ಸುಬ್ರಹ್ಮಣ್ಯನ್ ಚಂದ್ರಶೇಖರ್

ಗಣಿತಜ್ಞ

ಸುಬ್ರಹ್ಮಣ್ಯನ್ ಚಂದ್ರಶೇಖರ್[೧] (ಅಕ್ಟೋಬರ್ ೧೯, ೧೯೧೦ - ಆಗಸ್ಟ್ ೨೧, ೧೯೯೫) ಭಾರತೀಯ ಮೂಲದ ಅಮೇರಿಕ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ. ಗೆಳೆಯರೆಲ್ಲರು ಅವರನ್ನು ಪ್ರೀತಿಯಿಂದ 'ಚಂದ್ರ' ಎಂದೇ ಸಂಬೋಧಿಸುತ್ತಿದ್ದರು. ೧೯೮೫ ರಲ್ಲಿ 'ಡಾ. ಚಂದ್ರ' ಮತ್ತು ಅಮೆರಿಕಾದ 'ವಿಲ್ಲಿಫೌಲರ್' ಜಂಟಿಯಾಗಿ 'ನೋಬೆಲ್ ಪ್ರಶಸ್ತಿ'ಯನ್ನು ಹಂಚಿಕೊಂಡರು. ವಿಶ್ವದ ಶ್ರೇಷ್ಟ ವಿಜ್ಞಾನ ಬರಹಗಾರರಲ್ಲಿ ಒಬ್ಬರಾದ 'ಆರ್ಥರ್ ಮಿಲ್ಲರ್' ಹೇಳುವಂತೆ, ಅವರೊಬ್ಬ 'ಖಭೌತ ವಿಜ್ಞಾನಿ'-'ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿ'ಯೆಂದು.

ಸುಬ್ರಹ್ಮಣ್ಯನ್ ಚಂದ್ರಶೇಖರ್
ಸುಬ್ರಹ್ಮಣ್ಯನ್ ಚಂದ್ರಶೇಖರ್
ಜನನಅಕ್ಟೋಬರ್ ೧೯, ೧೯೧೦
ಲಾಹೋರ್, ಭಾರತ
ಮರಣಆಗಸ್ಟ್ ೨೧, ೧೯೯೫
ಚಿಕಾಗೊ, ಇಲಿನೋಯ್, ಯುಎಸ್‍ಎ
ವಾಸ ಯುಎಸ್‍ಎ
ರಾಷ್ಟ್ರೀಯತೆ ಭಾರತೀಯ
ಕಾರ್ಯಕ್ಷೇತ್ರಗಳುಭೌತವಿಜ್ಞಾನಿ
ಸಂಸ್ಥೆಗಳುಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಚಿಕಾಗೊ ವಿಶ್ವವಿದ್ಯಾಲಯ
ಅಭ್ಯಸಿಸಿದ ಸಂಸ್ಥೆಪ್ರೆಸಿಡೆನ್ಸಿ ಕಾಲೇಜು, ಚೆನ್ನೈ
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಆರ್.ಎಚ್. ಫೌಲರ್
ಡಾಕ್ಟರೆಟ್ ವಿದ್ಯಾರ್ಥಿಗಳುರುಸ್ಸೆಲ್ ಕುಲ್ಸ್ರಡ್
ನಾರ್ಮನ್ ಲೆಬೊವಿಟ್ಜ್
ಗೀಡೊ ಮುಎಂಚ್-ಪಾನಿಆಗುಅ
ಪ್ರಸಿದ್ಧಿಗೆ ಕಾರಣಚಂದ್ರಶೇಖರ್ ಮಿತಿ
ಗಮನಾರ್ಹ ಪ್ರಶಸ್ತಿಗಳು ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೧೯೮೩)

