ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ
ದ ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ ಎಂಬುದು ಭಾರತ ಉಪಖಂಡವನ್ನು ವೈಜ್ಞಾನಿಕ ನಿಖರತೆಯಿಂದ ಸರ್ವೇಕ್ಷಣೆ ಮಾಡುವ ಗುರಿ ಹೊಂದಿದ್ದ ಒಂದು ಯೋಜನೆಯಾಗಿತ್ತು. ಇದು ೧೮೦೨ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಶಯದಂತೆ ಬ್ರಿಟಿಷ್ ಕಾಲುದಳ ಪಡೆಯ ಅಧಿಕಾರಿ ವಿಲಿಯಮ್ ಲ್ಯಾಂಬ್ಟನ್ ಅವರಿಂದ ಪ್ರಾರಂಭವಾಯಿತು.[೧] ಅವರ ನಂತರ ಉತ್ತರಾಧಿಕಾರಿಯಾದ ಜಾರ್ಜ್ ಎವರೆಸ್ಟ್ ಮುಂದಾಳ್ತನದಲ್ಲಿ ಈ ಯೋಜನೆಯನ್ನು ಸರ್ವೇ ಆಫ್ ಇಂಡಿಯಾಗೆ ವಹಿಸಲಾಯಿತು. ಎವರೆಸ್ಟ್ ಅವರ ನಂತರ ಆಂಡ್ರ್ಯೂ ಸ್ಕಾಟ್ವಾಗ್ ಅವರು ಮುನ್ನಡೆಸಿದರು ಮತ್ತು ೧೮೬೧ರ ನಂತರ ಯೋಜನೆಯು ಜೇಮ್ಸ್ ವಾಕರ್ ಅವರ ಮೇಲುಸ್ತುವಾರಿಯಲ್ಲಿ ೧೮೭೧ರಲ್ಲಿ ಪೂರ್ಣಗೊಂಡಿತು.
ಭಾರತದಲ್ಲಿನ ಬ್ರಿಟಿಷ್ ಪ್ರಾಂತ್ಯಗಡಿಗಳನ್ನು ಗುರುತು ಮಾಡಿದ್ದು ಮತ್ತು ಎವರೆಸ್ಟ್, ಕೆ೨ ಮತ್ತು ಕಾಂಚನಗಂಗಾದಂತಹ ಹಿಮಾಲಯ ಪರ್ವತಗಳ ಎತ್ತರವನ್ನು ಅಳೆದುದು ಈ ಯೋಜನೆಯ ಹಲವು ಸಾಧನೆಗಳಲ್ಲಿ ಕೆಲವಾಗಿವೆ.
ಹಿಮಾಲಯ ಪ್ರಾಂತ್ಯದಲ್ಲಿ, ವಿಶೇಷವಾಗಿ ಟಿಬೆಟ್ನಲ್ಲಿ (ಯುರೋಪಿಯನ್ನರಿಗೆ ನಿರ್ಭಂದವಿರುವೆಡೆ) ಇದಕ್ಕಾಗಿ ತೊಡಗಿಸಿಕೊಳ್ಳಲ್ಪಟ್ಟ ಮೂಲನಿವಾಸಿ ಸರ್ವೇಯರುಗಳನ್ನು ಪಂಡಿತರು ಎಂದು ಕರೆಯಲಾಗುತ್ತಿತ್ತು. ಅವರಲ್ಲಿ ನಯನ್ ಸಿಂಗ್ ರಾವತ್ ಮತ್ತು ಕೃಷ್ಣ ಸಿಂಗ್ ರಾವತ್ ಎಂಬ ಸಹೋದರರಿದ್ದರು.[೨][೩][೪]
ಇತಿಹಾಸ
