗಿಸುತ್ತದೆ. ಇದನ್ನು ವಾಯುಹರಣ ಎನ್ನಲಾಗುತ್ತದೆ. ಎರಡನೆಯದಾಗಿ,ಈ ತೇಲಾಡುವ ಕಣಗಳು ಘನವಸ್ತುಗಳ ಮೇಲೆ ಪ್ರಭಾವ ಬೀರಿ,ಅಪಘರ್ಷಣೆ ಮೂಲಕ ಸವೆತ ಉಂಟುಮಾಡುತ್ತದೆ(ಪರಿಸರ ಬದಲಾವಣೆ) ಗಾಳಿಯಿಂದ ಸವೆತವು ಸಾಮಾನ್ಯವಾಗಿ ಸಸ್ಯವರ್ಗ ಕಡಿಮೆಇರುವ ಅಥವಾ ಇಲ್ಲದ ಪ್ರದೇಶಗಳಲ್ಲಿ ಅಥವಾ ಸಸ್ಯವರ್ಗಕ್ಕೆ ಬೆಂಬಲವಾದ ಮಳೆ ಸಾಕಷ್ಟು ಬೀಳದ ಪ್ರದೇಶಗಳಲ್ಲಿ ಉಂಟಾಗುತ್ತದೆ. ಉದಾಹರಣೆಗೆ ಕಡಲತೀರದಲ್ಲಿ ಅಥವಾ ಮರುಭೂಮಿಯಲ್ಲಿ ಮರಳದಿಬ್ಬಗಳ ರಚನೆ. ಹಳದಿಬೂದು ಮೆಕ್ಕಲು ಮಣ್ಣು ಒಂದೇ ತೆರನಾದ,ಪದರು ಪದರಾಗಿಲ್ಲದೇ,ಸರಂಧ್ರ,ಸಣ್ಣ ಚೂರಾಗುವ ಸಾಮರ್ಥ್ಯ,ಸ್ವಲ್ಪ ಹೊಂದಿಕೆ ಇರುವ,ಸಾಮಾನ್ಯವಾಗಿ ಸುಣ್ಣಯುಕ್ತವಾಗಿ,ಚೆನ್ನಾಗಿ ಪುಡಿಯಾದ,ಹೂಳಿನಿಂದ ಕೂಡಿದ ಹಳದಿಬೂದು ಗಾಳಿಗೆ ಹಾರುವ ಮಣ್ಣಿನ ಕಣ.[೧೨] ಇದು ಸಾಮಾನ್ಯವಾಗಿ ವ್ಯಾಪಕ ನಿಕ್ಷೇಪವಾಗಿ ಸೇರಿ,ಸಾವಿರಾರು ಚದರ ಕಿಲೋಮೀಟರ್‌ಗಳು ಹತ್ತಾರು ಮೀಟರ್ ದಪ್ಪವಾಗಿ ವ್ಯಾಪಿಸುತ್ತದೆ. ಮೆಕ್ಕಲು ಮಣ್ಣು ಸಾಮಾನ್ಯವಾಗಿ ಕಡಿದಾದ ಅಥವಾ ಲಂಬಾಕೃತಿಯ ರೂಪದಲ್ಲಿ ಸಂಗ್ರಹವಾಗುತ್ತದೆ.[೧೩] ಇದು ಅತ್ಯಂತ ಸಮೃದ್ಧ ಮಣ್ಣಾಗಿ ಅಭಿವೃದ್ಧಿಯಾಗುತ್ತದೆ. ಸೂಕ್ತ ಹವಾಮಾನ ಪರಿಸ್ಥಿತಿಗಳಲ್ಲಿ,ಮೆಕ್ಕಲುಮಣ್ಣಿನ ಪ್ರದೇಶಗಳು ವಿಶ್ವದಲ್ಲಿ ಹೆಚ್ಚು ಕೃಷಿಉತ್ಪಾದಕ ಪ್ರದೇಶಗಳಲ್ಲಿ ಸೇರಿವೆ.[೧೪] ಮೆಕ್ಕಲುಮಣ್ಣಿನ ನಿಕ್ಷೇಪಗಳು ಸ್ವಭಾವತಃ ಬೌಗೋಳಿಕ ಅಸ್ಥಿರತೆ ಹೊಂದಿದ್ದು,ಕೂಡಲೇ ಸವೆತಕ್ಕೆ ಗುರಿಯಾಗುತ್ತವೆ. ಆದ್ದರಿಂದ ಮೆಕ್ಕಲು ಗಾಳಿಯ ಸವೆತಕ್ಕೆ ಗುರಿಯಾಗುವುದನ್ನು ತಗ್ಗಿಸಲು ವಿಂಡ್‌ಬ್ರೇಕ್‌(ದೊಡ್ಡ ಮರಗಳು ಮತ್ತು ಪೊದೆಗಳು)ಗಳನ್ನು ಸಾಮಾನ್ಯವಾಗಿ ರೈತರು ಬೆಳೆಸುತ್ತಾರೆ.[೧೦]