'ಚಂದ್ರಾರವರ' ಸ್ಥೂಲಪರಿಚಯ

'ಡಾ.ಚಂದ್ರಾರವರು',[೨] ನೊಬೆಲ್ ವಿಜ್ಞಾನಿ ಸರ್ ಸಿ.ವಿ.ರಾಮನ್‌ರ ಸಮೀಪ ಸಂಬಂಧಿ. ಜನನ ಅಕ್ಟೋಬರ್ ೧೯,೧೯೧೦ ಲಾಹೋರ್ನಲ್ಲಿ. ತಂದೆ ಸುಬ್ರಹ್ಮಣ್ಯಂ ಅಯ್ಯರ್ ವಾಯವ್ಯ ರೈಲ್ವೆಯಲ್ಲಿ 'ಸಹಾಯಕ ಆಡಿಟರ್ ಜನರಲ್' ಆಗಿದ್ದರು. ತಂದೆಯವರು ಚೆನ್ನೈಗೆ ವರ್ಗವಾಗಿ ಬಂದಾಗ, 'ಟ್ರಿಪ್ಲಿಕೇನ್‌'ನಲ್ಲಿ 'ಹಿಂದೂ ಹೈಸ್ಕೂಲ್' ಸೇರಿದರು. ಗಣಿತದಲ್ಲಿ ಅಪಾರ ಪ್ರತಿಭೆ, ಮತ್ತು ಅದ್ಭುತ ನೆನೆಪಿನ ಶಕ್ತಿಯನ್ನು ಹೊಂದಿದ್ದರು. ಅದಕ್ಕೆ ಪುಟವಿಟ್ಟಂಥ ವಿಜ್ಞಾನದಲ್ಲಿ ತೀವ್ರವಾದ ಆಸಕ್ತಿ, ಉತ್ಸಾಹ. ೧೯೨೫ರಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಸೇರಿದಾಗ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. ೧೯೩೦ರಲ್ಲಿ ಪದವೀಧರರಾದರು. ಇಂಗ್ಲೀಷ್ ಸಾಹಿತ್ಯದಲ್ಲಿ ಅದರಲ್ಲೂ 'ವಿಕ್ಟೋರಿಯನ್ ಯುಗದ ಶೈಲಿಯ ಸುಂದರ-ಇಂಗ್ಲೀಷ್-ಸಾಹಿತ್ಯ'ದಲ್ಲಿ ಅತ್ಯಾಸಕ್ತರು. ಆಗಿನ ಕಾಲದ ಇಂಗ್ಲೀಷ್ ಭಾಷೆಯ ಪ್ರಕಾಂಡ ಪಂಡಿತರ ಸಾಹಿತ್ಯವನ್ನು ಚೆನ್ನಾಗಿ ಅರಗಿಸಿಕೊಂಡ 'ಚಂದ್ರ', ತಮ್ಮ ವೈವಿಜ್ಞಾನಿಕ ಬರಹದಲ್ಲಿ ಸಾಹಿತ್ಯದ ಸೊಗಡನ್ನು ತುಂಬಿಡುತ್ತಿದ್ದರು. ಆಗಿನ ಕಾಲದ 'ನೋಬೆಲ್ ಪ್ರಶಸ್ತಿ ವಿಜೇತ', 'ಹ್ಯಾನ್ಸ್ ಬೇಥ್' ಹೇಳುವಂತೆ-ಚಂದ್ರಾರವರ ಬರಹವೆಂದರೆ, 'ವಿಕ್ಟೋರಿಯನ್ ಯುಗದ ಸೌಂದರ್ಯ'ವೆಲ್ಲವೂ ಅವರ ಸಾಹಿತ್ಯದಲ್ಲಿ ಮೇಳೈಸಿರುತ್ತಿತ್ತು. ವಿದ್ಯಾರ್ಥಿ ದೆಸೆಯಲ್ಲೇ 'ವೈಜ್ಞಾನಿಕ ವಿಷಯಗಳ ಮೇಲೆ ಪ್ರಬಂಧ' ಬರೆದಿದ್ದರು.[೩]

ವಿವಾಹ

ಮದ್ರಾಸ್ ನ 'ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾಗ, ತಮಗಿಂತಾ ಒಂದು ವರ್ಷ ಜೂನಿಯರ್ ಆಗಿದ್ದ, 'ರಿಸರ್ಚ್ ಫೆಲೊ ಲಲಿತ ದೊರೈಸ್ವಾಮಿ' ಯವರ ಪರಿಚಯವಾಯಿತು. ಅವರಿಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾದರು.