೧೬೦೦ರಿಂದ ಶುರುಮಾಡಿ ೧೯ನೇ ಶತಮಾದದ ಆದಿಯಲ್ಲಿ ಸಂಪೂರ್ಣ ಭಾರತ ಉಪಖಂಡವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವವರೆಗೆ ಈಸ್ಟ್ ಇಂಡಿಯಾ ಕಂಪನಿಯು ಇನ್ನೂ ಹಲವಾರ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತ್ತು.[೧] ಹೊಸ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ , ಆ ಪ್ರಾಂತ್ಯದ ನಕಾಶೆ ಮತ್ತು ಇತರ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ಹಲವಾರು ಅನ್ವೇಷಕರು ಮತ್ತು ನಕ್ಷೆಗಾರರನ್ನು ನೇಮಿಸಿಕೊಂಡಿತು. ಅವರಲ್ಲಿ ಬೆಂಗಾಳದಲ್ಲಿ ೧೭೬೭ ಶುರುವಾಗಿ ಜೇಮ್ಸ್ ರೆನೆಲ್ ಪ್ರಮುಖರು. ನಕಾಶೆಗಳನ್ನು ರೂಪಿಸುತ್ತಿದ್ದಾಗ ಅದರಲ್ಲಿ ನಿಖರ ಅಳತೆಯ ಸಮಸ್ಯೆ ಇರುವುದು ತೋರತೊಡಗಿತು.[೧] ೧೮೦೦ರಲ್ಲಿ ಟಿಪ್ಪು ಸುಲ್ತಾನನ ವಿರುದ್ಧ ಈಸ್ಟ್ ಇಂಡಿಯಾ ಕಂಪನಿಯ ಗೆಲುವಿನ ನಂತರ, ಕಾಲುದಳ ಪಡೆಯ ಸೈನಿಕರಾಗಿದ್ದ ವಿಲಿಯಮ್ ಲ್ಯಾಂಬ್ಟನ್ ಎಂಬುವವರು ಇಂತಹ ಸರ್ವೇಕ್ಷಣೆಯಲ್ಲಿ ಅನುಭವ ಹೊಂದಿದವರಾಗಿದ್ದು ಈ ಸರ್ವೇಕ್ಷಣೆಯನ್ನು ತ್ರಿಕೋನಮಿತಿಗಳ ಅಳತೆಯನ್ನು ಬಳಸಿಕೊಂಡು ಈ ಕೆಲಸವನ್ನು ಹೊಸದಾಗಿ ವಶಪಡಿಸಿಕೊಂಡಿದ್ದ ಮೈಸೂರು ಪ್ರಾಂತ್ಯದಿಂದಲೇ ಶುರುಮಾಡಿ ಅದನ್ನು ಸಂಪೂರ್ಣ ಉಪಖಂಡಕ್ಕೆ ವಿಸ್ತರಿಸಬಹುದೆಂದು ಪ್ರಸ್ತಾವನೆ ಮಾಡಿದರು.[೫]
ದ ಗ್ರೇಟ್ ಟ್ರಿಗ್ನೊಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ ಯೋಜನೆಯು ೧೦ ಏಪ್ರಿಲ್ ೧೮೦೨ ರಲ್ಲಿ ಮದ್ರಾಸ್ ಸಮೀಪದಲ್ಲಿ ಬೇಸ್ ಲೈನ್ ಅಳತೆಯೊಂದರ ಮೂಲಕ ಶುರುವಾಯಿತು. ಮೇಜರ್ ಲ್ಯಾಂಬ್ಟನ್ ಅವರು ಉತ್ತರದಲ್ಲಿ ಸೇಂಟ್ ಥಾಮಸ್ ಗುಡ್ಡ ಮತ್ತು ದಕ್ಷಿಣದಲ್ಲಿ ಪೆರುಂಬೌಕ್ ಬೆಟ್ಟದ ನಡುವಲ್ಲಿನ ಸಪಾಟು ಭೂಮಿಯನ್ನು ಆಯ್ಕೆಮಾದಿಕೊಂಡರು. ಆ ಬೇಸ್ ಲೈನ್ ೭.