ಉಷ್ಣದಿಂದ ಸವೆತ

ಹರಿಯುವ ನೀರಿನಿಂದ ಪರ್ಮಾಫ್ರಾಸ್ಟ್(ಶೀತಕೆಳಭೂಸ್ತರ)ವು ಕರಗುವ ಮತ್ತು ದುರ್ಬಲವಾಗುವ ಫಲವಾಗಿ ಉಷ್ಣದಿಂದ ಸವೆತವು ಉಂಟಾಗುತ್ತದೆ.[೧೫] ಇದು ನದಿಗಳು ಮತ್ತು ಸಮುದ್ರತೀರಗಳು ಎರಡೂ ಕಡೆ ಸಂಭವಿಸಬಹುದು. ಸೈಬೀರಿಯದ ಲೆನಾ ನದಿಯಲ್ಲಿ ಕಂಡುಬರುವ ಶೀಘ್ರ ನದಿ ಕಾಲುವೆ ವಲಸೆಯು ಉಷ್ಣ ಸವೆತದಿಂದ ಉಂಟಾಗಿದೆ.ಈ ದಡಗಳ ಭಾಗಗಳು ಪರ್ಮಾಫ್ರಾಸ್ಟ್‌ನಿಂದ ಬಂಧಿತವಾದ ಅಂಟದಿರುವ ವಸ್ತುಗಳಿಂದ ರಚಿತವಾಗಿದೆ.[೧೬] ದುರ್ಬಲ ದಡಗಳಲ್ಲಿ ದೊಡ್ಡ ಮಟ್ಟದ ಕುಸಿತಗಳು ಸಂಭವಿಸುವ ಮೂಲಕ ಬಹುತೇಕ ಸವೆತ ಉಂಟಾಗುತ್ತದೆ. ಉಷ್ಣ ಸವತೆವು ಆರ್ಕ್‌ಟಿಕ್ ತೀರದ ಮೇಲೆ ಕೂಡ ಪರಿಣಾಮ ಬೀರುತ್ತದೆ.ತೆರೆಯ ಬಡಿತ ಮತ್ತು ದಡದ ಹತ್ತಿರದ ಉಷ್ಣಾಂಶಗಳು ಸೇರಿ ತೀರದಲ್ಲಿರುವ ಪರ್ಮಾಫ್ರಾಸ್ಟ್ ಕಡಿದಾದ ದಂಡೆಗಳನ್ನು ಅಸ್ಥಿರಗೊಳಿಸಿ ಅವು ವಿಫಲವಾಗುವಂತೆ ಮಾಡುತ್ತವೆ. ಬ್ಯೂಫೋರ್ಟ್ ಸಮುದ್ರ ತೀರದ 100 ಕಿಮೀ ವಿಭಾಗದಲ್ಲಿ ವಾರ್ಷಿಕ ಸವೆತದ ಪ್ರಮಾಣಗಳು 1955ರಿಂದ 2002ರವರೆಗೆ ಸರಾಸರಿ ಪ್ರತಿವರ್ಷಕ್ಕೆ 5 .6 ಮೀಟರ್‌ಗಳು.[೧೭]