ಸಂಶೋಧನೆ,ಉಪನ್ಯಾಸ

೧೯೩೦ರ ಮೇನಲ್ಲಿ ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಮಂಜೂರಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾದರು. ೧೯೩೧ರ ಮೇನಲ್ಲಿ ಲಂಡನ್‌ನ ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಸಭೆಗಳಲ್ಲಿ ಭಾಗವಹಿಸಿ, ತಮ್ಮ ಪ್ರಬಂಧಗಳನ್ನು ಓದಿದರು. ೧೯೩೧ರ ಜುಲೈನಲ್ಲಿ ಜರ್ಮನಿಗೆ ತೆರಳಿ, ವರ್ಗನಿಯಮ, ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ನಕ್ಷತ್ರಗಳ ಕುರಿತು ಅಧ್ಯಯನ ಮಾಡಿದರು. ೧೯೩೨ರ ಜನವರಿಯಲ್ಲಿ 'ಮಾದರಿ ದ್ಯುತಿಗೋಳ'ಗಳ ಬಗ್ಗೆ 'ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ'ಯಲ್ಲಿ ವಿಶಿಷ್ಟ ಪ್ರಬಂಧ ಮಂಡಿಸಿ, ಎಡಿಂಗ್‌ಟನ್ ಮತ್ತು ಮಿಲ್ಸ್‌ರ ಮೆಚ್ಚುಗೆಗೆ ಪಾತ್ರರಾದರು. 'ಬೆಲ್ಜಿಯಂನ ಲೀಡ್ ವಿಶ್ವವಿದ್ಯಾನಿಲಯ'ದಲ್ಲಿ 'ಖಭೌತಶಾಸ್ತ್ರ'ದ ಬಗ್ಗೆ ನೀಡಿದ ಸರಣಿ ಉಪನ್ಯಾಸಗಳು ಮುಂದೆ 'ಪುಸ್ತಕರೂಪ'ದಲ್ಲಿ ಪ್ರಕಟವಾದವು.