೫ ಮೈಲು (೧೨.೧ ಕಿ.ಮಿ.) ಉದ್ದದ್ದಾಗಿತ್ತು. ಲೆಫ್ಟಿನೆಂಟ್ ಕೇಟರ್ ಅವರನ್ನು ಪಶ್ಚಿಮಭಾಗದ ಎತ್ತರದ ಪ್ರದೇಶವನ್ನು ಗುರುತಿಸಲು ಕಳುಹಿಸಲಾಯಿತು. ಕರಾವಳಿ ಭಾಗದ ತೆಲ್ಲಿಚೆರ್ರಿ ಮತ್ತು ಕಣ್ಣಾನೂರುಗಳನ್ನು ಸಂಪರ್ಕಿಸುವ ಉದ್ದೇಶ ಇದರದ್ದಾಗಿತ್ತು. ಇದಕ್ಕಾಗಿ ಮೌಂಟ್ ದೆಲ್ಲಿ ಮತ್ತು ತಡಿಯಾಂಡಮೋಳ್ ಎತ್ತರದ ಗುಡ್ದಗಳನ್ನು ಆಯ್ದುಕೊಳ್ಳಲಾಯಿತು. ತೀರದಿಂದ ತೀರದವರೆಗೆ ೩೬೦ ಮೈಲಿ (೫೮೦ ಕಿ.ಮಿ) ಎಂದು ಅಳೆಯಲಾಯಿತು. ಈ ಸರ್ವೆ ಲೈನ್ ೧೮೦೬ರಲ್ಲಿ ಮುಕ್ತಾಯಗೊಂಡಿತು. ಈ ಯೋಜನೆಯು ಸುಮಾರು ಐದು ವರ್ಷಗಳ ಕಾಲ ನಡೆಯಬಹುದೆಂದು ಈಸ್ಟ್ ಇಂಡಿಯಾ ಕಂಪನಿ ಅಂದಾಜಿಸಿತ್ತು. ಆದರೆ ಇದು ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮುಗಿದ ಮೇಲೂ ನಡೆದು ಸುಮಾರು ೭೦ ವರ್ಷಗಳ ಕಾಲವನ್ನು ತೆಗೆದುಕೊಂಡಿತು. ಸರ್ವೆ ಮಾಡಬೇಕಾಗಿದ್ದ ಅಗಾಧವಾದ ಭೂಮಿಯಿದ್ದುದರಿಂದ ಸರ್ವೇಕ್ಷಣೆದಾರರು ಇಡೀ ಇಂಡಿಯಾವನ್ನು ತ್ರಿಕೋನಮಿತಿಗೊಳಪಡಿಸುವ ಬದಲಾಗಿ ಉತ್ತರದಿಂದ ದಕ್ಷಿಣಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಹರಡಿರುವಂತೆ 'gridiron' ಎಂಬ ತ್ರಿಕೋನ ಸರಪಳಿಗಳನ್ನು ರಚಿಸಿದರು. ಕೆಲವು ಸಮಯದಲ್ಲಿ ಈ ಸರ್ವೇಕ್ಷಣೆಯಲ್ಲಿ ೭೦೦ ಜನರು ಕೆಲಸ ಮಾಡುತ್ತಿದ್ದರು.
ಈ ಟ್ರಿಗ್ನೊಮೆಟ್ರಿಕಲ್ ಸರ್ವೇಯು ಟೊಪೊಗ್ರಫಿಕಲ್ ಸರ್ವೆ ಮತ್ತು ರೆವೆನ್ಯೂ (ಕಂದಾಯ) ಸರ್ವೆಗಳಿಂದ ಸ್ವತಂತ್ರವಾಗಿ ನಡೆದ ಸರ್ವೇಯಾಗಿತ್ತು. ೧೮೭೫ರಲ್ಲಿ ಈ ಸರ್ವೇಕ್ಷಣೆಯ ಬಜೆಟ್ಟನ್ನು ೨೪೦೦೦೦ ದಿಂದ ೨೦೦೦೦೦ ಪೌಂಡುಗಳಿಗೆ ಇಳಿಸಲು