ಮಣ್ಣಿನ ಸವೆತ ಮತ್ತು ಹವಾಮಾನ ಬದಲಾವಣೆ

ಕಳೆದ ದಶಕಗಳಲ್ಲಿ ಗಮನಿಸಿದ ಬೆಚ್ಚಗಿನ ವಾತಾವರಣದ ಉಷ್ಣಾಂಶದಿಂದ ತೀವ್ರ ಮಳೆಯ ವಿದ್ಯಮಾನಗಳು ಸೇರಿದಂತೆ ಹೆಚ್ಚು ಚೈತನ್ಯದ ಜಲಶಾಸ್ತ್ರ ಚಕ್ರಕ್ಕೆ ಆಸ್ಪದ ಕಲ್ಪಿಸುತ್ತದೆಂದು ನಿರೀಕ್ಷಿಸಲಾಗಿದೆ.[೧೮] ಇಸವಿ 1910ರಿಂದ 1996ರವರೆಗೆ U.S.ಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆಯ ಒಟ್ಟು ಪ್ರಮಾಣವು ಹೆಚ್ಚಾಗಿದೆ ಎಂದು 1998ರಲ್ಲಿ ಕಾರ್ಲ್ ಮತ್ತು ನೈಟ್ ವರದಿ ಮಾಡಿದರು. ಅದರಲ್ಲಿ 53% ಹೆಚ್ಚಳವು ಮೇಲಿನ 10% ಮಳೆಯ ಪ್ರಮಾಣದ ವಿದ್ಯಮಾನಗಳಿಂದ ಉಂಟಾಗಿದೆ(ಅತ್ಯಂತ ತೀವ್ರ ಮಳೆಯ ಪ್ರಮಾಣ).[೧೯] 50 ಮಿಮೀಗಿಂತ ಹೆಚ್ಚಿನ ಮಳೆಯಿಂದ ಕೂಡಿದ ದಿನಗಳ ಮಳೆಯ ಶೇಕಡವಾರು ಪ್ರಮಾಣವು ಕೂಡ ಗಮನಾರ್ಹವಾಗಿ ಹೆಚ್ಚಿತು.