ಶ್ವೇತಕುಬ್ಜದ ವಿವರಣೆ

೧೯೩೪ರಲ್ಲಿ ಶ್ವೇತ ಕುಬ್ಜಗಳು (White Dwarf) ಹಾಗೂ ಮಿತಿಯುಳ್ಳ ರಾಶಿ ಕುರಿತು ರಷ್ಯಾದ 'ಪುಲ್ಕೋವೊ ಗ್ರಹವೀಕ್ಷಣಾಲಯ'ದಲ್ಲಿ ಉಪನ್ಯಾಸಗಳನ್ನು ನೀಡಿದರು.ಶ್ವೇತ ಕುಬ್ಜಗಳ ಬಗ್ಗೆ ಅವರು ನಡೆಸಿದ ಸಂಶೋಧನೆ ೧೯೪೪ರ ನಂತರ ಅವರಿಗೆ ಮನ್ನಣೆ ತಂದುಕೊಟ್ಟಿತು. ನಕ್ಷತ್ರಗಳಲ್ಲಿರುವ ಜಲಜನಕವು ವ್ಯಯವಾಗುತ್ತಾ ಹೋದಂತೆ,ಅವುಗಳ ಸ್ಥಾನದಲ್ಲಿ ೧:೪ ರ ಅನುಪಾತದಲ್ಲಿ ಹೀಲಿಯಮ್ ರೂಪುಗೊಂಡು,ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ.ಹೀಗಾಗಿ ದ್ರವ್ಯರಾಶಿ ಸ್ಥಿರವಾಗಿ,ಸಾಂದ್ರತೆ ಹೆಚ್ಚಿ,ನಕ್ಷತ್ರದೊಳಗೆ ಒತ್ತಡವು ಅಧಿಕವಾಗುತ್ತದೆ.ಇದರ ಫಲವಾಗಿ ಪರಮಾಣು ವ್ಯವಸ್ಥೆ ಬಲಹೀನವಾಗಿ,ಎಲೆಕ್ಟ್ರಾನ್ ಹಾಗೂ ನ್ಯೂಕ್ಲಿಯಸ್ ಪ್ರತ್ಯೇಕಗೊಳ್ಳುತ್ತವೆ.ಈ ಪ್ರಕ್ರಿಯೆ ಮುಂದುವರೆದಂತೆ ಶ್ವೇತಕುಬ್ಜಗಳು ರೂಪುಗೊಳ್ಳುತ್ತವೆ.ನಕ್ಷತ್ರಗಳ ಭಾರ ಹೆಚ್ಚಿದರೂ,ಅವುಗಳೊಳಗಿನ ದ್ರವ್ಯರಾಶಿ ಒಂದು ಪರಿಮಿತಿಯಲ್ಲಿರುತ್ತವೆ.ಅಂಥ ನಕ್ಷತ್ರ ಸೂರ್ಯನ ೧.೪೪ ರಷ್ಟಕ್ಕಿಂತ ಹೆಚ್ಚಾಗಿರಲು ಸಾಧ್ಯವಿಲ್ಲವೆಂದು ಚಂದ್ರಶೇಖರ್ ಪ್ರತಿಪಾದಿಸಿದರು.ಅಲ್ಲದೆ ಯಾವುದೇ ನಕ್ಷತ್ರದ ದ್ರವ್ಯರಾಶಿ ಈ ಮಿತಿಗಿಂತ ಹೆಚ್ಚಾಗಿದ್ದರೆ,ಅದು ಸ್ಫೋಟಗೊಂಡು ಸ್ವಲ್ಪಾಂಶ ವಸ್ತುವನ್ನು ವಿಸರ್ಜಿಸಿ,ಶ್ವೇತಕುಬ್ಜವಾಗುತ್ತದೆ ಎಂದು ವಿವರಿಸಿದರು.ಅಂದರೆ ಯಾವುದೇ ಶ್ವೇತಕುಬ್ಜದ ದ್ರವ್ಯರಾಶಿ ೧.೪೪ ರ ಮಿತಿಗಿಂತ ಹೆಚ್ಚಾಗಿರುವುದಿಲ್ಲ.ಈ ಮಿತಿಯನ್ನು "ಚಂದ್ರಶೇಖರ್ ಮಿತಿ" ಎನ್ನುವರು.ಚಂದ್ರಶೇಖರ್ ಈ ಮಿತಿಯನ್ನು ಗಣಿತದ ಲೆಕ್ಕಾಚಾರಗಳಿಂದಲೇ ಕಂಡುಹಿಡಿದರು. ಈ ಮಿತಿಗಿಂತ ಹೆಚ್ಚು ಹಿಗ್ಗುವ ನಕ್ಷತ್ರ ಸಾವಿರಾರು ಅಣುಬಾಂಬ್‌ಗಳು ಏಕಕಾಲದಲ್ಲಿ ಸ್ಫೋಟಿಸುವಂತೆ ಸಿಡಿದು,'ಸೂಪರ್‌ನೋವಾ,' ಎಂಬ ಹೊಳಪಿನ ನಕ್ಷತ್ರವಾಗುತ್ತದೆ.

ಪ್ರಾಧ್ಯಾಪಕ,ಸಂಶೋಧಕ

ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್‌ನಲ್ಲಿಯ 'ಯೆರ್ಕ್ಸ್ ಬಾಹ್ಯಾಕಾಶ ನಿರೀಕ್ಷಣಾಲಯ'ದಲ್ಲಿ ಸಂಶೋಧನಾ ಸಂಯೋಜಕರಾಗಿ ಕೆಲಸ ಮಾಡಲು ಆಹ್ವಾನ ಬಂದಿತು. ಯೆರ್ಕ್ಸ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ವಕ್ರೀಭವನ ದೂರದರ್ಶಕವಿತ್ತು. ಇಲ್ಲಿ ಚಂದ್ರಶೇಖರ್‌ರವರು ಸುಮಾರು ೨೭ ವರ್ಷಗಳ ಕಾಲ ಕೆಲಸ ಮಾಡಿದರು. ಉಪಾಧ್ಯಾಯ ವೃತ್ತಿಯೊಂದಿಗೆ ಸಂಶೋಧನೆಯೂ ಜೊತೆಜೊತೆಗೆ ನಡೆಯಿತು. ೧೯೩೮-೪೪ರವರೆಗೆ ನಕ್ಷತ್ರಗಳ ಚಲನಶಾಸ್ತ್ರ,ಚಲನಘರ್ಷಣೆಯ ಬಗ್ಗೆ ಸಂಶೋಧನ ನಡೆಸಿದರು. ೧೯೪೩ರಲ್ಲಿ ಪ್ರಾಧ್ಯಾಪಕರಾದರು. ೧೯೫೨-೭೧ರವರೆಗೆ 'ಆಸ್ಟ್ರೋ ಫಿಸಿಕಲ್ ಜರ್ನಲ್‌'ನ ವ್ಯವಸ್ಥಾಪಕ ಸಂಪಾದಕರಾಗಿದ್ದರು.