ತೀರ್ಮಾನಿಸಲಾಯಿತು. ಇದರ ಪರಿಣಾಮವಾಗಿ, ಜೆ. ಟಿ. ವಾಕರ್ ಎಂಬ ಸರ್ವೇಯರ್ ಜೆನೆರಲ್ ಅಡಿಯಲ್ಲಿ ಗ್ರೇಟ್ ಟ್ರಿಗ್ನೊಮೆಟ್ರಿಕಲ್ ಸರ್ವೆ, ಟೊಪೊಗ್ರಪಿಕಲ್ ಸರ್ವೆ ಹಾಗೂ ರೆವೆನ್ಯೂ ಸರ್ವೆಗಳನ್ನು 'ದ ಸರ್ವೆ ಆಫ್ ಇಂಡಿಯಾ' ಎಂಬ ಒಂದು ಯೋಜನೆಯಡಿ ಸೇರಿಸಲಾಯಿತು.[೬]
ಉಪಕರಣಗಳು ಮತ್ತು ಬಳಸಿದ ವಿಧಾನಗಳು
ತ್ರಿಕೋನಮಿತಿ ಸರ್ವೇಕ್ಷಣೆಯು ಎಚ್ಚರವಹಿಸಿ ಮಾಡಿದಂತಹ ಕೆಲವು ನಿಖರ ಅಳತೆಯ ಆಧಾರರೇಖೆಗಳ (ಬೇಸ್ ಲೈನ್ಸ್) ಮತ್ತು ಒಂದಿಷ್ಟು ಕೋನ ಶ್ರೇಣಿಗಳ ಮೇಲೆ ಆಧಾರವಾಗಿತ್ತು. ಮೂಲ ತಲರೇಖೆಯನ್ನು ಅತ್ಯಂತ ಎಚ್ಚರವಹಿಸಿ ನಿಖರವಾಗಿ ಅಳತೆ ಮಾಡಲಾಗುತ್ತಿತ್ತು. ಏಕೆಂದರೆ ಅದರ ತರುವಾಯದ ಅಳತೆಗಳ ನಿಖರತೆಗಳು ಮೂಲರೇಖೆಯ ಅಳತೆಯ ಮೇಲೆ ಅವಲಂಬಿತವಾಗಿರುತ್ತಿದ್ದವು. ಇದಕ್ಕಾಗಿ ಹಲವಾರು ರೀತಿಯ ತಿದ್ದುಪಡಿಗಳನ್ನು ಪರಿಗಣಿಸಲಾಗಿತ್ತು. ಇದರಲ್ಲಿ ತಾಪಮಾನವು ಒಂದು ಮುಖ್ಯ ಅಂಶವಾಗಿತ್ತು. ಒಂದು ವಿಶೇಷ ನಿಖರತೆಯ ಮಡಚುವಂತಹ ಸರಪಳಿಯನ್ನು ಬಳಲಾಗುತ್ತಿತ್ತು. ಅದನ್ನು ಒಂದು ಸಮತಲದ ಮೇಜಿನ ಮೇಲೆ ಇಟ್ಟು ಅದು ನೆರಳಿನಲ್ಲಿರುವಂತೆ ವ್ಯವಸ್ಥೆ ಮಾಡಲಾಗುತ್ತಿತ್ತು ಮತ್ತು ಅದು ಸ್ಥಿರವಾದ ಬಿಗಿತದಲ್ಲಿರುವಂತೆ (constant tension) ನೋಡಿಕೊಳ್ಳಲಾಗುತ್ತಿತ್ತು. ಪ್ರಾರಂಭಿಕ ಸರ್ವೇಗಳಲ್ಲಿ ವಿಲಿಯಮ್ ಕ್ಯಾರಿಯಿದ ಮಾಡಲ್ಪಟ್ಟ ದೊಡ್ಡದಾದ ಭಾರದ ಸರ್ವೇ ಉಪಕರಣ (ಥಿಯೊಡೊಲೈಟ್ಸ್), ಜೆಸ್ಸಿ ರಾಮ್ಸ್ಡೆನ್ ಅವರಿಂದ ಮಾಡಲ್ಪಟ್ಟ ಸರ್ವೆ ಟೆಲಿಸ್ಕೋಪ್ (ಜೆನಿತ್ ಸೆಕ್ಟರ್) ಮತ್ತು ೧೦೦ ಅಡಿ (೩೦ ಮೀ) ಉದ್ದದ ಸರಪಳಿಯನ್ನು ಬಳಸಲಾಯಿತು. ಆನಂತರದ ಸರ್ವೆಗಳಲ್ಲಿ ಸಣ್ಣ ಥಿಯೊಡೊಲೈಟ್ಸ್ ಬಳಕೆಯಾದವು.