ಮಣ್ಣಿನ ಸವೆತ ಕುರಿತ ಅಧ್ಯಯನಗಳು, ಹೆಚ್ಚಿದ ಮಳೆಯ ಪ್ರಮಾಣಗಳು ಮತ್ತು ತೀವ್ರತೆಗಳಿಂದ ಸವೆತದ ಪ್ರಮಾಣದ ಹೆಚ್ಚಳಕ್ಕೆ ಆಸ್ಪದ ಕಲ್ಪಿಸುತ್ತದೆಂದು ಸೂಚಿಸಿತು. ಆದ್ದರಿಂದ ಮಳೆಯ ಪ್ರಮಾಣಗಳು ಮತ್ತು ಮಳೆಯ ತೀವ್ರತೆಗಳು ವಿಶ್ವದ ಅನೇಕ ಭಾಗಗಳಲ್ಲಿ ನಿರೀಕ್ಷಿಸಿದಂತೆ ಹೆಚ್ಚಳವಾದರೆ,ಸುಧಾರಿತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಸವೆತ ಕೂಡ ಹೆಚ್ಚಾಗುತ್ತದೆ. ವಿವಿಧ ಕಾರಣಗಳಿಗಾಗಿ ಹವಮಾನದ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ಮಣ್ಣಿನ ಸವೆತದ ಪ್ರಮಾಣಗಳು ಬದಲಾಗುವುದೆಂದು ನಿರೀಕ್ಷಿಸಲಾಗುತ್ತದೆ. ಮಳೆಯಿಂದ ಉಂಟಾಗುವ ಸವೆತ ಶಕ್ತಿಯಲ್ಲಿ ಬದಲಾವಣೆಯು ಬಹುತೇಕ ನೇರವಾಗಿದೆ. a) ಇತರ ಕಾರಣಗಳು ಸೇರಿವೆ:ಆರ್ದ್ರತೆ ಪರಿಸ್ಥಿತಿಗೆ ಸಂಬಂಧಿಸಿದ ಸಸ್ಯ ಜೀವರಾಶಿಗಳ ಉತ್ಪಾದನೆಯಲ್ಲಿ ಸ್ಥಳಾಂತರಗಳಿಂದ ಸಸ್ಯಗಳ ಮೇಲಾವರಣದಲ್ಲಿ ಬದಲಾವಣೆ;b)ಉಷ್ಣಾಂಶ ಮತ್ತು ಆರ್ದ್ರತೆ ಅವಲಂಬಿತ ಮಣ್ಣಿನ ಸೂಕ್ಷ್ಮಜೀವಿ ಚಟುವಟಿಕೆಗಳಿಂದ ಪ್ರೇರಿತವಾದ ಸಸ್ಯ ತ್ಯಾಜ್ಯ ಕೊಳೆಯುವಿಕೆ ಪ್ರಮಾಣಗಳು ಹಾಗೂ ಸಸ್ಯ ಜೀವರಾಶಿ ಉತ್ಪಾದನೆ ಪ್ರಮಾಣಗಳು ಎರಡೂ ಬದಲಾವಣೆಗಳಿಂದ ನೆಲದಲ್ಲಿ ಕಸಕಡ್ಡಿಗಳ ಹೊದಿಕೆಯಲ್ಲಿ ಬದಲಾವಣೆಗಳು; c)ಮಳೆಯ ಪ್ರಮಾಣದ ಪರಿಸ್ಥಿತಿಗಳು ಮತ್ತು ಆವಿಯ ವಿಸರ್ಜನೆ ಪ್ರಮಾಣಗಳಲ್ಲಿ ಸ್ಥಳಾಂತರಗಳಿಂದ ಮಣ್ಣಿನ ಆರ್ದ್ರತೆಯಲ್ಲಿ ಬದಲಾವಣೆಗಳು,ಇದು ನೀರು ಒಳವ್ಯಾಪಿಸುವಿಕೆ ಮತ್ತು ಹರಿಯುವಿಕೆ ಅನುತಾಪಗಳನ್ನು ಬದಲಿಸುತ್ತದೆ; d)ಮಣ್ಣುಗಳಲ್ಲಿ ಜೈವಿಕ ವಸ್ತುಗಳ ಸಾಂದ್ರತೆಗಳಲ್ಲಿ ಕುಂಠಿತದಿಂದ ಮಣ್ಣು ಸವೆತದ ಪ್ರಮಾಣದಲ್ಲಿ ಬದಲಾವಣೆಗಳು, ಇದು ಸವೆತಕ್ಕೆ ಹೆಚ್ಚು ಒಳಗಾಗುವ ಮಣ್ಣಿನ ರಚನೆಗೆ ಆಸ್ಪದ ಕಲ್ಪಿಸುತ್ತದೆ ಮತ್ತು ಮಣ್ಣಿನ ಮೇಲ್ಭಾಗದ ಮುಚ್ಚುವಿಕೆ ಮತ್ತು ಗಡಸಾಗುವಿಕೆ ಹೆಚ್ಚಳದಿಂದ ನೀರಿನ ಹರಿವು ಹೆಚ್ಚುತ್ತದೆ; e)ಹೆಚ್ಚಿದ ಚಳಿಗಾಲದ ಉಷ್ಣಾಂಶಗಳ ಕಾರಣದಿಂದ ಸವೆತಕ್ಕೀಡಾಗದ ಹಿಮದಿಂದ ಸವೆತಕ್ಕೀಡುಮಾಡುವ ಮಳೆಗೆ ಚಳಿಗಾಲದ ಮಳೆಯ ಪ್ರಮಾಣದ ಬದಲಾವಣೆ;f)ಹಿಂದಿನ ಸವೆಯದ ಮಣ್ಣಿನ ಸ್ಥಿತಿಯಿಂದ ಸವೆಯುವ ಮಣ್ಣಿನ ಸ್ಥಿತಿಗೆ ಪ್ರೇರಣೆ ನೀಡುವ ಪರ್ಮಾಫ್ರಾಸ್ಟ್ ಕರಗುವಿಕೆ;g)ಹೊಸ ಹವಾಮಾನ ಪರಿಸ್ಥಿತಿಗಳಿಗೆ ಅವಕಾಶ ಕಲ್ಪಿಸಲು ಭೂಮಿಯ ಬಳಕೆಯಲ್ಲಿ ಸ್ಥಳಾಂತರಗಳು.