ಪ್ರಶಸ್ತಿ,ಪುರಸ್ಕಾರಗಳು

೧೯೪೨ - 'ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಡಿಎಸ್‌ಸಿ ಪದವಿ'

೧೯೪೪ - 'ಇಂಗ್ಲೆಂಡ್‌ನ ರಾಯಲ್ ಸೊಸೈಟಿಗೆ ಆಯ್ಕೆ'

೧೯೫೦ -ರಲ್ಲಿ ಪ್ರಕಟವಾದ 'ರೇಡಿಯೋ ಆಕ್ಟಿವ್ ಟ್ರಾನ್ಸ್‌ಫರ್' ಪುಸ್ತಕಕ್ಕೆ, ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅತ್ಯುನ್ನತ ಪ್ರಶಸ್ತಿಯಾದ 'ಆಡಮ್ ಬಹುಮಾನ' ದೊರಕಿತು.

೧೯೫೨ - ಬ್ರೂಸ್ ಪದಕ

೧೯೫೩ - 'ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಚಿನ್ನದ ಪದಕ'

೧೯೫೭ - 'ರಂಫರ್ಡ್ ಪ್ರಶಸ್ತಿ'

೧೯೬೮ - ಭಾರತ ಸರ್ಕಾರದ, 'ಪದ್ಮವಿಭೂಷಣ ಪ್ರಶಸ್ತಿ'

೧೯೮೩ - 'ಶ್ವೇತಕುಬ್ಜಗಳನ್ನು ಕುರಿತ ಸಂಶೋಧನೆಗೆ ನೊಬೆಲ್ ಪ್ರಶಸ್ತಿ'

೧೯೪೦-೧೯೯೫ ಸಂಶೋಧನೆಗಳು

ಈ ಸಮಯದಲ್ಲಿ ಡಾ. ಚಂದ್ರ, ನಕ್ಷತ್ರಗಳ ಸಂರಚನೆಯ ಬಗ್ಗೆ ಹೊಸ ಕಾಣಿಕೆಯನ್ನು ಒದಗಿಸಿದವು.ಅದರ ಪರಿಪೂರ್ಣತೆಯ ಬದ್ಧತೆಗೆ೨೦ ಕ್ಕೂ ಮಿಕ್ಕಷ್ಟು ಗ್ರಂಥಗಳು ಹಾಗೂ ನೂರಾರು, ಸಂಶೋಧನಾ ಸಂಬಂಧೀ ಲೇಖನಗಳು ಸಾಕ್ಷಿಯಾಗಿವೆ. ಅತ್ಯಂತ ಉಚ್ಚಮಟ್ಟದ ಶಿಕ್ಷಕರಾಗಿದ್ದ ಚಂದ್ರಶೇಖರ್ ರವರ ಶಿಷ್ಯಮಂಡಳಿಯೂ ಅವರಷ್ಟೇ ಪ್ರಗತಿಯನ್ನು ಸಾಧಿಸಿದರು. ಡಾ.ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ ೫೦ ಕ್ಕೂ ಮಿಗಿಲಾಗಿ 'ಡಾಕ್ಟೊರೇಟ್ ಪದವಿ' ಗಳಿಸಿದ್ದಾರೆ. 'ಯೇರ್ಕ್ಸ್ ಸಂಶೋಧನಾಲಯ'ದಲ್ಲಿ ಚಂದ್ರರ ಶಿಷ್ಯರಾಗಿದ್ದ 'ಲೀ' ಮತ್ತು 'ಯಾಂಗ್' ಮುಂದೆ ೧೯೫೭ ರಲ್ಲಿ ಗುರುಗಳಿಗಿಂತ ಮೊದಲೇ ಕಣ-ಭೌತವಿಜ್ಞಾನದಲ್ಲಿ ನಡೆಸಿದ ಸಂಶೋಧನೆಗೆ 'ನೋಬೆಲ್ ಪ್ರಶಸ್ತಿ 'ಗಳಿಸಿದ್ದರು.