ಸರ್ಕಾರಿ ಕಾರ್ಯಯಂತ್ರದ ಮೂಲಕ ನಿಖರವಾದ ಉಪಕರಣಗಳನ್ನು ಕೊಳ್ಳುವುದು ಯಾವಾಗಲೂ ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ಎವರೆಸ್ಟ್ ಅವರು ತಾವೇ ಖುದ್ದಾಗಿ ಉಪಕರಣಗಳ ನಿರ್ಮಾಣವನ್ನು ಮೇಲುಸ್ತುವಾರಿ ಮಾಡಿದರು. ಕಲ್ಕತ್ತಾದಲ್ಲಿದ್ದ ಹೆನ್ರಿ ಬರೊ ಎಂಬುವವರ ಒಂದು ಉಪಕರಣಗಳ ಕಾರ್ಖಾನೆಯಿಂದ ಉಪಕರಣಗಳನ್ನು ಮಾಡಿಸಲಾಗುತ್ತಿತ್ತು. ಬರೋ ನಂತರ ಸಯ್ಯದ್ ಮೊಹ್ಸಿನ್ ಮತ್ತು ಅವರ ಮರಣದ ನಂತರ ಉಪಕರಣಗಳನ್ನು ಯಾರ್ಕ್ ಊರಿನ ಕೂಕ್ ಎಂಬುವವರಿಂದ ಒದಗಿಸಿಕೊಳ್ಳಲಾಗುತ್ತಿತ್ತು.[೭][೮]
ತಿದ್ದುಪಡಿ ಅಂಶಗಳು
ಹೆಚ್ಚಿನ ನಿಖರತೆಯನ್ನು ಸಾಧಿಸಲು ಹಲವಾರು ರೀತಿಯ ತಿದ್ದುಪಡಿ ಅಂಶಗಳನ್ನು ಅನ್ವಯಿಸಲಾಯಿತು. ಸರಳ ತ್ರಿಕೋನಮಿತಿಯಿಂದ ಲೆಕ್ಕಾಚಾರದಿಂದ ಪಡೆದ ಎಲ್ಲಾ ಅಳತೆಗಳಿಗೆ ಅನ್ವಯಿಸಲಾಯಿತು.
- ಭೂಮಿಯ ವಕ್ರತೆ
- ಸಂಪೂರ್ಣ ಗೋಳವಲ್ಲದ ಭೂಮಿಯ ಲಕ್ಷಣ
- ಪರ್ವತಗಳಲ್ಲಿ ಲೋಲಕ ಮತ್ತು ಪ್ಲಂಬ್ ಲೈನುಗಳ ಮೇಲೆ ಆಗುವ ಗುರುತ್ವಾಕರ್ಷಣ ಪ್ರಭಾವಗಳು[೯]
- ವಕ್ರೀಭವನ
- ಸಮುದ್ರಮಟ್ಟದಿಂದ ಎತ್ತರ
ಸರ್ವೇಕ್ಷಣೆಯ ಮುಖ್ಯಸ್ಥರು
- 1818–1823 – William Lambton
- 1823–1843 – Sir George Everest
- 1843–1861 – Andrew Scott Waugh
- 1861–1883 – James Thomas Walker
- 1884–1888 – C. T. Haig
- 1888–1894 – George Strahan
- 1894–1899 – St George Corbet Gore
- 1899–1911 – Sidney Gerald Burrard
- 1912–1921 – Sir Gerald Ponsonby Lenox-Conyngham
ಉಲ್ಲೇಖಗಳು
ಹೆಚ್ಚಿನ ಓದು
- Matthew Edney. 1997. Mapping an Empire. Chicago: University of Chicago Press. ISBN 0-226-18488-9.
- John Keay. 2000. The Great Arc. London: Harper Collins. ISBN 0-00-257062-9.
- Dean, Riaz. 2019. Mapping The Great Game: Explorers, Spies & Maps in Nineteenth-century Asia. Oxford: Casemate (UK). pp. 67-123 (Part II of book). ISBN 978-1-61200-814-1.