ಭೂಮಿಯ ಬಳಕೆ ಮತ್ತಿತರ ಅಂಶಗಳನ್ನು ಪರಿಗಣಿಸದಿದ್ದರೆ,ಹವಾಮಾನ ಬದಲಾವಣೆ ಅಡಿಯಲ್ಲಿ ಒಟ್ಟು ಮಳೆಯ ಪ್ರಮಾಣದಲ್ಲಿ ತಲಾ 1% ಬದಲಾವಣೆಗೆ ಮಣ್ಣಿನ ಸವೆತದಲ್ಲಿ ಅಂದಾಜು 1.7% ಬದಲಾವಣೆಯನ್ನು ನಾವು ನಿರೀಕ್ಷಿಸಬಹುದು ಎಂದು ಪ್ರಸ್ಕಿ ಮತ್ತು ನಿಯರಿಂಗ್ ಅಧ್ಯಯನಗಳು ಸೂಚಿಸಿವೆ.[೨೦]

ಭೂಹೊರಪದರದ ಚಲನೆಯ ಪರಿಣಾಮಗಳು

ಚಿತ್ರ:River eroding volcanic ash flow Alaska Southwest, Valley of Ten Thousand Smokes.jpg
ಅಲಾಸ್ಕ ನೈರುತ್ಯದ ವ್ಯಾಲಿ ಆಫ್ ಟೆನ್ ಥೌಸಂಡ್ ಸ್ಮೋಕ್ಸ್‌ನಲ್ಲಿ ಅಗ್ನಿಪರ್ವತದ ಬೂದಿಯ ಹರಿವನ್ನು ಸವೆಸುತ್ತಿರುವ ನದಿ

ನಿರ್ದಿಷ್ಟ ಪ್ರದೇಶದಿಂದ ದೊಡ್ಡ ಪ್ರಮಾಣದ ಕಲ್ಲು ಸ್ಥಳಾಂತರಗೊಂಡು ಬೇರೆಕಡೆ ಸಂಗ್ರಹವಾಗುವುದರಿಂದ ಭೂಮಿಯ ಕೆಳಪದರ ಮತ್ತು ಮಧ್ಯದ ಭಾಗದ ಮೇಲೆ ಹೊರೆ ಹಗುರವಾಗುವ ಫಲಿತಾಂಶ ಉಂಟಾಗುತ್ತದೆ. ಇದರಿಂದ ಭೂಮಿಯ ಮೇಲ್ಪದರ ಉಬ್ಬುವಿಕೆ ಅಥವಾ ಭೂಮಿಯ ಚಿಪ್ಪಿನ ಸಮಸ್ಥಿತಿಯ ಉಬ್ಬುವಿಕೆಗೆ ಆ ಪ್ರದೇಶದಲ್ಲಿ ಕಾರಣವಾಗುತ್ತದೆ. ಆರೋಜನ್(ಭೂಮಿಯ ಹೊರಪದರದ ರಚನೆಯ ವಿರೂಪತೆ)ಮೇಲ್ಮೈಯಲ್ಲಿ ಸವೆತದ ಸ್ಥಳವಿತರಣೆಯು ಅದರ ಬೆಳವಣಿಗೆ ಮತ್ತು ಅಂತಿಮ ಒಳರಚನೆಯ ಮೇಲೆ ಪ್ರಮುಖ ಪ್ರಭಾವವನ್ನು ಉಂಟುಮಾಡಬಹುದು ಎಂದು 1990ರ ದಶಕದ ಪೂರ್ವದಿಂದ ಕೈಗೊಂಡ ಸಂಶೋಧನೆ ಸೂಚಿಸಿದೆ(ಎರೋಷನ್ ಎಂಡ್ ಟೆಕ್ಟೋನಿಕ್ಸ್ ನೋಡಿ).[೨೧]