ಇತರ ಆಸಕ್ತಿಗಳು

'ಪ್ರಿನ್ಸಿಪಲ್ಸ್ ಆಫ್ ಸ್ಟೆಲಾರ್ ಡೈನಾಮಿಕ್ಸ್' ಮುಂತಾದ ಗ್ರಂಥಗಳನ್ನು ಬರೆದು ಪ್ರಕಟಿಸಿದರು.೧೯೮೦ರಲ್ಲಿ ಸ್ವಇಚ್ಛೆಯಿಂದಲೇ ಕೆಲಸದಿಂದ ನಿವೃತ್ತಿ ಪಡೆದರು.ಇಳಿವಯಸ್ಸಿನಲ್ಲೂ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದರು.ಸಾಹಿತ್ಯದಲ್ಲೂ ಆಸಕ್ತಿ ಇತ್ತು.ಅಮೆರಿಕದಲ್ಲಿದ್ದರೂ ಅವರ ಉಡುಗೆ-ತೊಡುಗೆ ದಕ್ಷಿಣಭಾರತದ ಧೋತಿ,ಮೇಲಂಗಿ ಮಾತ್ರ.ಕೇಳುತ್ತಿದ್ದುದು ಕರ್ನಾಟಕ ಸಂಗೀತ. ಅರವತ್ತೈದು ವರ್ಷಗಳ ಕಾಲ ನಿರಂತರವಾಗಿಸಂಶೋಧನೆಯಲ್ಲಿ ನಿರತರಾಗಿದ್ದ 'ಸುಬ್ರಮಣ್ಯಮ್ ಚಂದ್ರಶೇಖರ್' ೧೯೯೫, ಆಗಸ್ಟ್, ೨೧ ರ ರಾತ್ರಿ, ಮತ್ತೆ ತಿರುಗಿ ಮರಳಿಬಾರದ ನಕ್ಷತ್ರಲೋಕದೆಡೆಗೆ ತೆರಳಿ ಕಣ್ಮರೆಯಾದರು.

100ನೆ ಹುಟ್ಟುಹಬ್ಬ ಆಚರಣೆ

ಸನ್, ೨೦೧೦ ರ, ಅಕ್ಟೋಬರ್, ೧೯ ರಂದು ಭಾರತವೂ ಸೇರಿದಂತೆ, ವಿಶ್ವದಾದ್ಯಂತ, 'ಸುಬ್ರಹ್ಮಣ್ಯನ್ ಚಂದ್ರಶೇಖರ್' ರವರ 'ನೂರನೆಯ ಹುಟ್ಟುಹಬ್ಬ'ವನ್ನು ಪ್ರೀತಿಯಿಂದ ಆಚರಿಸಲಾಯಿತು. ಹಲವಾರು ಸಂದರ್ಭಗಳಲ್ಲಿ ಚಂದ್ರಾರವರೇ ತಮ್ಮ 'ವಿಸ್ಮಯದ ಹುಟ್ಟಿದ ತಾರೀಖಿನ ಸಂಗತಿ'ಯನ್ನು ಗೆಳೆಯರೊಂದಿಗೆ ಹಂಚಿಕೊಂಡು ನಗೆಯಾಡಿದ್ದಾರೆ. ೧೯-೧೦-೧೯೧೦, ಅವರಿಗೆ ಬಲು ಖುಷಿಕೊಟ್ಟ ದಿನವಾಗಿತ್ತು. ೧೯೮೩ ರಲ್ಲಿ ಅದೇ ದಿನದಂದು ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ 'ನೋಬೆಲ್ ಪ್ರಶಸ್ತಿ' ದೊರೆತಿತ್ತು.[೪]

ಉಲ್ಲೇಖಗಳು