ಬೌತಿಕ ವಿಜ್ಞಾನ

ಬೌತಿಕ ವಿಜ್ಞಾನದಲ್ಲಿ,ಸ್ಥಳೀಯ ಯಾಂತ್ರಿಕ ಹಾನಿಯಿಂದ ಹೊರಮೈಯ ಹಿನ್‌ಸರಿತವಕ್ಕೆ ಸವೆತ ಎನ್ನಬಹುದು. ಉದಾಹರಣೆಗೆ ಚಲಿಸುವ ದ್ರವದಲ್ಲಿ ಬಂಧಿತವಾದ ಉಜ್ಜುವ(ಅಪಘರ್ಷಕ)ಕಣಗಳು. ಅಪಘರ್ಷಣವಿಲ್ಲದ ದ್ರವದ ಮಿಶ್ರಣಗಳಿಂದ ಕೂಡ ಸವೆತ ಉಂಟಾಗಬಹುದು. ಪೊಳ್ಳಾಗುವಿಕೆ ಅದಕ್ಕೆ ಒಂದು ಉದಾಹರಣೆ.

ಸವೆತದ ಯಂತ್ರಶಾಸ್ತ್ರದ ಪ್ರಕಾರ,ಗಟ್ಟಿ ಕಣದ ಸವೆತದಲ್ಲಿ,ಪ್ರಭಾವ ಬೀರುವ ವಸ್ತುವಿನ ಕಾಠಿಣ್ಯವು ದೊಡ್ಡ ಅಂಶವಾಗಿದೆ. ಮೃದು ವಸ್ತುಗಳು ಸವರಿಕೊಂಡು ಹೋಗುವ ಪ್ರಭಾವಗಳಿಂದ ಸಾಮಾನ್ಯವಾಗಿ ವೇಗವಾಗಿ ಸವೆಯುತ್ತವೆ.[೨೨] ಗಟ್ಟಿಯಾದ ವಸ್ತುಗಳು ಸಾಮಾನ್ಯವಾಗಿ ಲಂಬವಾದ ಪ್ರಭಾವಗಳಿಂದ ವೇಗವಾಗಿ ಸವೆತಕ್ಕೀಡಾಗುತ್ತದೆ. ಸವೆತದ ಪ್ರತಿರೋಧಕ್ಕೆ ಕಾಠಿಣ್ಯವು ಪರಸ್ಪರ ಸಂಬಂಧಿತ ಅಂಶವಾಗಿದ್ದು,ಅತೀ ಕಾಠಿಣ್ಯವು ಸವೆತಕ್ಕೆ ಅತ್ಯುತ್ತಮ ಪ್ರತಿರೋಧವನ್ನು ಖಾತರಿ ಮಾಡುವುದಿಲ್ಲ. ಪ್ರಭಾವ ಬೀರುವ ಕಣದ ವೇಗ,ಗಾತ್ರ, ಸಾಂದ್ರತೆ, ಕಾಠಿಣ್ಯ ಮತ್ತು ಪರಿಭ್ರಮಣೆ ಕೂಡ ಸವೆತದ ಪ್ರಮಾಣದ ಮೇಲೆ ಪರಿಣಾಮ ಬೀರುವ ಅಂಶಗಳು. ಸವೆತವನ್ನು ಕುಂಠಿತಗೊಳಿಸಲು ಕೋಟಿಂಗ್(ಹೊದಿಕೆ)ಗಳನ್ನು ಅಳವಡಿಸಬಹುದು.ಆದರೆ ಸಾಮಾನ್ಯವಾಗಿ ವಸ್ತು ಸವೆತಕ್ಕೀಡಾಗುವುದನ್ನು ನಿಧಾನವಾಗಿಸುತ್ತದೆ. ಸವೆದು ಹೋದ ವಸ್ತುವಿನ ಪ್ರಮಾಣವನ್ನು ಪ್ರಭಾವ ಬೀರುವ ವಸ್ತುವಿನ ಪ್ರಮಾಣದಿಂದ ಭಾಗಿಸುವ ಮೂಲಕ ಘನ ಕಣದ ಪ್ರಭಾವದಿಂದ ಉಂಟಾದ ಸವೆತದ ದರವನ್ನು ಸಾಮಾನ್ಯವಾಗಿ ಅಳೆಯಲಾಗುತ್ತದೆ.[೨೩]

ಅಲಂಕಾರಿಕ ಬಳಕೆ

ಸವೆತದ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಗ್ರಹಿಕೆಯ ಅಥವಾ ನೈಜ ಸದೃಶಗೊಳಿಸುವಿಕೆಯ ವಿವಿಧ ಸ್ವರೂಪಗಳಿಗೆ(ಉದಾಹರಣೆಗೆ ಗಡಿರೇಖೆಗಳ ಸವೆತ),"ನೆಲಸಮಗೊಳಿಸುವಿಕೆ", ಒಳಸಂಚು ಅಥವಾ ನೈತಿಕತೆಗಳಿಂದ ಹಿಡಿದು ಸ್ಥಳೀಯ ಸಂಸ್ಕೃತಿಗಳ ಅವನತಿ ಕುರಿತ ಹೋಲಿಕೆಗೆ ಸಾಮಾನ್ಯವಾಗಿ ಬಳಸಲಾಗುತ್ತದೆ. ಸವೆತ ವನ್ನು ವಿಶಿಷ್ಠ, ಹೆಚ್ಚು ಜಟಿಲ,ಉಚ್ಚರಿಸಲು ಕಷ್ಟವಾದ ಅಥವಾ ಹೆಚ್ಚು ಸಂಸ್ಕರಿಸಲಾಗಿದೆಯೆಂದು ಭಾವಿಸಲಾದ ವಸ್ತುವನ್ನು ವಿಶಿಷ್ಠವಲ್ಲದ, ಕಡಿಮೆ ಜಟಿಲವಾದ,ಉಚ್ಚರಿಸಲು ಸುಲಭವಾದ ಅಥವಾ(ಕುಂದುಂಟಾಗುವಂತೆ)ಕಡಿಮೆ ಸಂಸ್ಕರಣೆಗೆ ಒಳಪಡುವ ಕ್ರಮೇಣ ಜೈವಿಕ ಬದಲಾವಣೆಯನ್ನು ಬಣ್ಣಿಸುವ ಇಂಗ್ಲೀಷ್ ಭಾಷೆಯ ಒಂದು ಸಾಮಾನ್ಯ ಟ್ರೋಪ್(ಅಲಂಕಾರಿಕ ಪದ)

ಪದದ ಹುಟ್ಟು

ರಾಬರ್ಟ್ ಕೋಪ್‌ಲ್ಯಾಂಡ್ 1541ರಲ್ಲಿ ಗೈ ಡೆ ಚಾಲಿಯಾಕ್ ವೈದ್ಯಕೀಯ ಪಠ್ಯ ದಿ ಕ್ವಶ್ಚನರಿ ಆಫ್ ಸೈರುರಿಜೆನ್ಸ್‌ ‌ನ ಅನುವಾದದಲ್ಲಿ "ಸವೆತ" ಪದವು ಪ್ರಥಮ ಬಾರಿಗೆ ಹುಟ್ಟಿಕೊಂಡಿದೆ. ಬಾಯಿಯಲ್ಲಿ ಹುಣ್ಣುಗಳು ಹೇಗೆ ಬೆಳವಣಿಗೆ ಹೊಂದುತ್ತವೆ ಎಂದು ವರ್ಣಿಸಲು ಕೋಪ್‌ಲ್ಯಾಂಡ್ ಸವೆತ ಪದವನ್ನು ಬಳಸಿದ. ಇಸವಿ 1774ರಲ್ಲಿ ವೈದ್ಯಕೀಯ ವಿಷಯಗಳಿಂದ ಆಚೆ 'ಸವೆತ' ಸವೆತ ಪದವನ್ನು ಬಳಸಲಾಯಿತು. ಆಲಿವರ್ ಗೋಲ್ಡ್‌ಸ್ಮಿತ್ ತಮ್ಮ ಪುಸ್ತಕ ನ್ಯಾಚುರಲ್ ಹಿಸ್ಟರಿ ಯಲ್ಲಿ ಈ ಪದವನ್ನು ಹೆಚ್ಚು ಸಮಕಾಲೀನ ಬೌಗೋಳಿಕ ಅರ್ಥದಲ್ಲಿ ಉಲ್ಲೇಖದೊಂದಿಗೆ ಅಳವಡಿಸಿಕೊಂಡರು.

"ನೀರಿನಿಂದ ಗಡಿಗಳು ಭೂಸವೆತಕ್ಕೆ ಗುರಿಯಾದವು. ."

ಇವನ್ನೂ ಗಮನಿಸಿ

  • ಬ್ಯಾಡ್‌ಲ್ಯಾಂಡ್
  • ಬಯೋಎರೋಷನ್
  • ಬಯೋರ್‌ಹೆಕ್ಸಿಸ್ಟಸಿ
  • ಬ್ರಿಜ್ ಸ್ಕೌರ್
  • ಸೆಲ್ಯುಲಾರ್ ಕನ್‌ಫೈನ್‌ಮೆಂಟ್
  • ಸರ್ಟಿಫೈಡ್ ಪ್ರೊಫೆಷನಲ್ ಇನ್ ಎರೋಷನ್ ಎಂಡ್ ಸೆಡಿಮೆಂಟ್ ಕಂಟ್ರೋಲ್ CPESC
  • ಡಿಫಾರೆಸ್ಟೇಷನ್
  • ಡಿಸರ್ಟಿಫಿಕೇಷನ್
  • ಎರೋಷನ್ ಕಂಟ್ರೋಲ್
  • ಎರೋಷನ್ ಪ್ರೆಡಿಕ್ಷನ್
  • ಫುಡ್ ಸೆಕ್ಯುರಿಟಿ
  • ಜಿಯೋಗ್ರಫಿ
  • ಗ್ರೌಂಡ್‌ವಾಟರ್ ಸ್ಯಾಪಿಂಗ್
  • ಲೆಸ್ಸಿವೇಜ್
  • ರೈಪಾರಿಯನ್ ಸ್ಟ್ರಿಪ್ಸ್
  • ಸೆಡಿಮೆಂಟ್ ಟ್ರಾನ್ಸ್‌ಪೋರ್ಟ್
  • ಸಾಫ್ಟ್ ಎಂಜಿನಿಯರಿಂಗ್
  • ಸ್ಫೆರಿಸಿಟಿ ಸ್ಕೇಲ್
  • ಸರ್ಫೇಸ್ ರನ್‌ಆಫ್
  • TERON (ಟಿಲ್ಲೇಜ್ ಎರೋಷನ್)
  • ವೆಜಿಟೇಷನ್ ಎಂಡ್ ಸ್ಲೋಪ್ ಸ್ಟೆಬಿಲಿಟಿ
  • ವೆಟಿವರ್ ಸಿಸ್ಟಮ್
  • ಓಶನ್ ಸರ್ಫೇಸ್ ವೇವ್

ಟಿಪ್ಪಣಿಗಳು

ಹೆಚ್ಚಿನ ಮಾಹಿತಿಗಾಗಿ

ಹೊರಗಿನ ಕೊಂಡಿಗಳು